ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡ ಜಿಲ್ಲೆ ಶಾಂತಿ, ಸುವ್ಯವಸ್ಥೆಯಿಂದ ಕೂಡಿದೆ. ಅಪರಾಧಗಳ ಸಂಖ್ಯೆ ಕಡಿಮೆ ಇದೆ. ಮಾದಕ ವಸ್ತುಗಳ ಮಾರಾಟ, ಪೆಡ್ಲರ್ಗಳ ಸಂಖ್ಯೆ ನಗಣ್ಯವಾಗಿದೆ. ಮುಂದಿನ ಆರು ತಿಂಗಳಲ್ಲಿ ಧಾರವಾಡ ಜಿಲ್ಲೆಯನ್ನು ಮಾದಕ ಮುಕ್ತ ಜಿಲ್ಲೆಯಾಗಿಸಲು ಪ್ರತಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಪಣ ತೊಡಬೇಕು ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. “ಪೊಲೀಸ್ ಇಲಾಖೆಯ ಬಗ್ಗೆ ಸಮಾಜದ ಪ್ರತಿಯೊಬ್ಬರಲ್ಲಿ ಸದಾಭಿಪ್ರಾಯ ಮೂಡಿಸಲು ಇಲಾಖೆಯ ಎಲ್ಲ ಸಿಬ್ಬಂದಿಗಳು ಪ್ರಯತ್ನಿಸಬೇಕು. ಪ್ರತಿ ತಿಂಗಳು ಪ್ರತಿ ಪೊಲೀಸ್ ಠಾಣೆಯಿಂದ ಒಬ್ಬ ಅಧಿಕಾರಿ ಒಂದು ಶಾಲೆಗೆ ಕಡ್ಡಾಯವಾಗಿ ಭೇಟಿ ನೀಡಿ ಶಾಲಾ ಮಕ್ಕಳಲ್ಲಿ ಪೊಲೀಸ್ ಇಲಾಖೆಯ ಕಾರ್ಯ ವೈಖರಿ, ಸರ್ಕಾರದ ಯೋಜನೆಗಳು ಮತ್ತು ಪೋಕ್ಸೋದಂತಹ ಪ್ರಮುಖ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು. ಪೊಲೀಸರೆಂದರೆ ಮಕ್ಕಳು ಭಯ ಪಡದೇ ಪ್ರೀತಿಯಿಂದ ಕಾಣುವಂತಹ ವಾತಾವರಣವನ್ನು ರೂಪಿಸಬೇಕು” ಎಂದರು.
“ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಮೊಬೈಲ್ ಬಳಕೆ, ಪೋಕ್ಸೋ, ಸಂಚಾರ ನಿಯಮಗಳು, ಪೊಲೀಸ್ ನೆರವಿನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸ್ರ ನಡೆ ಜನರ ಕಡೆಗೆ ಆದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದರು.
“ಪೊಲೀಸ್ ಸಿಬ್ಬಂದಿಗಳಿಗೆ ವಸತಿ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಹೊಸ ಪೊಲೀಸ್ ಠಾಣೆ, ಸಿಬ್ಬಂದಿಗಳಿಗಾಗಿ ಹೊಸ ವಸತಿ ಸಮುಚ್ಛಯ ಮತ್ತು ಇತರೆ ಮೂಲಭೂತ ಸೌಲಭ್ಯಗಳಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದ ಹಂತದಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಹೇಳಿದರು.
“ಜನರಿಗೆ ಉತ್ತಮ ಆಡಳಿತ, ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಮತ್ತು ಪೊಲೀಸ್ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ಉತ್ತಮ ಸ್ಪಂದನೆ ನೀಡಿ ನ್ಯಾಯ ಕೊಡಿಸುವ ವಿಶ್ವಾಸವನ್ನು ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸದಾಶಯದಿಂದ ಸರ್ಕಾರದ ಆಶಯಗಳ ಪೂರಕವಾಗಿ ನಡೆಯಬೇಕು. ಮತ್ತು ಜನಪರ ಕೆಲಸಕ್ಕಾಗಿ ಆಡಳಿತ ಯಂತ್ರಕ್ಕೆ ಸಹಕಾರ ನೀಡಬೇಕು” ಎಂದು ಸೂಚಿಸಿದರು.
“ಆಸ್ತಿ ವಿವಾದ, ಹಣಕಾಸಿನ ವ್ಯವಹಾರ, ರಿಯಲ್ ಎಸ್ಟೇಟ್ ದಂತಹ ಪ್ರಕರಣಗಳಲ್ಲಿ ಅತಿ ಆಸಕ್ತಿ ವಹಿಸದೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಮತ್ತು ನಿರ್ಭೀತಿಯ ಬದುಕು ಕಲ್ಪಿಸುವ ಮಹತ್ವದ ಜವಾಬ್ದಾರಿ ಇದೆ. ಇದನ್ನು ಅರಿತು ತಮ್ಮ ತಮ್ಮ ಕರ್ತವ್ಯಗಳನ್ನು ಚಾಚೂ ತಪ್ಪದೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲಿಸಬೇಕು” ಎಂದು ನಿರ್ದೇಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, “ಜಿಲ್ಲೆಯಲ್ಲಿ ವಿವಿಧ ರೀತಿಯ ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ. ಸಣ್ಣ ಪುಟ್ಟ ಪ್ರಕರಣಗಳು ಜರುಗಿದ ತಕ್ಷಣ ಪೊಲೀಸ್ ಇಲಾಖೆ ಸ್ಪಂಧಿಸುವುದರಿಂದ ಪ್ರಕರಣಗಳ ಪತ್ತೆ ಕಾರ್ಯವು ಸುಗಮವಾಗಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಬಹುತೇಕ ನಿಯಂತ್ರಿಸಿದ್ದು, ಇದರಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನ್ಯಾಯಾಲಯದಿಂದ ಕಾನೂನಾತ್ಮಕವಾದ ಕಠಿಣ ಕ್ರಮವನ್ನು ಕೈಗೊಳ್ಳಲು ಅಗತ್ಯ ಸಾಕ್ಷ್ಯ ಮತ್ತು ನೆರವು ನೀಡಲಾಗುತ್ತಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿಗಳು ಸೇರಿದಂತೆ ಸಿಪಿಐ, ಪಿಎಸ್ಐಗಳು ಭಾಗವಹಿಸಿದ್ದರು.