ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮದುವೆ, ನಿವೃತ್ತಿ ವೇತನ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ ಮತ್ತು ಅಂತಿಮ ಸಂಸ್ಕಾರ ಸೇರಿದಂತೆ ಹಲವು ಸಹಾಯಧನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕಟ್ಟಡ ಕಾರ್ಮಿಕರು ಮತ್ತು ಕಲ್ಲು ಕ್ವಾರಿ ಕಾರ್ಮಿಕರು ಆರೋಪಿಸಿದರು.
ಕಟ್ಟಡ ಕಾರ್ಮಿಕರು ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಮುಖಂಡರ ನಿಯೋಗವು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕ ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, “ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಕೂಡಲೇ ಸಹಾಯಧನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು” ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಎಚ್ ಜಿ ಉಮೇಶ್ ಮಾತನಾಡಿ, “ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಮಂತ್ರಿಗಳು, ಕಾರ್ಮಿಕರಿಗೆ ಹಲವು ರೀತಿಯ ಕಿಟ್ಟುಗಳನ್ನು ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ದುರುಪಯೋಗ ಮಾಡಿದ್ದಾರೆ. ಸಾಲದೆಂಬಂತೆ ಆರೋಗ್ಯ ತಪಾಸಣೆಯ ನೆಪದಲ್ಲಿ ಒಂದು ಜಿಲ್ಲೆಗೆ 10 ಕೋಟಿ ರೂ.ಗಳಂತೆ ಬಿಡುಗಡೆ ಮಾಡಿ, ಅದರಲ್ಲಿ ಶೇ.40 ರಿಂದ ಶೇ.45ರಷ್ಟು ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ” ಎಂದು ಆರೋಪಿಸಿದರು.
“ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿರುವ ಕಾರ್ಮಿಕ ಮಂತ್ರಿಗಳೂ ಹಿಂದಿನ ಬಿಜೆಪಿ ಸರ್ಕಾರದ ಚಾಳಿಯನ್ನೇ ಅನುಸರಿಸುತ್ತಿದ್ದು, 31 ಜಿಲ್ಲೆಗಳಿಗೆ 310 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಕಮಿಷನ್ ಕಬಳಿಸಲು ಹುನ್ನಾರ ನಡೆಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಮೂರು ವರ್ಷಗಳಿಂದ ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿವೃತ್ತಿ ವೇತನ, ಮಕ್ಕಳ ಮದುವೆಗೆ ಸಹಾಯಧನ, ಆಸ್ಪತ್ರೆ ವೆಚ್ಚದಂತಹ ಯಾವುದೇ ಸಹಾಯಧನಗಳೂ ಬಿಡುಗಡೆಯಾಗುತ್ತಿಲ್ಲ. ಅಲ್ಲದೆ ಖಾಸಗಿ ಆರೋಗ್ಯ ಸಂಸ್ಥೆಗಳೊಂದಿಗೆ ಶಾಮಿಲಾಗಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವ ಹೊಂದಾಣಿಕೆಯ ಯೋಜನೆ ನಡೆಸಿದೆ. ಇದನ್ನು ಕೂಡಲೇ ತಡೆಯಬೇಕು” ಎಂದು ಆಗ್ರಹಿಸಿದರು.
“ಕಾಂಗ್ರೆಸ್ ಸರ್ಕಾರಕ್ಕೆ ಕಟ್ಟಡ ಕಾರ್ಮಿಕರ ಮೇಲೆ ಒಂದು ವೇಳೆ ಕಾಳಜಿ ಇದ್ದರೆ ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿನ ಇಎಸ್ಐ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಹೋಬಳಿ ಮಟ್ಟದಲ್ಲಿರುವ ಪಿಎಚ್ಸಿಗಳನ್ನು ಹೊಂದಾಣಿಕೆ ಮಾಡಿಕೊಂಡು ನಗದುರಹಿತ ಚಿಕಿತ್ಸೆ ನೀಡಲು ನಿರ್ದೇಶನ ನೀಡಬೇಕು” ಎಂದು ಆಗ್ರಹಿಸಿದರು.
“ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ದುರುಪಯೋಗ ತಡೆಯಲು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಸರ್ಕಾರಕ್ಕೆ ಮಸಿ ಬಳಿಯುವಂತಹ ಈ ಕಾರ್ಯಕ್ರಮವನ್ನು ಕೂಡಲೇ ತಡೆಹಿಡಿಯಬೇಕು” ಎಂದು ಮನವಿ ಮಾಡಿದರು.
“ರಾಜ್ಯದಲ್ಲಿ ಮಾಹಿತಿಯ ಪ್ರಕಾರ 15 ರಿಂದ 20 ಲಕ್ಷ ಮಂದಿ ಕಟ್ಟಡ ಕಾರ್ಮಿಕರು ಇದ್ದಾರೆ. ಕಾರ್ಮಿಕ ಇಲಾಖೆಯ ಈಗಿನ ಮಾಹಿತಿ ಪ್ರಕಾರ 48 ಲಕ್ಷ ಮಂದಿ ಕಟ್ಟಡ ಕಾರ್ಮಿಕರು ನೋಂದಣಿ ಆಗಿದ್ದಾರೆ. ಹಾಗಾಗಿ ಕೂಡಲೇ ಬೋಗಸ್ ಕಾರ್ಡುದಾರರನ್ನು ತಡೆಹಿಡಿಯುವ ಜತೆಗೆ ನಕಲಿ ಗುರುತಿನ ಚೀಟಿ ನೀಡಿದ ಸಂಸ್ಥೆಗಳು, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿಶ್ವ ಶಾಂತಿಗಾಗಿ ಅಂತಾರಾಷ್ಟ್ರೀಯ ಸಂಘರ್ಷ ದಿನ ಆಚರಣೆ: ಎಐಯುಟಿಯುಸಿ
“ಕಟ್ಟಡ ಕಾರ್ಮಿಕರಿಗೆ ಅವಶ್ಯಕವೇ ಅಲ್ಲದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ ಇರುವ ಹಣವನ್ನು ಖಾಲಿ ಮಾಡಿ ಶಾಶ್ವತವಾಗಿ ಮಂಡಳಿಯನ್ನು ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ. ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ಕರೆದು ಚರ್ಚಿಸಬೇಕು. ಈ ವಿಚಾರವಾಗಿ ವಿಳಂಬ ಮಾಡಿದರೆ ಕರ್ನಾಟಕ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ವಿ ಲಕ್ಷ್ಮಣ್, ಎಂ ಹನುಮಂತಪ್ಪ, ಮುರುಗೇಶ್, ತಿಪ್ಪೇಶ್, ನೇತ್ರಾವತಿ, ಸುರೇಶ್, ಮುದಹದಡಿ ಸುರೇಶ್ ಇದ್ದರು.