ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದ ಅತಿಥಿ ಶಿಕ್ಷಕರು ಬಳ್ಳಾರಿ ಜಿಲ್ಲೆಯ ಕುರುಗೋಡುನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 43,159, ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ಪ್ರತಿ ವರ್ಷ ಸರ್ಕಾರ ನೇಮಕಮಾಡಿಕೊಳ್ಳುತ್ತಿದೆ. ಹತ್ತನ್ನೇರಡು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ವೇತನ ಹೆಚ್ಚಿಸಬೇಕು, ಸೇವಾ ಭದ್ರತೆ ಒದಗಿಸಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮಗೆ ಯಾವುದೇ ತರಹದ ಉದ್ಯೋಗ ಭದ್ರತೆಯಾಗಲಿ, ಕನಿಷ್ಠ ವೇತನವಾಗಲಿ ಇಲ್ಲ. ಕೇವಲ 9, 10 ತಿಂಗಳು ಸೇವೆ ಸಲ್ಲಿಸಿದ ನಂತರ ಬೇರೆ ಕೆಲಸಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಪ್ರಾಥಮಿಕ ಶಾಲೆಯಲ್ಲಿ10,000 ರೂ. ಮತ್ತು ಪ್ರೌಢಶಾಲೆಗಳಲ್ಲಿ 10,500 ರೂ. ವೇತನ ಸಿಗುತ್ತಿದೆ. ಈ ಹಣದಿಂದ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ಸರ್ಕಾರವು ತಮಗೆ ಬೇಕಾದ ಸಮಯದಲ್ಲಿ ನೇಮಕ ಮಾಡಿಕೊಂಡು ಮಾರ್ಚ್ 31ಕ್ಕೆ ಬಿಡುಗಡೆ ಮಾಡುತ್ತದೆ. ಈ ಪದ್ಧತಿಯಿಂದ ನಮಗೆ ಉದ್ಯೋಗವಿಲ್ಲದೆ ತೊಂದರೆಗೆ ಒಳಗಾಗುತ್ತೇವೆ” ಎಂದು ಅಳಲು ತೋಡಿಕೊಂಡಿದ್ದಾರೆ.
“ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದರಿಂದ ಮಾನಸಿಕವಾಗಿ ನೊಂದಿದ್ದೇವೆ. ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್ ರಾಮಪ್ಪ , ಗಂಗಾ , ಮಾರೆಣ್ಣ , ಎರ್ರಿ ಸ್ವಾಮಿ ಇನ್ನಿತರರು ಇದ್ದರು.