ಕೃಷ್ಣರಾಜಪುರದಿಂದ ಗರುಡಾಚಾರ್ಪಾಳ್ಯ ನಡುವೆ ಸೆ.21 ರಂದು ಇಡೀ ದಿನ ನಮ್ಮ ಮೆಟ್ರೋ ರೈಲು ಸಂಚಾರ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮ, “ಸೆ.21 ರಂದು ಕೃಷ್ಣರಾಜಪುರದಿಂದ ಗರುಡಾಚಾರ್ಪಾಳ್ಯ ನಡುವೆ ಪೂರ್ಣ ದಿನ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದೇ ದಿನ ಬೈಯಪ್ಪನಹಳ್ಳಿ ಮತ್ತು ಇಂದಿರಾನಗರ ನಡುವೆ ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ” ಎಂದು ಹೇಳಿದೆ.
“ಸೆ.21 ರಂದು ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸಲಿದ್ದಾರೆ. ಮೆಟ್ರೋ ರೈಲು ಕಾರ್ಯಾಚರಣೆಗಳಲ್ಲಿ ಬದಲಾವಣೆ ಮಾಡಲಾಗಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ; ತಂಬಾಕು ಉತ್ಪನ್ನ ಖರೀದಿ ವಯೋಮಿತಿ 21 ವರ್ಷಕ್ಕೆ ಏರಿಕೆ: ದಿನೇಶ್ ಗುಂಡೂರಾವ್
“ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರ್ ಪಾಳ್ಯ ನಡುವೆ ಪೂರ್ಣ ದಿನ ಹಾಗೂ ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಮೆಟ್ರೋ ರೈಲು ಸೇವೆ ಲಭ್ಯವಿರಲಿದೆ. ಮಧ್ಯಾಹ್ನ 1.30 ವರೆಗೆ ಮತ್ತು ಸಂಜೆ 4.30 ಗಂಟೆಯ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳು ಎಂದಿನಂತೆ ರಾತ್ರಿ 11 ರವರೆಗೆ ಲಭ್ಯವಿರಲಿವೆ” ಎಂದು ಹೇಳಿದೆ.
ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಆದ ಬದಲಾವಣೆಯನ್ನು ಗಮನಿಸಬೇಕು. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ನಿಗಮ ವಿಷಾದಿಸಿದೆ.