ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯು ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳ ಉಪಟಳದಿಂದಾಗಿ ಭಾಷಾ ಸಮಸ್ಯೆ, ಗಡಿ ತಕರಾರುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ ಕನ್ನಡ ಪರ ಹೋರಾಟಗಾರರ ಹೋರಾಟದ ಫಲವಾಗಿ ಬೆಳಗಾವಿಯ ವಡಗಾಂವಿದಲ್ಲಿ ‘ಗಡಿ ಕನ್ನಡ ಭವನ’ ನಿರ್ಮಾಣ ಮಾಡಲಾಗಿತ್ತು. ಆದರೆ, ಆ ಭವನ ಕನ್ನಡಿಗರ ಬಳಕೆಗೆ ದೊರೆಯದೆ, ಅನುಪಯುಕ್ತವಾಗಿದೆ. ಮಾತ್ರವಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಗಡಿ ತಕರಾರುಳಿಂದ ದೇಶದಲ್ಲಿ ಹೆಚ್ಚು ಸುದ್ಧಿಯಾದ ಜಿಲ್ಲೆ ಬೆಳಗಾವಿ. ಈ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಿದ್ದು, ಮಹಾರಾಷ್ಟ್ರಕ್ಕೇ ಸೇರಬೇಕು ಎಂದು ಎಂಇಎಸ್ ಉದ್ದಟತನ ತೋರುತ್ತಿದೆ. ಅದೆಲ್ಲವನ್ನೂ ಮೆಟ್ಟಿ ಕನ್ನಡಿಗರು ಕನ್ನಡದ ಅಸ್ಮಿತೆಯನ್ನು ಜಿಲ್ಲೆಯಲ್ಲಿ ಉಳಿಸಿ, ಬೆಳೆಸುತ್ತಿದ್ದಾರೆ. ಅದರ ಭಾಗವಾಗಿ, 2005ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದರು.
ಆ ಬಳಿಕ, ಬರೊಬ್ಬರಿ 8 ವರ್ಷಗಳ ಬಳಿಕ ಭವನ ನಿರ್ಮಾಣವಾಯಿತು. ಅದಾದ ಮೇಲೂ 2 ವರ್ಷಗಳ ನಂತರ 2015ರಲ್ಲಿ ಭವನವನ್ನು ಉದ್ಘಾಟಿಸಲಾಗಿತ್ತು. ಉದ್ಘಾಟನೆಯ ಸಮಯದಲ್ಲಿಯೂ ಮಹರಾಷ್ಟ್ರ ಬೆಂಬಲಿತ ಕೆಲವು ಸಂಘಟನೆಗಳು ದಾಂಧಲೆ ನಡೆಸಿದ್ದವು. ಅಷ್ಟೆಲ್ಲ ಸಮಸ್ಯೆಗಳ ನಡುವೆಯೂ ತಲೆ ಎತ್ತಿದ ಭವನ, ಉದ್ಘಾಟನೆಗೊಂಡು ಒಂದು ದಶಕ ಕಳೆಯುವುದಕ್ಕೂ ಮುನ್ನವೇ ಅನುಪಯುಕ್ತವಾಗಿರುವುದು ವಿಪರ್ಯಾಸ.
ವಡಗಾಂವಿಯಲ್ಲಿ ನಿರ್ಮಾಣವಾಗಿರುವ ಗಡಿ ಕನ್ನಡ ಭವನದಲ್ಲಿ ಕೆಲವು ಸಮುದಾಯಗಳು ತಮ್ಮ ಸಭೆ ಸಮಾರಂಭಗಳನ್ನು ನಡೆಸಲು ಇಚ್ಚಿಸಿದರೂ, ಸರಿಯಾದ ನಿರ್ವಹಣೆ ಇಲ್ಲದೆ, ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕನ್ನಡ ಸಂಬಂಧಿತ ಸಭೆ-ಸಮಾರಂಭಗಳಿಗೂ ಈ ಭವನ ಬಳಕೆಯಾಗುತ್ತಿಲ್ಲ. ಹೀಗಾಗಿ, ನಾಲ್ಕೈದು ಕಿ.ಮೀ ದೂರದಲ್ಲಿರುವ ಕನ್ನಡ ಸಾಹಿತ್ಯ ಭವನವನ್ನೇ ಎಲ್ಲರೂ ಆಶ್ರಯಿಸುವ ಅನಿವಾರ್ಯತೆ ಉಂಟಾಗಿದೆ. ಗಡಿ ಕನ್ನಡ ಭವನ ಧೂಳು, ಕಸ, ಗಿಡ-ಗಂಟಿಗಳಿಂದ ತುಂಬಿ ಹೋಗಿದೆ. ರಾತ್ರಿ ವೇಳೆ ಕುಟುಕರ ತಾಣವಾಗಿದೆ.
ಈ ಸುದ್ದಿ ಓದಿದ್ದೀರಾ?: ‘ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ?’; ಜಿಲ್ಲೆಯ ಜನರು ಹೇಳ್ತಿರೋದೇನು ಗೊತ್ತೇ?
ಭವನದ ಸಮಸ್ಯೆ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಜಲಧಾರೆ ಕಾವೇರಿ ಕನ್ನಡ ಸಂಘಟನೆಯ ಮುಖಂಡ ಬಲರಾಮ ಸಂಗೋಳ್ಳಿ, “2015ರಲ್ಲಿ ಉದ್ಘಾಟನೆ ಮಾಡಿದ ಗಡಿ ಕನ್ನಡ ಭವನ ಕನ್ನಡಿಗರ ಉಪಯೋಗಕ್ಕೆ ಬರುತ್ತಿಲ್ಲ. ಹೆಸರಿಗೆ ಮಾತ್ರ ಗಡಿ ಕನ್ನಡ ಭವನ ಆಗಿದ್ಧು, ಕನ್ನಡಿಗರಿಂದಲೇ ದೂರ ಉಳಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಕನ್ನಡಿಗರ ಉಪಯೋಗಕ್ಕೆ ದೊರೆಯುವಂತೆ ಮಾಡಬೇಕು” ಎಂದು ಆಗ್ರಹಿಸಿದರು.
ನೇಕಾರ ಸಮುದಾಯದ ಮುಖಂಡ ಶಂಕರ ಢವಳಿ ಮಾತನಾಡಿ, “ನಾವು ಕಾರ್ಯಕ್ರಮ, ಸಮಾರಂಭಗಳನ್ನು ಮಾಡಲು ದೂರದ ಕನ್ನಡ ಸಾಹಿತ್ಯ ಭವನಕ್ಕೆ ಹೋಗಬೇಕಾಗುತ್ತದೆ. ಹೋರಾಟ ಮಾಡಿ ನಿರ್ಮಾಣ ಮಾಡಿದ ಕನ್ನಡ ಭವನದಲ್ಲಿ ಸಭೆ ಸಮಾರಂಭಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲಿ ಸಂಜೆಯಾಗುತ್ತಲೇ ಅನೈತಿಕ ಚಟುವಟಿಕೆ, ಕುಡುಕರು ಹಾಗೂ ಜೂಜು ಕೋರರ ಅಡ್ಡೆಯಾಗುತ್ತದೆ. ಆದ್ದರಿಂದ ಭವನವನ್ನು ಸ್ವಚ್ಛಗೊಳಿಸಿ, ಜನ ಬಳಕೆಗೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.