- ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸಲ್ಲಿಸಿದ ಅರ್ಜಿ ತಿರಸ್ಕೃತ
- ಜಿಲ್ಲಾಡಳಿತಕ್ಕೆ ಸೂಚಿಸಿ ಅನುಮತಿ ನೀಡಲು ಜೋಶಿ ಆಗ್ರಹ
ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬಾರದು ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಧಾರವಾಡ ಹೈಕೋರ್ಟ್’ನಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿದೆ.
ಈ ಮೂಲಕ ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿ ಕಿತ್ತೂರು ಚೆನ್ನಮ್ಮ(ಈದ್ಗಾ)ದಲ್ಲಿ ಈ ಬಾರಿಯೂ ಗಣೇಶ ಪ್ರತಿಷ್ಠಾಪನೆ ಮಾಡಲು ಧಾರವಾಡ ಹೈಕೋರ್ಟ್ ಅಸ್ತು ಎಂದಿದ್ದು, ನ್ಯಾ. ಸಚಿನ್ ಮಗದುಮ್ಮ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ಈ ಮೂಲಕ ಎರಡನೆ ವರ್ಷವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದೆ.
ಅರ್ಜಿ ತಿರಸ್ಕಾರಗೊಂಡ ವಿಷಯ ಬೆಲ್ಲದ್ ಅವರು ಹೇಳುತ್ತಿದ್ದಂತೆ, ಪಾಲಿಕೆ ಆವರಣದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣೇಶಮೂರ್ತಿ ಹೊತ್ತು ಘೋಷಣೆ ಕೂಗಿದರು.
ಜಿಲ್ಲಾಡಳಿತಕ್ಕೆ ಸೂಚಿಸಿ: ಜೋಶಿ
“ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಅಂಜುಮನ್ -ಏ- ಇಸ್ಲಾಂ ಸಂಸ್ಥೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈಗಾಗಲೇ ಕಳೆದ ವರ್ಷ ನ್ಯಾಯಾಲಯದ ಅನುಮತಿಯಂತೆ ಗಣಪತಿ ಪ್ರತಿಷ್ಠಾಪಿಸಿ ಅತ್ಯಂತ ಶಾಂತಿಯುತವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ರಾಜ್ಯ ಸರಕಾರ ಜಿಲ್ಲಾಡಳಿತದ ಮೂಲಕ ಚೆನ್ನಮ್ಮ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿ ನೀಡದೆ ಹಬ್ಬಕ್ಕೆ ಅಡ್ಡಿಪಡಿಸುತ್ತಿತ್ತು. ಈಗ ಹೈಕೋರ್ಟ್ ಅಂಜುಮನ್ -ಏ- ಇಸ್ಲಾಂ ಸಂಸ್ಥೆ ಪಾಲಿಕೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ತಕ್ಷಣವೇ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿ ಅನುಮತಿ ನೀಡಬೇಕು” ಎಂದು ಸಂಸದ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದು, “ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅಂಜುಮನ್ ಸಂಸ್ಥೆ ಸಲ್ಲಿಸಿದ ಅರ್ಜಿ ಕಳೆದ ವರ್ಷದಂತೆ ಈ ವರ್ಷವೂ ಕೋರ್ಟ್’ನಲ್ಲಿ ತಿರಸ್ಕೃತಗೊಂಡಿದ್ದು, ಪಾಲಿಕೆ ಆಸ್ತಿ ಎಂದು ಘೋಷಿಸಿದೆ. ಪಾಲಿಕೆಗೆ ಸಂಪೂರ್ಣ ಅಧಿಕಾರ ನೀಡಿದ್ದು, ಆಯುಕ್ತರು ಕೂಡಲೇ ಅನುಮತಿ ನೀಡಬೇಕು” ಎಂದು ಒತ್ತಾಯಿಸಿದರು.
‘ಪಾಲಿಕೆ ಆಯುಕ್ತರು ವಿಳಂಬ ಮಾಡಬಾರದು’
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, “ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಕೋರ್ಟ್ ತಿರಸ್ಕರಿಸಿದ್ದು, ಸತ್ಯಕ್ಕೆ ದೊರೆತ ಜಯ. ಈ ಕುರಿತು ಅಂಜುಮನ್ ಸಂಸ್ಥೆ ಪದೇ ಪದೇ ಅಡ್ಡಗಾಲು ಹಾಕುವುದು ಸರಿಯಲ್ಲ. ಇದೀಗ ಪಾಲಿಕೆ ಆಯುಕ್ತರು ವಿಳಂಬ ಮಾಡದೆ ಅನುಮತಿ ನೀಡಬೇಕು” ಎಂದರು.
ಶ್ರೀರಾಮಸೇನೆಯ ಪ್ರಮೋದ ಮುತಾಲಿಕ್ ಮಾತನಾಡಿ, ”ಕೋರ್ಟ್’ಲ್ಲಿ ಅರ್ಜಿ ತಿರಸ್ಕಾರವಾಗಿದ್ದು ಹಿಂದೂ ಸಂಸ್ಕೃತಿಗೆ ದೊರೆತ ಜಯ. ವಿರೋಧಿಸುವುದಕ್ಕೂ ರೀತಿ, ನೀತಿಗಳಿವೆ. ಇಂದಿನ ಕೋರ್ಟ್ ನಿರ್ಧಾರ, ವಿರೋಧಿಗಳ ಕಪಾಳಕ್ಕೆ ಹೊಡೆದಂತಿದೆ” ಎಂದು ಹೇಳಿದರು.