ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘವು ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದುದು. ಸಹಕಾರ ಸಂಘದ ಸೌಲಭ್ಯಗಳನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ ರಾಘವೇಂದ್ರ ನಾಯರಿ ಕರೆ ನೀಡಿದರು.
ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
“ಪ್ರಸ್ತುತ ದಿನಮಾನದಲ್ಲಿ ಹಣಕಾಸು ಸಂಸ್ಥೆ ನಡೆಸುವುದು ತುಂಬಾ ಕಷ್ಟಕರವಾಗಿರುವಾಗ ಕಾರ್ಮಿಕ ಸಂಘವೊಂದು ತನ್ನ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಹಕಾರ ಸಂಘವನ್ನು ಮುನ್ನೆಡೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯ. ಕಾರ್ಮಿಕರು ತಮ್ಮ ಕಷ್ಟಾರ್ಜಿತದ ಉಳಿತಾಯದ ಹಣವನ್ನು ಈ ಸಹಕಾರ ಸಂಘದಲ್ಲಿ ಠೇವಣಿ ಇಡುವುದರ ಮೂಲಕ, ದಿನವಹಿ ಪಿಗ್ಮಿ ಕಟ್ಟುವುದರ ಮೂಲಕ ಹೆಚ್ಚಿನ ವ್ಯವಹಾರವನ್ನು ಮಾಡಬೇಕು. ಜೊತೆಗೆ ತಮ್ಮ ಕಷ್ಟ ಕಾಲದಲ್ಲಿ ಸಹಕಾರ ಸಂಘದಿಂದ ಸಾಲವನ್ನು ಪಡೆದು ಸರಿಯಾದ ಸಮಯದಲ್ಲಿ ಅದರ ಮರುಪಾವತಿ ಮಾಡಬೇಕು. ಹಾಗಾದಲ್ಲಿ ಮಾತ್ರ ಸಹಕಾರ ಸಂಘಗಳು ಉಳಿಯಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಹಾಗೂ ಸಹಕಾರ ಸಂಘದ ಅಧ್ಯಕ್ಷ ಎಚ್ ಜಿ ಉಮೇಶ್ ಅವರಗೆರೆ ಮಾತನಾಡಿ, “ಕಾರ್ಮಿಕರಿಗಾಗಿ ಈ ಸಹಕಾರ ಸಂಘವನ್ನು ಸ್ಥಾಪಿಸಿದ್ದೇವೆ. ಸಹಕಾರ ಸಂಘ ಸ್ಥಾಪನೆಯಾಗಿ 8 ವರ್ಷದ ಬಳಿಕ 2022-23 ರ ಸಾಲಿನಲ್ಲಿ ಲಾಭ ದಾಖಲಿಸುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶೋಷಿತರಿಗೆ ಭೂಮಿ, ಮೂಲ ಸೌಕರ್ಯ ಪೂರೈಕೆಗೆ ದಸಂಸ ಆಗ್ರಹ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಕಾರ್ಮಿಕ ಮುಖಂಡರುಗಳಾದ ಆನಂದರಾಜ್, ಮೊಹಮದ್ ಭಾಷಾ, ಗುಡಿಹಳ್ಳಿ ಹಾಲೇಶ್, ಸಹಕಾರ ಸಂಘದ ಉಪಾಧ್ಯಕ್ಷ ಪಿ ಕೆ ಲಿಂಗರಾಜ್, ನಿರ್ದೇಶಕರುಗಳಾದ ವಿ ಲಕ್ಷ್ಮಣ್, ಟಿ ಭೀಮಾ ರೆಡ್ಡಿ, ಡಿ ಷಣ್ಮುಗಂ, ಜಿ ಆರ್ ನಾಗರಾಜ್, ಸೈಯದ್ ಗೌಸ್ಪೀರ್, ಶಿವಕುಮಾರ್ ಡಿ ಶೆಟ್ಟರ್, ಹಾಲಮ್ಮ, ಮುರುಗೇಶ್ ಎಸ್, ಸಿದ್ದಲಿಂಗಪ್ಪ್ ಎಸ್.ಎಂ., ಎಂ.ಮುತ್ತೇಶ್, ಫಯಾಜ್ ಅಹ್ಮದ್ ಹಾಗೂ ಕಾರ್ಯದರ್ಶಿ ಕೆ ಆಶಾ, ಸಿಬ್ಬಂದಿಗಳಾದ ಯು.ವಿಶಾಲಾಕ್ಷಿ, ಎಸ್.ಕವಿತಾ ಹಾಗೂ ಬಿ.ಸಿ.ಹರೀಶ್ ಇದ್ದರು.