- ಒಂದು ದಿನವಲ್ಲ ಒಂದು ತಿಂಗಳು ಸಮಯ ನೀಡುತ್ತೇವೆ
- ‘ನಮ್ಮ ಪಕ್ಷ ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ’
ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, “ಬಿ ಎಲ್ ಸಂತೋಷ್ ಅವರಿಗೆ ಒಂದು ಸವಾಲು, ಒಂದು ದಿನವಲ್ಲ ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ” ಎಂದು ಸವಾಲು ಹಾಕಿದ್ದಾರೆ.
“ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು ತಾಕತ್ತು ಇದೆಯೇ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?
“ನಮ್ಮ ಸರ್ಕಾರ ರಚನೆಯಾಗಿ ನೂರು ದಿನಗಳು ಕಳೆದಿವೆ. ನೂರು ದಿನಗಳಲ್ಲಿ ನೂರಾರು ಜನಪರ ಯೋಜನೆಗಳು, ನಿರ್ಧಾರಗಳೊಂದಿಗೆ ಮುನ್ನಡೆಯುತ್ತಿದ್ದೇವೆ. ಆದರೆ ಬಿಜೆಪಿಗೆ ನೂರು ದಿನಗಳು ಕಳೆದರೂ ಮೂರು ನಾಯಕರನ್ನು ಆಯ್ಕೆ ಮಾಡಲಾಗಿಲ್ಲ; ‘ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ವಿಪಕ್ಷ ನಾಯಕ’ ನೂರು ದಿನಗಳಾದರೂ ಈ ಮೂರು ಹುದ್ದೆಗೆ ನಾಯಕರು ಸಿಗದಷ್ಟು ರಾಜಕೀಯ ದಿವಾಳಿತನ ಎದುರಿಸುತ್ತಿದೆಯೇ ಬಿಜೆಪಿ? ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರಿಗೆ ಈ ಮೂರು ಹುದ್ದೆಗಳಿಗೆ ನೇಮಕದ ಗ್ಯಾರಂಟಿ ಇಲ್ಲದಿರುವುದು ದುರಂತ!” ಎಂದು ಟೀಕಿಸಿದ್ದಾರೆ.