ಮಣಿಪುರದ ಎಲ್ಲ 10 ಕುಕಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ತಮ್ಮ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಐದು ಜಿಲ್ಲೆಗಳಿಗೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಮೇ 3 ರಿಂದ ಈಶಾನ್ಯ ರಾಜ್ಯವು ಕುಕಿಗಳು ಮತ್ತು ಮೀಟೀ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ತತ್ತರಿಸುತ್ತಿರುವ ಕಾರಣದಿಂದ ಕುಕಿ ಶಾಸಕರು ಚುರಾಚಂದ್ಪುರ, ಕಾಂಗ್ಪೋಕ್ಪಿ, ಚಂದೇಲ್, ತೆಂಗ್ನೌಪಾಲ್ ಮತ್ತು ಫರ್ಜಾಲ್ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಾಗಿ ಬೇಡಿಕೆ ಇಟ್ಟಿದ್ದಾರೆ.
ಬಹುಸಂಖ್ಯಾತ ಮೀಟೀಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎನ್ನುವ ಬೇಡಿಕೆಯನ್ನು ವಿರೋಧಿಸಲು ಬುಡಕಟ್ಟು ಸಮುದಾಯಗಳು ಮೇ 3ರಂದು ರ್ಯಾಲಿಯನ್ನು ಆಯೋಜಿಸಿದ ನಂತರ ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೂ 187 ಜನರು ಮೃತಪಟ್ಟು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಬೆಂಕಿ ಹಚ್ಚುವುದು ಮತ್ತು ರಾಜ್ಯದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಹಲವಾರು ಘಟನೆಗಳನ್ನು ವರದಿಯಾಗಿವೆ.
ಈ ಸುದ್ದಿ ಓದಿದ್ದೀರಾ? ನೇಮಕಾತಿ ವೇಳೆ ಮಹಿಳೆಯರ ಎದೆ ಅಳತೆ ಮಾಡುವುದು ಖಾಸಗಿತನದ ಉಲ್ಲಂಘನೆ: ರಾಜಸ್ಥಾನ ಹೈಕೋರ್ಟ್
ಸರ್ಕಾರಿ ನೌಕರರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಕುಕಿ-ಜೋ ಬುಡಕಟ್ಟು ಜನಾಂಗದವರ ಮೇಲೆ ಮೀಟೀ ಸಮುದಾಯವು ಹಿಂಸೆ, ಅತ್ಯಾಚಾರ ಸೇರಿದಂತೆ ಹಲವು ದೌರ್ಜನ್ಯ ನಡೆಸುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ಹತ್ತು ಶಾಸಕರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಈ ಹಿಂಸಾಚಾರದಿಂದಾಗಿ, ನಮ್ಮ ಸಮುದಾಯದ ನೌಕರರು ಸೆಕ್ರೆಟರಿಯೇಟ್ನಲ್ಲಿ ಕೆಲಸ ಮಾಡಲು ಇಂಫಾಲ್ಗೆ ಹೋಗಲು ಭಯಪಡುತ್ತಿದ್ದಾರೆ. ದಕ್ಷ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಐದು ಜಿಲ್ಲೆಗಳಲ್ಲಿ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಳನ್ನು ರಚಿಸಬೇಕೆಂದು ಕುಕಿ ಸಮುದಾಯದ ಶಾಸಕರು ಒತ್ತಾಯಿಸಿದ್ದಾರೆ.
”ನಮ್ಮ ಬುಡಕಟ್ಟುಗಳಿಗೆ ಸೇರಿದ ಐಎಎಸ್ ಮತ್ತು ಎಂಸಿಎಸ್ [ಮಣಿಪುರ ನಾಗರಿಕ ಸೇವೆಗಳು] ಅಧಿಕಾರಿಗಳು ಮತ್ತುಐಪಿಎಸ್ ಮತ್ತು ಎಂಪಿಎಸ್ ಅಧಿಕಾರಿಗಳನ್ನು ಸಹ ಇಲ್ಲಿ ನೇಮಿಸಬೇಕು. ಇಂಫಾಲ್ ಕಣಿವೆಯು ನಮಗೆ ಸಾವಿನ ಕಣಿವೆಯಾಗಿ ಮಾರ್ಪಟ್ಟಿರುವುದರಿಂದ ನಮ್ಮ ಸಮುದಾಯವು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ತಿಳಿಸಿದ್ದಾರೆ.
”ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ನಮ್ಮ ಬುಡಕಟ್ಟು ಸಮುದಾಯದವರ ವಿರುದ್ಧ ನಿತ್ಯವು ಗುಡ್ಡಗಾಡು ಜಿಲ್ಲೆಗಳ ಹಳ್ಳಿಗಳ ಮೇಲೆ ದಾಳಿ ಮಾಡಿಸುವ ಮೂಲಕ ಹಿಂಸಾಚಾರವನ್ನು ಮುಂದುವರೆಸುತ್ತಿದ್ದಾರೆ. ಈ ಕಾರಣದಿಂದ ಸಿವಿಲ್ ಮತ್ತು ಪೊಲೀಸ್ ಇಲಾಖೆಯಲ್ಲಿ ಇತರ ಪ್ರಮುಖ ಉನ್ನತ ಮಟ್ಟದ ಹುದ್ದೆಗಳಿಗೆ ಕುಕಿ ಸಮುದಾಯದವರನ್ನು ನೇಮಿಸಬೇಕು” ಎಂದು ಕುಕಿ ಶಾಸಕರು ಮನವಿ ಮಾಡಿದ್ದಾರೆ.