ಸಮಾಜದಲ್ಲಿ ಬಡವರ ಮೇಲಿನ ಶೋಷಣೆ ನಿಲ್ಲಬೇಕು. ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಒತ್ತು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಶಿಸ್ತುಬದ್ಧ ಕಾರ್ಯನಿರ್ವಹಣೆಗೆ ಮುಂದಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ತಾಲೂಕು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಡವರ ಕಲ್ಯಾಣಕ್ಕೆ ಬದ್ಧ ಸರ್ಕಾರವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಅಪ್ರಾಮಾಣಿಕ ಆಡಳಿತವನ್ನು ಸರ್ಕಾರ ಸಹಿಸುವುದಿಲ್ಲ” ಎಂದು ಸಭೆಯಲ್ಲಿ ಎಚ್ಚರಿಸಿದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡವರ ಬದುಕಿನಲ್ಲಿ ಅಗಾಧ ಬದಲಾವಣೆ ತರುವ ಕಾರ್ಯ ಮಾಡಿದೆ. ಪಂಚ ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಎಲ್ಲ ಯೋಜನೆಗಳೂ ತಾಲೂಕಿನ ಪ್ರತಿ ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪಬೇಕು. ಈ ನಿಟ್ಟಿನಲ್ಲಿ ಆಡಳಿತವರ್ಗ ನಿರಂತರ ಕಾರ್ಯದ ಮೂಲಕ ಶ್ರಮಿಸಬೇಕು” ಎಂದರು.
ಗ್ಯಾರಂಟಿ ಯೋಜನೆಗಳ ಕುರಿತು ಪ್ರಗತಿ ವರದಿಯನ್ನು ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ಸಭೆಗೆ ಮಾಹಿತಿ ಒದಗಿಸಿದರು.
“ಶಕ್ತಿ ಯೋಜನೆಯು ಮಹಿಳೆಯರ ಉಚಿತ ಸಾರಿಗೆ ಕಲ್ಪಿಸುವ ಯೋಜನೆಯಾಗಿದ್ದು, ತಾಲೂಕಿನಲ್ಲಿ ನಿತ್ಯವೂ ಸರಾಸರಿ 6,043 ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದರ ಟಿಕೆಟ್ ಮೌಲ್ಯ 1.30 ಲಕ್ಷ ಆಗಲಿದೆ. ಜೂನ್ ಮಾಹೆಯಲ್ಲಿ 1,00,789 , ಜುಲೈ ಮಾಹೆಯಲ್ಲಿ 1.82 ಲಕ್ಷ, ಅಗಸ್ಟ್ ಮಾಹೆಯಲ್ಲಿ 1.78 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟಾರೆ 4.61 ಲಕ್ಷ ಮಹಿಳೆಯರು ಈವರೆಗೂ ಪ್ರಯಾಣಿಸಿದ್ದು, ಶೂನ್ಯ ಟಿಕೆಟ್ ನೀಡಿದ ಒಟ್ಟು ಮೊತ್ತ 1.05 ಕೋಟಿ ರೂ.ಗಳಾಗಿದೆ” ಎಂದರು.
“ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ 22,041 ಅರ್ಹ ಫಲಾನುಭವಿಗಳಿದ್ದು 20,498 ಫಲಾನುಭವಿಗಳು ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯ ಪಡೆದಿರುತ್ತಾರೆ. 1,543 ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯ ನಡೆದಿದ್ದು, ಅವರೂ ಕೂಡ ಸೆಪ್ಟೆಂಬರ್ ಮಾಹೆಯಲ್ಲಿ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ” ಎಂದು ತಿಳಿಸಿದರು.
“ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 23,314 ಪಡಿತರ ಚೀಟಿಯ ಅರ್ಹ ಫಲಾನುಭವಿಗಳಿದ್ದಾರೆ. ಇದರಲ್ಲಿ 2,999 ಅಂತ್ಯೋದಯ ಹಾಗೂ 20,415 ಬಿಪಿಎಲ್ ಪಡಿತರದಾರರನ್ನು ಒಳಗೊಂಡಿದೆ. 18,281 ಪಡಿತರ ಚೀಟಿದಾರರ 62,579 ಫಲಾನುಭವಿಗಳು ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಅರ್ಹರಾಗಿದ್ದಾರೆ. ಅವರೆಲ್ಲರಿಗೂ ಜುಲೈ ಮಾಹೆಯಲ್ಲಿ 1.39 ಕೋಟಿ, ಅಗಸ್ಟ್ ಮಾಹೆಯಲ್ಲಿ 1.41 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. 3,114 ಪಡಿತರದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ. ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದ್ದು, ಈಗಾಗಲೇ 1,800 ಪಡಿತರದಾರರಿಗೆ ಇರುವ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು, ಸೆಪ್ಟೆಂಬರ್ ಮಾಹೆಯ ಸಹಾಯಧನ ನೀಡಲಾಗುವುದು” ಎಂದರು.
“ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಒಡತಿಗೆ ಪ್ರತಿ ತಿಂಗಳು 2000 ನಗದು ನೀಡುವ ಯೋಜನೆಯಾಗಿದೆ. ತಾಲೂಕಿನಲ್ಲಿ 25124 ಪಡಿತರ ಚೀಟಿದಾರರಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 22,436 ಪಡಿತರದಾರರು ಅರ್ಜಿ ಸ್ವೀಕೃತಿಯಾಗಿದ್ದು ಈ ಪೈಕಿ 22,367 ಪಡಿತರದಾರರಿಗೆ ಗೃಹ ಲಕ್ಷ್ಮೀ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಅವರೆಲ್ಲರಿಗೂ ತಲಾ 2000 ರಂತೆ 4.47 ಕೋಟಿ ರೂ. ಪಾವತಿಸಲಾಗಿದೆ. ಇನ್ನೂ 2500 ಪಡಿತರ ಚೀಟಿದಾರರಿಗೆ ಯೋಜನೆಯ ಸೌಲಭ್ಯ ತಲುಪಬೇಕಿದ್ದು ಈ ಕಾರ್ಯವನ್ನು ಸೆಪ್ಟೆಂಬರ್ 20 ರೊಳಗಾಗಿ ಪೂರ್ಣಗೊಳಿಸಲಾಗುವುದು.
“ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಚಿವ ಎಚ್ ಕೆ ಪಾಟೀಲ ಅವರು ಗೃಹಜ್ಯೋತಿ ಯೋಜನೆಯು ಅರ್ಹರೆಲ್ಲರಿಗೂ ತಲುಪಬೇಕು. ಅಧಿಕಾರಿಗಳು ಶೇ. 100 ರಷ್ಟು ಗುರಿ ಸಾಧಿಸಬೇಕು. ತಾಲೂಕಿನಲ್ಲಿ, ಸೋಲಾರ್, ವಿಂಡ್ ಪವರ್ ಜನರೇಟ್ಗೆ ವಿಫುಲ ಅವಕಾಶಗಳಿವೆ. ಇಲ್ಲಿನ ರೈತರಿಗೆ ಈ ಬಗ್ಗೆ ಸರಿಯಾದ ಅರಿವು ಮೂಡಿಸುವ ಕಾರ್ಯವಾಗಬೇಕು” ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಪಡಿತರ ಅಂಗಡಿಗಳ ಕುರಿತಂತೆ ತಾಲೂಕಿನಲ್ಲಿರುವ 49 ಹಳ್ಳಿಗಳಲ್ಲಿಯೂ ಸರ್ಕಾರದ ನಿಯಮಾನುಸಾರ ಪಡಿತರ ಅಂಗಡಿಗಳಾಗಬೇಕು. ಅಕ್ಟೋಬರ್ 2 ರೊಳಗಾಗಿ ಪಡಿತರ ಅಂಗಡಿ ತೆರೆಯಬೇಕು. ಸೆಪ್ಟೆಂಬರ್ 20ರೊಳಗಾಗಿ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯದ ಯೋಜನೆಯ ಉಳಿದ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆಗಿರುವ ಅಡಚಣೆ ನಿವಾರಿಸಿ ವರದಿ ಸಲ್ಲಿಸಬೇಕು” ಎಂದು ತಿಳಿಸಿದರು.
ಸಭೆಯಲ್ಲಿ ಬಿತ್ತನೆ ಬೀಜ, ಗೊಬ್ಬರಗಳ ಸರಬರಾಜು, ವಿದ್ಯುತ್ ಸರಬರಾಜು, ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಆಡಳಿತ ವ್ಯವಸ್ಥೆ ಶಿಸ್ತುಬದ್ಧ ಹಾಗೂ ಬಿಗಿಯಾಗಿರಬೇಕು. ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆಯನ್ನು ಅಧಿಕಾರಿಗಳು ಹೊಂದಬೇಕು ಎಂದು ಹೇಳಿದರು.
ಸಿಸಿಟಿವಿ, ಬಯೋಮೆಟ್ರಿಕ್ : ಶಿರಹಟ್ಟಿ ತಾಲೂಕಿನ ಎಲ್ಲ ತಾಲೂಕು ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಗೂ ಬಯೋಮೆಟ್ರಿಕ್ ಹಾಜರಾತಿಗಿ ವ್ಯವಸ್ಥೆ ಜಾರಿಯಾಗಬೇಕು. ಈ ಮೂಲಕ ಜನಸಾಮಾನ್ಯರಿಗೆ ಪಾರದರ್ಶಕ ಆಡಳಿತ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ತಲುಪಬೇಕು. ಜನಸಾಮಾನ್ಯರು ವಿನಾಕಾರಣ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸಿಸಿಟಿವಿ ಹಾಗೂ ಬಯೋಮೆಟ್ರಿಕ್ ಉಪಕರಣಗಳು ಅಗತ್ಯವಾಗಿವೆ” ಎಂದರು.
ಸಂಪದ್ಭರಿತ ಶಿರಹಟ್ಟಿ: ಶಿರಹಟ್ಟಿ ತಾಲೂಕು ನೈಸರ್ಗಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕವಾಗಿ ಸಂಪದ್ಭರಿತವಾಗಿದೆ. ವರವಿಯ ಮೌನೇಶ, ಹೊಳಲಮ್ಮ ದೇವಸ್ಥಾನ, ಶ್ರೀಮಂತಗಡ, ಕೋಮುಸೌಹಾರ್ದತೆ ಪ್ರತೀಕ ಫಕೀರೇಶ್ವರ ಮಠ, ಅಗಾಧ ಸಸ್ಯ ಸಂಪದ್ಭರಿತ ನೈಸರ್ಗಿಕ ಪ್ರಕೃತಿಯನ್ನು ಶಿರಹಟ್ಟಿ ತಾಲೂಕಿನ ಒಡಲಲ್ಲಿ ಅಡಗಿದೆ. ತಾಲೂಕು ವ್ಯಾಪ್ತಿ ಚಿಕ್ಕದಾಗಿದ್ದು ಅದನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬರಗಾಲ ಘೋಷಣೆ: ಸೆ.4ರಂದು ತೀರ್ಮಾನ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆ, ಬಟ್ಟೂರು ಕೆರೆಗೆ ನೀರು ತುಂಬಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಮುಂದಾದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಎ ಎ ಕಂಬಾಳಿಮಠ, ಉಪವಿಭಾಗಾಧಿಕಾರಿ ಡಾ ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯತ್ ಅಧಿಕಾರಿ ಚಳಗೇರಿ ಸೇರಿದಂತೆ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು, ತಾಲೂಕು ಮಟ್ಟದ ಹಲವು ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.