ನಾವು ಯಾವುದೇ ರಂಗದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸಾಕ್ಷರತೆ ಅತಿ ಅವಶ್ಯಕವಾಗಿದೆ. ಎಲ್ಲರೂ ಸಾಕ್ಷರರಾಗಬೇಕು. ಶಿಕ್ಷಣದ ಮಹತ್ವವನ್ನು ಸಾರುವ ದಿನವೇ ಅಂತರಾಷ್ಟ್ರೀಯ ಸಾಕ್ಷರತಾ ದಿನವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ ಎಲ್ ವೈಶಾಲಿ ಹೇಳಿದರು.
57ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಕ್ಷರತಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ ಎ ರಡ್ಡೇರ ಮಾತನಾಡಿ, “ನಾವು ಸಾಕ್ಷರತೆಯ ಬಗ್ಗೆ ಬಹಳಷ್ಟು ಮುತುವರ್ಜಿ ವಹಿಸಿ ಸಾಕ್ಷರತೆಯ ಕಾರ್ಯ ನಿರ್ವಹಿಸಬೇಕು. ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಸಂಪನ್ಮೂಲ ವ್ಯಕಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ನ ಹಿರಿಯ ಹಾಗೂ ಕಿರಿಯ ಉಪನ್ಯಾಸಕರು ಜಿಲ್ಲೆಯ ಶಾಲಾ ಬಿಸಿಯೂಟ ಸಿಬ್ಬಂದಿಗಳಲ್ಲಿ ಮತ್ತು ಶಾಲಾ ಅಭಿವೃದ್ಧಿ ವೀಕ್ಷಣಾ ಸಮಿತಿ ಸದಸ್ಯರಲ್ಲಿ ಅನಕ್ಷರಸ್ಥರು ಇದ್ದರೆ ಅಂತಹವರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡಲು ನಮ್ಮ ಹಂತದಲ್ಲಿ ಪ್ರಯತ್ನಿಸಬೇಕು” ಎಂದು ತಿಳಿಸಿದರು.
ಡಯಟ್ ಪ್ರಾಚಾರ್ಯ ಜಿ ಎಲ್ ಬಾರಾಟಕ್ಕೆ ಮಾತನಾಡಿ, “ವಿದ್ಯಾವಂತರು ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಬೇಕು. ಜನರು ಸ್ವಾವಲಂಬಿಯಾಗಿ ಬದುಕಲು ಸಾಕ್ಷರತೆ ಒಂದು ಊರುಗೋಲು ಇದ್ದಂತೆ” ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್ ಎಸ್ ಕುರಿಯವರ ಸಾಕ್ಷರತೆ ಕುರಿತು ಪ್ರಾಸ್ತಾವಿಕವಾಗಿ ಮಾತಾನಾಡಿ, “ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯಿತಿ ಸಾಕ್ಷರತಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಲಿಂಕ್ ಡಾಕ್ಯೂಮೆಂಟ್ ಜನಶಿಕ್ಷಣ ನಿಲಯ ಯೋಜನೆಯಡಿಯ ಮೂಲ ಸಾಕ್ಷರತಾ ಕಾರ್ಯಕ್ರಮ ಮತ್ತು ರಾಷ್ಟ್ರ ಮಟ್ಟದ ನವಭಾರತ ಸಾಕ್ಷರತಾ ಕಾರ್ಯಕ್ರಮಗಳನ್ನು ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಯಶಸ್ವಿಗೊಳಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯುವಜನರ ಧನಾತ್ಮಕ ಚಿಂತನೆ ದೇಶದ ಬೆಳವಣಿಗೆಗೆ ಅವಶ್ಯಕ: ಎಸ್ಪಿ ಉಮಾ ಪ್ರಶಾಂತ್
ಸಾಕ್ಷರತಾ ಧ್ವಜಾರೋಣಹಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರು, ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕದ ಅಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಮನ್ವಯಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಡಿ.ಸಿ.ಪಾವಟೆ ಬಿ.ಎಡ್.ಮಹಾವಿದ್ಯಾಲಯದ ಉಪನ್ಯಾಸಕರು ಸೇರಿದಂತೆ ಇತರರು ಇದ್ದರು.