- ಗಾಂಧೀಜಿಯನ್ನು ಕೊಂದ ಮನಸ್ಥಿತಿಯೇ ಗೌರಿಲಂಕೇಶ್, ಕಲ್ಬುರ್ಗಿಯವರನ್ನೂ ಕೊಂದಿದೆ: ಸಿಎಂ
- ಗೌರಿ ಲಂಕೇಶ್ ಸಮಾಜದಲ್ಲಿ ದನಿ ಇಲ್ಲದವರ ದನಿಯಾಗಿದ್ದರು ಎಂದ ಮುಖ್ಯಮಂತ್ರಿ
ಗೌರಿ ಲಂಕೇಶ್ ಅವರು ಹತ್ಯೆಯಾಗಿ 6 ವರ್ಷಗಳು ಕಳೆದಿವೆ. ಅವರ ಹತ್ಯೆ ಪ್ರಕರಣದ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅವರ ಹತ್ಯೆಯಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೌರಿ ಆಶಯಗಳ ಜೊತೆಗಿರುವ ಎಲ್ಲರೂ ನಿಟ್ಟುಸಿರು ಬಿಡುವಂತಹ ತೀರ್ಪು ಬರುತ್ತದೆ ಎಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಗೌರಿ ಲಂಕೇಶ್ ಅವರು ಪತ್ರಕರ್ತೆ ಎಂಬುದಕ್ಕಿಂತ ಅವರೊಬ್ಬರು ಹೋರಾಟಗಾರ್ತಿ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಲ ನನ್ನನ್ನು ಭೇಟಿ ಮಾಡಿದ್ದರು. ಅವರು ಯಾವತ್ತೂ ಕೂಡ ವೈಯಕ್ತಿಕ ವಿಚಾರಗಳಿಗಾಗಿ ಭೇಟಿ ಮಾಡಿದವರಲ್ಲ. ನಮಗೆ ಸಹಾಯಮಾಡಿ, ಕುಟುಂಬಕ್ಕೆ ಸಹಾಯ ಮಾಡಿ, ಪತ್ರಿಕೆಗೆ ಸಹಾಯ ಮಾಡಿ ಎಂದವರಲ್ಲ. ಅವರು ಯಾವಾಗ ಭೇಟಿ ಮಾಡಿದರೂ ಕೋಮು ಸೌಹಾರ್ದತೆ, ರೈತರು, ಆದಿವಾಸಿಗಳ ಬಗ್ಗೆ ಮಾತನಾಡುತ್ತಿದ್ದರು. ಎಲ್ಲ ವರ್ಗದ ಧ್ಗಿವನಿಯಾಗಿ ಕೆಲಸ ಮಾಡುತ್ತಿದ್ದರು” ಎಂದು ನೆನಪಿಸಿಕೊಂಡರು.

“ಎಲ್ಲೇ ಅನ್ಯಾಯವಾದರೂ ಆ ಅನ್ಯಾಯವನ್ನು ಪ್ರತಿಭಟಿಸುವ, ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಗೌರಿ ಲಂಕೇಶ್ ಮಾಡುತ್ತಿದ್ದರು. ಇಂದು ಗೌರಿ ಲಂಕೇಶ್ ಹತ್ಯೆಯಾಗಿ ನಮ್ಮನ್ನು ಅಗಲಿದ್ದಾರೆ. ಅವರು ಬದುಕಬೇಕಿತ್ತು. ಅವರು ಕುಟುಂಬಕ್ಕಾಗಿ ಅಲ್ಲ, ಸಮಾಜದಲ್ಲಿ ಧ್ವನಿ ಇಲ್ಲದೆ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾವುದಕ್ಕೆ ಗೌರಿ ಲಂಕೇಶ್ ಅವರು ಬದುಕಿರಬೇಕಿತ್ತು. ಅವರ ನೆನಪು ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ನಮಗೆಲ್ಲರಿಗೂ ಗೌರವ” ಎಂದರು.

“ಗೌರಿ ಲಂಕೇಶ್, ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಅವರನ್ನು ಹತ್ಯೆ ಮಾಡಿದವರು ಮಹಾತ್ಮ ಗಾಂಧಿಯವರನ್ನು ಕೊಂದ ಮನಸ್ಥಿತಿಯವರು. ಕೋಮು ಸೌದಾರ್ದತೆಗಾಗಿ ಗಾಂಧೀಜಿ ಹೋರಾಟ ಮಾಡಿದ್ದರು. ಭಾರತ ದೇಶದಲ್ಲಿ ಇರುವ ಯಾರೂ ಕೂಡ ಭೇದ ಮಾಡಬಾರದು. ಒಟ್ಟಾಗಿ ಬದುಕಬೇಕು ಎಂಬುದನ್ನು ಗಾಂಧೀಜಿ ಪ್ರತಿಪಾದನೆ ಮಾಡಿದರು. ಅದನ್ನು ಕೋಮುವಾದಿಗಳಿಗೆ ಸಹಿಸಲು ಆಗುತ್ತಿರಲಿಲ್ಲ. ಕೋಮುವಾದಿ ಶಕ್ತಿಗಳು ಮಹಾತ್ಮ ಗಾಂಧಿಯವರನ್ನು ಕೊಂದರು. ಅದೇ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನೂ ಕೊಂದಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅಸಹಿಷ್ಣುತೆ ದೇಶವನ್ನು ಆಳುತ್ತಿದೆ: ಶೈಲಜಾ ಟೀಚರ್
“ಇಡೀ ದೇಶದಲ್ಲಿ ಯಾರೇ ಕೋಮುವಾದಿಗಳ ವಿರುದ್ಧ ಧ್ವನಿ ಎತ್ತಿದರೂ, ಅವರಿಗೆ ಎದುರಿಸುವುದು, ಪತ್ರ ಬರೆಯುವುದು, ಜೀವ ಬೆದರಿಕೆ ಹಾಕುತ್ತಾನೆ. ಪ್ರಕಾಶ್ ರೈ ಹೇಳಿದಂತೆ ನಮ್ಮ ಭಯವೇ ಕೋಮುವಾದಿಗಳಿಗೆ ಶಕ್ತಿ. ನೀವ್ಯಾರೂ ಕೋಮುವಾದಿಗಳಿಗೆ ಹೆದರಬಾರದು. ನಿಮ್ಮೆಲ್ಲರ ಹೋರಾಟದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಸಂವಿಧಾನ ಉಳಿಯಬೇಕೆಂಬ ಮನಸ್ಸುಗಳು ನಮಗೆ ಶಕ್ತಿಯನ್ನು ಕೊಟ್ಟಿದ್ದಾರೆ. ನಮಗೆ ಶಕ್ತಿಯನ್ನು ನೀಡಿದವರ ಕನಸು ನುಚ್ಚುನೂರಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಭರವಸೆ ನೀಡಿದರು.
“ವಿಚಾರವಾದಿಗಳಿಗೆ, ಕೋಮುವಾದಿ ಶಕ್ತಿಗಳ ವಿರುದ್ಧ ಮಾತನಾಡುವವರಿಗೆ, ಬೆದರಿಕೆ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಿದ್ದೇನೆ. ಮೈಸೂರಿನಲ್ಲಿ ಒಂದು ಘಟಕ ಮಾಡಿದ್ದೇವೆ. ನೈತಿಕ ಪೊಲೀಸ್ಗಿರಿ ಮಾಡುವವರ ವಿರುದ್ದ ಕ್ರಮ ಜರುಗಿಸುತ್ತೇವೆ” ಎಂದರು.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಭಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿ, 500 ಕ್ಕೂ ಹೆಚ್ವು ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥ ಆಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದರು.