- ಮೇಡಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮಾ. 26 ರಂದು ಅಗ್ನಿ ಅವಘಡ ಸಂಭವಿಸಿತ್ತು
- ಹಾನಿಗೊಳಗಾದ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದೆ
ಮಾರ್ಚ್ 26 ರಂದು ಹೊಸಕೋಟೆ ಸಮೀಪದ ಮೇಡಹಳ್ಳಿ ಗ್ರಾಮದ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅವಘಡದಲ್ಲಿ ಸಿಲುಕಿದ ಎಂಟು ಕಾರ್ಮಿಕರ ಪೈಕಿ ಏಳು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.
ಸನೋಜ್ ಶರ್ಮಾ ಅಕಾ ಸನೋದ್, ಅಮಿತ್ ಕುಮಾರ್ ಮಂಡಲ್, ಚಂದ್ರಪಾಲ್, ತಿಲಕ್ ರಾಮ್, ನೀರಜ್ ಭಾರತಿ, ಲಕ್ಷ್ಮಣ ಮತ್ತು ಸುಮಯಾ ಗುಪ್ತಾ ಅಲಿಯಾಸ್ ಸುಮಯ್ ಮೃತರಾದ ಕಾರ್ಮಿಕರು.
ಎಂಟು ಕಾರ್ಮಿಕರ ಪೈಕಿ ಏಳು ಜನ ಶುಕ್ರವಾರದವರೆಗೆ ಒಬ್ಬರ ನಂತರ ಒಬ್ಬರು ಸಾವನ್ನಪ್ಪಿದ್ದಾರೆ. ಎಂಟನೇ ವ್ಯಕ್ತಿ ನಿಕುನ್ ಅನ್ಸಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಎಂಟು ಜನ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ ಸೇರಿದಂತೆ ನಾನಾ ರಾಜ್ಯಗಳಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದವರು. ಮೇಡಹಳ್ಳಿ ಗ್ರಾಮದ ಕೊಠಡಿಯೊಂದರಲ್ಲಿ ನೆಲೆಸಿದ್ದರು. ಇವರು ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರನ್ನು ಗುತ್ತಿಗೆದಾರ ಅರವಿಂದ್ ಗುಪ್ತಾ ಅವರು ಕೆಲಸಕ್ಕೆ ನೇಮಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐಪಿಎಲ್ ಪಂದ್ಯ : ರಾತ್ರಿ 1ರವರೆಗೆ ಮೆಟ್ರೊ ಅವಧಿ ವಿಸ್ತರಣೆ
ಕೊಠಡಿಯಲ್ಲಿ ಇರಿಸಿದ್ದ ಹಾನಿಗೊಳಗಾದ ಸಿಲಿಂಡರ್ನ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದೆ. ಅಪಘಾತವಾದ ದಿನ ಬೆಳಗ್ಗೆ 3.55ರ ಸುಮಾರಿಗೆ ಎಲ್ಲ ಎಂಟು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಲದಂಡಿ ತಿಳಿಸಿದ್ದಾರೆ.
“ಗುತ್ತಿಗೆದಾರ ಗುಪ್ತಾನನ್ನು ಬಂಧಿಸಿದ್ದೇವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅನೇಕ ಕಾರ್ಮಿಕರನ್ನು ಸಣ್ಣ ಕೋಣೆಯಲ್ಲಿ ಉಳಿಯಲು ಅನುಮತಿಸಿದ ಕಟ್ಟಡದ ಮಾಲೀಕ ಭಾಸ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೂಲಿ ಕಾರ್ಮಿಕರೊಬ್ಬರು ಕೊಠಡಿಯಲ್ಲಿ ಸಿಗರೇಟ್ ಅಥವಾ ಬೀಡಿ ಹಚ್ಚಿರಬಹುದು ಎಂದು ಅನುಗೊಂಡನಹಳ್ಳಿ ಪೊಲೀಸರು ಶಂಕಿಸಿದ್ದಾರೆ.
ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್ಎಸ್ಎಲ್) ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತದ ನಿಖರವಾದ ಕಾರಣದ ಬಗ್ಗೆ ವರದಿ ಸಲ್ಲಿಸಲಿದ್ದಾರೆ.