ಕರ್ನಾಟಕದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದೇವರಾಜ ಅರಸ್ ಅವರ ಕೊಡುಗೆ ಅಪಾರವಾಗಿದೆ. ಅವರ ಸಾಮಾಜಿಕ ನ್ಯಾಯಕ್ಕಾಗಿ ಅವರ ಬದ್ಧತೆಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿವೆ ಎಂದು ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಅಭಿಪ್ರಾಯಪಟ್ಟರು.
ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ದಿ. ದೇವರಾಜ ಅರಸರವರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, “ದೂರದೃಷ್ಟಿಯ ನಾಯಕತ್ವ ಮತ್ತು ಪ್ರಗತಿಪರ ನೀತಿಗಳು ಅರಸು ಅವರದ್ದಾಗಿದ್ದು, ಇಂದಿಗೂ ರಾಜ್ಯದ ರಾಜಕೀಯ ಮೇಲೆ ಪ್ರಭಾವ ಬೀರುತ್ತಿವೆ. ದೇವರಾಜ ಅರಸ್ ಅವರ ಪರಂಪರೆಯು ಭವಿಷ್ಯದ ನಾಯಕರು ಮತ್ತು ನೀತಿ ನಿರೂಪಕರಿಗೆ ಸಮಗ್ರ ಮತ್ತು ಸಮಾನ ಸಮಾಜಕ್ಕಾಗಿ ಶ್ರಮಿಸಲು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ” ಎಂದರು.
ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಎಚ್. ಮಹಾನಂದಿ ಮಾತನಾಡಿ, “1973ರಲ್ಲಿ ಮೈಸೂರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡುವುದು ಅವರು ತೆಗೆದುಕೊಂಡ ಕೆಲವು ಮಹತ್ವದ ನಿರ್ಧಾರಗಳಲ್ಲಿ ಒಂದು. ಡಿ. ದೇವರಾಜ ಅರಸರು ರಾಜ್ಯ ಕಂಡ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ಅವರ ನೇತೃತ್ವದ ಭೂಸುಧಾರಣೆಗಳು, ಅದರಲ್ಲಿ ಭೂಮಿಯನ್ನು ಊಳುವವನೇ ಮಾಲೀಕನಾಗುವುದು ಐತಿಹಾಸಿಕ ನಿರ್ಣಯ. ಇದು ಶ್ರೀಮಂತ ಮತ್ತು ಬಡವರ ನಡುವಿನ ಕಂದಕವನ್ನು ಕಡಿತಗೊಳಿಸಿ, ಸಾಮಾಜಿಕ ಅಸಮಾನತೆಯನ್ನು ತೊಲಗಿಸಿತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಚಿವ ಸಂಪುಟ ಸಭೆ | ಹೊಸದಾಗಿ ನಿರ್ಮಾಣವಾಗಲಿರುವ ಇಂದಿರಾ ಕ್ಯಾಂಟೀನ್ ಊಟದ ದರ ಹೆಚ್ಚಳ
ಸಮಾರಂಭದಲ್ಲಿ ಕಾಲೇಜಿನ ಬೋಧಕರಾದ ಇಮಾಮ್ ಸಾಬ್, ಮಲ್ಲಿಕಾರ್ಜುನ ಬ್ಯಾಲಹುಣಸಿ ಮಾತನಾಡಿದರು. ಬೋಧಕ ಸಿಬ್ಬಂದಿ ವೆಂಕಟೇಶ, ಈಶಪ್ಪ ಮೇಟಿ, ವೀರಭದ್ರಪ್ಪ, ಬಸವರಾಜ ಕರುಗಲ್, ವಿಜಯಕುಮಾರ್ ಕುಲಕರ್ಣಿ, ಪೀರಾವಲಿ, ಮಹೇಶ್, ಗ್ರಂಥಪಾಲಕಿ ಗೌತಮಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಗೋಣಿಬಸಪ್ಪ ನಿರೂಪಿಸಿದರು. ಪ್ರದೀಪ್ ಪಲ್ಲೇದ್ ವಂದಿಸಿದರು.