ಬೆಳಗಾವಿಯಲ್ಲಿ ಸೆ.28ರಂದು ಗಣೇಶ ವಿಸರ್ಜನಾ ಮೆರವಣಿಗೆಯು ಯಾವುದೇ ರೀತಿಯ ತೊಡಕಾಗದಂತೆ ನಡೆಯಬೇಕೆಂಬ ಉದ್ದೇಶದಿಂದ ಮುಸ್ಲಿಂ ಮುಖಂಡರು ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಮುಂದೂಡಿದ್ದಾರೆ. ಆ ಮೂಲಕ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಮತ್ತೊಂದು ಮೈಲುಗಲ್ಲು ಇಟ್ಟಿದ್ದಾರೆ.
ಬುಧವಾರ ಬೆಳಗಾವಿಯ ಮುಸ್ಲಿಂ ಮತ್ತು ಜಮಾತ್ ಸಂಘಟನೆಯ ಮುಖಂಡರು ಹಾಗೂ ಬೆಳಗಾವಿ ಉತ್ತರ ಶಾಸಕ ರಾಜು ಸೇಠ್ ಸಭೆ ನಡೆಸಿದ್ದು, ನಗರದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಯಾವುದೇ ಧಕ್ಕೆಯಾಗಬಾರದೆಂದು ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಿದ್ದಾರೆ. ಅಕ್ಟೋಬರ್ 1 ರಂದು ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಮುಸ್ಲಿಂ ಸಮುದಾಯದ ನಿರ್ಧಾರವನ್ನು ಬೆಳಗಾವಿ ಗಣೇಶ ಮಂಡಳಿಯ ಮುಖಂಡರು ಮತ್ತು ಸಾರ್ವಜನಿಕರು ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
ಬೆಳಗಾವಿ ನಗರ ಸೂಕ್ಷ್ಮ ಪ್ರದೇಶವಾಗಿದ್ಧು, ಈ ಹಿಂದೆ ಅನೇಕ ಬಾರಿ ಹಿಂದು-ಮುಸ್ಲಿಂ ಸಮುದಾಯದ ನಡುವೆ ಗಲಾಟೆಗಳು ನಡೆದಿದ್ದವು. ಈ ಬಾರಿ, ಅಂತಹ ಆವುದೇ ಘಟನೆಗಳು ನಡೆಯಬಾರದೆಂದು ಮುಸ್ಲಿಂ ಮುಖಂಡರು ಎಚ್ಚರಿಕೆ ವಹಿಸಿದ್ದಾರೆ. ತಮ್ಮ ಹಬ್ಬದ ಆಚರಣೆಯನ್ನೇ ಮುಂದೂಡಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ, ಶಾಸಕ ರಾಜು ಸೇಠ್, “ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ, ಎಲ್ಲ ಜಮಾತ್ ಧರ್ಮಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಕಾರಣಕ್ಕೆ ಈದ್ ಮಿಲಾದ್ ಮೆರವಣಿಗೆ ಮುಂದೂಡಲಾಗಿದೆ. ಹಿಂದೂದಗಳ ಗಣೇಶೋತ್ಸವ ಮೆರವಣಿಗೆಗೆ ನಾವೂ ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ಬೆಳಗಾವಿಯಲ್ಲಿ ನಿರ್ಮಾಣವಾಗುತ್ತದೆ” ಎಂದು ತಿಳಿಸಿದ್ಧಾರೆ
ಜಮಾತ್ ಸಂಘಟನೆಯ ಮುಖಂಡರಾದ ಯಾಸಿನ್ ಮಖಾನಂದಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಈದ್ ಮಿಲಾದ್ ಹಬ್ಬದ ಮೆರವಣಿಗೆ 2 ದಿನಗಳ ಕಾಲ ಮುಂದೂಡಿದ್ದೇವೆ. ಅಕ್ಟೋಬರ್ 1 ರಂದು ಈದ್ ಮೆರವಣಿಗೆ ನಡೆಯುತ್ತದೆ” ಎಂದು ತಿಳಿಸಿದ್ಧಾರೆ.