ರೈತರು ಜಮೀನಿಗೆ ಬರಲು 70-80 ವರ್ಷಗಳಿಂದ ಬಳಸುತ್ತಿದ್ದ ದಾರಿಗೆ ಖಾಸಗಿ ಮತ್ತು ಪ್ರಭಾವಿ ವ್ಯಕ್ತಿಗಳು ಈಗ ಅಡ್ಡಿಪಡಿಸುತ್ತಿದ್ದು, ಕಂದಾಯ ಇಲಾಖೆ ಮತ್ತು ದಾವಣಗೆರೆ ಜಿಲ್ಲಾಡಳಿತ ಕೂಡಲೇ ರೈತರ ಹೊಲಗಳಿಗೆ ದಾರಿಯನ್ನು ಗುರುತಿಸಿ ದಾರಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ನೂರಾರು ರೈತರು, ರಾಜ್ಯ ರೈತ ಸಂಘದ(ವಾಸುದೇವ ಮೇಟಿ) ನೇತೃತ್ವದೊಂದಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿಯವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಮಾತನಾಡಿ, “70-80 ವರ್ಷಗಳಿಂದ ರಿ. ಸರ್ವೇ ನಂ. 15, 16, 19, 65, 66ರಿಂದ 99ರವರೆಗಿನ ನೂರಾರು ಎಕರೆ ಕೃಷಿ ಜಮೀನುಗಳಿಗೆ ಓಡಾಡಲು ಬಳಸುತ್ತಿದ್ದ ದಾರಿಗೆ ಈಗ ಸ.ನಂ. 87ರ ಮಾಲೀಕರಾದ ನಾಗರತ್ನಮ್ಮ ಕೋಂ ರಾಮಚಂದ್ರ ರೆಡ್ಡಿ ಅಡ್ಡಿಪಡಿಸುತ್ತಿದ್ದಾರೆ. ರೈತರಿಗೆ ಓಡಾಡಲು ಬಿಡುತ್ತಿಲ್ಲ. ಅದೇ ದಾರಿಯಲ್ಲಿ 70-80 ವರ್ಷಗಳ ಹಿಂದಿನಿಂದಲೂ ಇದೇ ರೈತರು ಸಂಚಾರ ಮಾಡುತ್ತಿದ್ದಾರೆ. ಈಗ ಕಟಾವಿನ ಕಾಲವಾಗಿರುವುದರಿಂದ ಪ್ರತಿನಿತ್ಯ ಓಡಾಡಲು ರೈತರಿಗೆ ತೊಂದರೆಯಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ಹಿಂದೆ ಅಡ್ಡಿಪಡಿಸಿದ ಕಾರಣಕ್ಕಾಗಿ ಸೂಕ್ತ ದಾರಿಯನ್ನು ಪರಿಶೀಲಿಸಿ ಗುರುತಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು, ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಸರ್ವೆ ಸ್ಕೆಚ್, ಹಿಂಬರಹ, ಸರ್ವೆ ನೋಟಿಸ್ ಈ ರೀತಿಯ ಕಾರ್ಯಗಳು ನಡೆದಿದ್ದವು. ಆದರೆ ಕೆಳಗಿನ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ವೆ ಸ್ಕೆಚ್, ದಾರಿ ಗುರುತಿಸುವ ಕಾರ್ಯವಾಗದೇ ವಿಳಂಬವಾಗುತ್ತಿದೆ. ಈಗ ಕಟಾವಿನ ಕಾಲವಾಗಿರುವುದರಿಂದ ಬೆಳೆದ ಬೆಳೆಯನ್ನು ಮನೆಗೆ ತರಲು ರೈತರಿಗೂ ಕೂಡ ತೊಂದರೆಯಾಗುತ್ತಿದೆ. ತಾವುಗಳು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ದಾರಿಯನ್ನು ಗುರುತಿಸಿ ರೈತರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ” ಎಂದು ರೈತರ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಮನವಿ ನೀಡುವ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮತ್ತು ರೈತರಾದ ಶಿವಶಂಕರಪ್ಪ ಅಂಜಿನಪ್ಪ, ಬಸವರಾಜ ,ವಾಗೀಶ, ರಮೇಶ್, ಅನಿಲ್ ಕುಮಾರ, ಶ್ರೀನಿವಾಸ ರೆಡ್ಡಿ, ಸುನಿಲ್, ಮಲ್ಲಿಕಾರ್ಜುನ, ಮಲ್ಲೇಶ್ ಪೂಜಾರ, ಲೋಕೇಶ್ ದೊಣ್ಣೆಹಳ್ಳಿ ಮಧು ಕ ಎಸ್, ಎಚ್ ಸಿ ಶರಣಪ್ಪ, ಬಿ ಎಲ್ ಶ್ರೀನಿವಾಸ ರೆಡ್ಡಿ, ಕೃತಿಕ, ನಾಡಿಗರ ಮಹಾಲಿಂಗಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.