ಗೌರಿ-ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ನಗರದ ಹಲವು ಪ್ರದೇಶಗಳಲ್ಲಿ ಗಣೇಶನನ್ನು ಕೂಡಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬೆಂಗಳೂರು ಪೊಲೀಸರು ಮುಂದಾಗಿದ್ದು, ಜನರು ಪಾಲಿಸಬೇಕಾದ ಕೆಲವು ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರದ ಪೊಲೀಸ್ ಆಯುಕ್ತ ದಯಾನಂದ್, “ಎಲ್ಲ ಗೌರಿ-ಗಣೇಶ ಸಮಿತಿಗಳಿಗೆ, ಗಣೇಶ ಮೂರ್ತಿಗಳ ಸಾರ್ವಜನಿಕ ಪ್ರತಿಷ್ಠಾಪನೆಗೆ ಸೂಕ್ತ ಪರವಾನಗಿಗಳನ್ನು ಪಡೆಯಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಾರ್ವಜನಿಕವಾಗಿ ಬಲವಂತದ ಮತ್ತು ಅಕ್ರಮ ಮಾರ್ಗವಾಗಿ ಹಣ ಸಂಗ್ರಹಿಸಬಾರದು” ಎಂದು ಸೂಚನೆ ನೀಡಿದರು.
- ಸ್ಥಳೀಯ ಪೊಲೀಸ್ ಠಾಣೆಯ ಅನುಮತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಇದು ಕಡ್ಡಾಯ.
- ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್ ಹಾಕಲು ವಿಶೇಷ ಅನುಮತಿ ಪಡೆಯಬೇಕು.
- ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಅವಕಾಶವಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ಗುರುತಿಸಲು ಪಾಲಿಕೆ ಜತೆ ಕೈಜೋಡಿಸಿ
- ಮೆರವಣಿಗೆ ವೇಳೆ ಅಹಿಕತರ ಘಟನೆ ನಡೆದರೆ ಅದಕ್ಕೆ ಸಂಘಟಕರೇ ಹೊಣೆಯಾಗುತ್ತಾರೆ.
- ಕಾರ್ಯಕ್ರಮ ನಡೆಯುವ ಜಾಗದಲ್ಲಿ ಆಯೋಜಕರು ಬೆಂಕಿ ನಂದಿಸುವ ಸಾಮಗ್ರಿಗಳು, ಸಿಸಿಟಿವಿ ಸೇರಿದಂತೆ ಅಗತ್ಯ ವಸ್ತುಗಳನ್ನು ಇಟ್ಟುಕೊಂಡಿರಬೇಕು.
- ಕಟ್ಟಿಗೆ, ಉರುವಲು, ಸೀಮೆಎಣ್ಣೆ ಸೇರಿದಂತೆ ಬೆಂಕಿ ಅವಘಡಕ್ಕೆ ಸಂಬಂಧಿಸಿದ ಯಾವುದೇ ಸಾಮಗ್ರಿಗಳನ್ನು ಮೂರ್ತಿ ಸ್ಥಾಪನೆ ಮಾಡಿರುವ ಜಾಗದಲ್ಲಿ ಇಡಬಾರದು.
- ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯಿಂದ ಎನ್ಓಸಿ ಕಡ್ಡಾಯ.
- ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶ.
- ಡಿಜೆ ಸೌಂಡ್ ಬಳಕೆಗೆ ಅವಕಾಶವಿಲ್ಲ.
- ಮೆರವಣಿಗೆ ಸಮಯದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧ.
- ಗಣಪನ ವಿಸರ್ಜನೆ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು.