- ಸುರತ್ಕಲ್ನ ಕಳವಾರು ಬಳಿ ಮುಸ್ಲಿಂ ಯುವಕನಿಗೆ ಚೂರಿ ಇರಿತ
- ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು
ಸುರತ್ಕಲ್ನ ಕಳವಾರು ಬಳಿ ಭಾನುವಾರ ಸಂಜೆ ಮುಸ್ಲಿಂ ಯುವಕನೋರ್ವನ ಮೇಲೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಳವಾರು ಬೆಂಕಿನಾಥೇಶ್ವರ ದೇವಸ್ಥಾನ ಬಳಿಯ ನಿವಾಸಿ ಪ್ರಶಾಂತ್ ಯಾನೆ ಪಚ್ಚು(28), ಕಳವಾರು ಆಶ್ರಯಕಾಲನಿ ನಿವಾಸಿ ಧನರಾಜ್(23) ಹಾಗೂ ಕಳವಾರು ಚರ್ಚ್ ಗುಡ್ಡೆ ಸೈಟ್ ನಿವಾಸಿ ಯಜೇಶ್(22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಉಳಿದವರಿಗಾಗಿ ಸುರತ್ಕಲ್ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಏನಿದು ಘಟನೆ?
ಆಗಸ್ಟ್ 31ರಂದು ಕಳವಾರಿನಲ್ಲಿ ಗಲಾಟೆ ನಡೆದು, ಗಂಟೆ ರಿಯಾಝ್ ಎಂಬಾತನ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸರು ಭಾನುವಾರ (ಸೆ.3ರಂದು) ಶಾಂತಿ ಸಭೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡುವುದಿದೆ ಎಂದು ಅಬ್ದುಲ್ ಸಫ್ರಾನ್ ಎಂಬಾತನನ್ನು ಆರೋಪಿಗಳು ಕರೆದಿದ್ದರು.
ಈ ಹಿನ್ನೆಲೆಯಲ್ಲಿ ಅಬ್ದುಲ್ ಸಫ್ರಾನ್ ತನ್ನ ಸ್ನೇಹಿತ ಮುಹಮ್ಮದ್ ಸಫ್ಲಾನ್ ಜೊತೆ ಭಾನುವಾರ ಸಂಜೆ 7:30ರ ವೇಳೆಗೆ ಕಳವಾರು ಗೆಳೆಯರ ಬಳಗ ಬಸ್ ನಿಲ್ದಾಣದ ಬಳಿ ಬೈಕಿನಲ್ಲಿ ಹೋಗುತ್ತಿರಬೇಕಾದರೆ ಎದರುಗಡೆಯಿಂದ ಆರೋಪಿಗಳಾದ ಪ್ರಶಾಂತ್ ಮತ್ತು ಧನರಾಜ್ ಎಂಬವರು ಬೈಕ್ ನಿಂದ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮುಂದುವರಿದು, ಆರೋಪಿ ಧನರಾಜ್ ಮಾರಕಾಸ್ತ್ರದಿಂದ ಅಬ್ದುಲ್ ಸಫ್ರಾನ್ ನ ಕಣ್ಣಿಗೆ ಬಲವಾಗಿ ಹೊಡೆದಿದ್ದಾನೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಮೇಕೆ ಕಳವು ಶಂಕೆ; ದಲಿತ ವ್ಯಕ್ತಿಯ ತಲೆಕೆಳಕಾಗಿ ನೇತು ಹಾಕಿ ಅಮಾನುಷ ಹಲ್ಲೆ
ಮತ್ತೊಬ್ಬ ಆರೋಪಿ ಪ್ರಶಾಂತನು ಡ್ರಾಗರ್ ಚೂರಿಯಿಂದ ಸಂತ್ರಸ್ತನ ಬಲ ಕಂಕುಳಿಗೆ ತಿವಿದಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಇತರ ಆರೋಪಿಗಳ ಪೈಕಿ ಕಳವಾರು ಗಣೇಶ ಎಂಬಾತ ಸಫ್ರಾನ್ ನ ಬಲ ಕೈ ತೋಳಿಗೆ ಚೂರಿಯಿಂದ ಇರಿದಿದ್ದು ಯಜೇಶ ಎಂಬಾತ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದಾನೆ. ರಕ್ಷಣೆಗೆ ಬಂದ ಸ್ನೇಹಿತ ಮುಹಮ್ಮದ್ ಸಫ್ಘಾನ್ ನನ್ನು ಆರೋಪಿಗಳಾದ ಪುನೀತ್, ಗಣೇಶ್, ಪ್ರದೀಪ್ ಹಾಗೂ ಇತರರು ರಕ್ಷಣೆಗೆ ಬಾರದಂತೆ ಹೊಡೆದು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಸಾರ್ವಜನಿಕರು ಸೇರಲು ಆರಂಭಿಸಿದಾಗ ಆರೋಪಿಗಳು ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತ ಅಬ್ದುಲ್ ಸಫ್ಘಾನ್ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಿಂದ ಅಬ್ದುಲ್ ಸಫ್ರಾನ್ ಅವರ ಬಲ ಕಂಕುಳ, ಕಣ್ಣು, ಬೆನ್ನು ಮತ್ತು ಬಲಗೈ ತೋಳಿಗೆ ಗಾಯಗಳಾಗಿವೆ.
ಆಗಸ್ಟ್ 31ರಂದು ಕಳವಾರಿನಲ್ಲಿ ನಡೆದ ಗಲಾಟೆಯಲ್ಲಿ ಗಂಟೆ ರಿಯಾಝ್ ನೊಂದಿಗೆ ಅಬ್ದುಲ್ ಸಫ್ರಾನ್ ಸೇರಿಕೊಂಡಿದ್ದಾನೆ ಎಂಬ ಶಂಕೆಯಿಂದ ಹಲ್ಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.