ಹಾಲಮಠದ ಪರಂಪರೆ ಹಾಳುಗೆಡವಿದ ಅಭಿನವ ಸ್ವಾಮೀಜಿ

Date:

Advertisements
ಹಾಲುಮಠದ ಪರಂಪರೆಯೇ ಬಹುತ್ವಕ್ಕೆ ಹೆಸರುವಾಸಿ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ಹಿನ್ನೆಲೆಯ ಜನಸಮೂಹ ಈ ಮಠಕ್ಕೆ ನಡೆದುಕೊಂಡು ಬರುತ್ತಿತ್ತು. ಆದರೆ ಹಾಲುಮಠದಲ್ಲಿ ಅಭಿನವ ಸ್ವಾಮೀಜಿ ಅಧಿಕಾರ ಹಿಡಿದ ಮೇಲೆ ಎಲ್ಲವೂ ಬದಲಾಗುತ್ತಾ ಹೋಯಿತು. ದ್ವೇಷ ಭಾಷಣಕಾರರ ಸಾಲಿನಲ್ಲಿ ಸ್ವಾಮೀಜಿ ಕಾಣಿಸಿಕೊಳ್ಳತೊಡಗಿದರು.

ವಿಜಯನಗರ ಜಿಲ್ಲೆಯ  ಹಿರೇಹಡಗಲಿಯಲ್ಲಿರುವ ಹಾಲ ಸಂಸ್ಥಾನ ಮಠ ಈಗ ಚರ್ಚೆಯಲ್ಲಿದೆ. ಇಲ್ಲಿನ ಅಭಿನವ ಸ್ವಾಮೀಜಿ ಅರ್ಥಾತ್‌ ಅಭಿನವ ಹಾಲವೀರಪ್ಪಜ್ಜ ಅವರು ವಂಚನೆ ಪ್ರಕರಣದಲ್ಲಿ ಸಿಲುಕಿ ಮಠದ ಘನತೆಗೆ ಚ್ಯುತಿ ತಂದಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣದಲ್ಲಿ ಅಭಿನವ ಸ್ವಾಮಿ ಮೂರನೇ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದಾರೆ. ದ್ವೇಷಭಾಷಣಗಳ ಮೂಲಕ ಮುಂಚೂಣಿಗೆ ಬಂದ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೆರೆಯಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಹಾಲಮಠದ ಸ್ವಾಮೀಜಿ ಒಡಿಶಾದಲ್ಲಿ ಪೊಲೀಸರ ಬಲೆಗೆಬಿದ್ದು ಈಗ ಸಿಸಿಬಿ ವಶದಲ್ಲಿದ್ದಾರೆ.

ವೀರಶೈವ- ಲಿಂಗಾಯತ ಪರಂಪರೆಗೆ ಸೇರಿದ ಹಾಲ ಸಂಸ್ಥಾನ ಮಠ ವಿಶೇಷವಾಗಿ ಸಂತಾನ ಮಠವೆಂದೂ, ಪುತ್ರ ಮಠವೆಂದೂ ಪ್ರಸಿದ್ಧಿ ಪಡೆದಿದೆ. ಅಂದರೆ ಇಲ್ಲಿನ ಮಠಾಧೀಶರು ಮದುವೆಯಾಗುತ್ತಾರೆ, ಸಂಸಾರಿಗಳಾಗಿ ಬಾಳುತ್ತಾರೆ. ಮಠಾಧೀಶರ ಮಕ್ಕಳು ಮಠದ ಅಧಿಕಾರ ಹಿಡಿದು ಮುಂದುವರಿಯುತ್ತಾರೆ.

Advertisements

ಶರಣರು ’ಸತಿ ಪತಿ’ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು. ಹೀಗಾಗಿ ಸ್ವಾಮೀಜಿಗಳು ಮದುವೆಯಾಗುವುದು ಈ ನೆಲದ ಅವೈದಿಕ ಧಾರೆಯ ರೂಢಿಗಳಲ್ಲಿ ಒಂದು. ಈ ಕಾರಣಕ್ಕಷ್ಟೇ ಅಲ್ಲದೇ ಸೌಹಾರ್ದ ಪರಂಪರೆಗೂ ಸಾಕ್ಷಿಯಾಗಿದ್ದರಿಂದ ಹಿರೇಹಡಗಲಿಯ ಹಾಲಮಠ ಭಿನ್ನವಾಗಿ ನಿಲ್ಲುತ್ತದೆ.

ಹಾಲುಮಠದ ಪರಂಪರೆಯೇ ಬಹುತ್ವಕ್ಕೆ ಹೆಸರುವಾಸಿ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ಹಿನ್ನೆಲೆಯ ಜನಸಮೂಹ ಈ ಮಠಕ್ಕೆ ನಡೆದುಕೊಂಡು ಬರುತ್ತಿತ್ತು. ಆದರೆ ಹಾಲುಮಠದಲ್ಲಿ ಅಭಿನವ ಸ್ವಾಮೀಜಿ ಅಧಿಕಾರ ಹಿಡಿದ ಮೇಲೆ ಎಲ್ಲವೂ ಬದಲಾಗುತ್ತಾ ಹೋಯಿತು. ದ್ವೇಷ ಭಾಷಣಕಾರರ ಸಾಲಿನಲ್ಲಿ ಸ್ವಾಮೀಜಿ ಕಾಣಿಸಿಕೊಳ್ಳತೊಡಗಿದರು.

ಸಾಮೂಹಿಕ ವಿವಾಹ, ಮುಳ್ಳುಗದ್ದುಗೆ ಉತ್ಸವದ ಮೂಲಕ ಗಮನ ಸೆಳೆಯುವ ಈ ಮಠ ಉತ್ತರ ಕರ್ನಾಟಕದಲ್ಲಿ ಹಲವು ಶಾಖೆಗಳನ್ನೂ ಹೊಂದಿದೆ. ಅಭಿನವ ಸ್ವಾಮೀಜಿಯ ತಂದೆ ಹಾಲ ವೀರಭದ್ರಜ್ಜ ವೃತ್ತಿಯಲ್ಲಿ ವ್ಯವಸಾಯಗಾರರಾಗಿದ್ದರು. ಜನರಿಂದ ಪಡೆದ ಕಾಳು, ಕಡ್ಡಿ, ದವಸ, ಧಾನ್ಯ, ದೇಣಿಗೆಯ ಮೂಲಕ ಮುಳ್ಳಗದ್ದುಗೆ ಜಾತ್ರೆ ನಡೆಸುತ್ತಿದ್ದರು. ಹಿಂದೂ ಮುಸ್ಲಿಂ ಸಮುದಾಯಗಳು ಒಟ್ಟಿಗೆ ಸೇರಿ ಈ ಜಾತ್ರೆಯನ್ನು ನಡೆಸುವುದು ವಿಶೇಷವಾಗಿತ್ತು.

ಅಭಿನವ ಸ್ವಾಮೀಜಿ ಈ ಸಲದ ಜಾತ್ರೆಗೆ ಯಾವುದೇ ದೇಣಿಗೆಯನ್ನು ಪಡೆಯಲಿಲ್ಲ. ಎಲ್ಲ ವೆಚ್ಚವನ್ನೂ ಅವರೇ ಭರಿಸಿದರು. ಸ್ಥಳೀಯ ಸಂಸ್ಥೆಯ ಚುನಾವಣೆಗಳ ಸಂದರ್ಭದಲ್ಲೂ ಸ್ವಾಮೀಜಿ ತಮ್ಮ ಕೋಮುದ್ವೇಷವನ್ನು ಪ್ರದರ್ಶಿಸಿದ್ದರು. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ಕಳಂಕವನ್ನು ಮೆತ್ತಿಕೊಂಡರು.

ಅಭಿನವ ಸ್ವಾಮೀಜಿಯವರು ಕೂಡ ತಂದೆಯಂತೆ ವೃತ್ತಿಯಲ್ಲಿ ಕೃಷಿಯ ಮೂಲಕ ಗುರುತಿಸಿಕೊಂಡಿದ್ದವರು. ಇವರ ಕುಟುಂಬಸ್ಥರಾದ ಹಾಲ ಸೋಮಜ್ಜ, ಸಿದ್ದಪ್ಪ, ಸಣ್ಣ ಹಾಲ ಸ್ವಾಮೀಜಿ ಕೂಡ ವ್ಯವಸಾಯಗಾರರಾಗಿದ್ದಾರೆ. ಕುಟುಂಬಸ್ಥರ ನಡುವೆ ಜಮೀನು ಹಂಚಿಕೆಯಾಗಿ ಈಗ  ಹಿರೇಹಡಗಲಿ ಮಠವು ಸುಮಾರು 40 ಎಕರೆ ಜಮೀನು ಹೊಂದಿದೆ ಎಂದು ವರದಿಗಳು ಹೇಳುತ್ತವೆ. ಹೀಗೆ ತನ್ನ ಪಾಡಿಗೆ ತಾನಿದ್ದ ಮಠ, ಹಿಂದುತ್ವದ ಕುಲುಮೆಗೆ ಸಿಲುಕಿ ತನ್ನ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಳ್ಳತೊಡಗಿತು.

ರಾಜಕೀಯವಾಗಿ ಗುರುತಿಸಿಕೊಳ್ಳುವ ಇರಾದೆ ಹೊಂದಿದ್ದ ಅಭಿನವ ಸ್ವಾಮೀಜಿ ಹಿಂದುತ್ವದ ಪ್ರತಿಪಾದಕರಾಗಿ ಹೊಮ್ಮಿದರು. ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಸಖ್ಯ ಬೆಳೆಸಿಕೊಂಡರು. ಕರಾವಳಿ ಕರ್ನಾಟಕದ ಕೋಮು ದ್ವೇಷ ಭಾಷಣಕಾರರನ್ನು ತಮ್ಮ ಪ್ರಾಂತ್ಯಕ್ಕೆ ಕರೆಸಿ ಕಾರ್ಯಕ್ರಮಗಳನ್ನು ನಡೆಸಿದರು. ಹೀಗೆ ಸ್ವಾಮೀಜಿಯ ಸಂಪರ್ಕಕ್ಕೆ ಬಂದವರೇ ಚೈತ್ರಾ ಕುಂದಾಪುರ ಮತ್ತು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಎನ್ನುತ್ತಾರೆ ಸ್ಥಳೀಯರು.

“ಸ್ವಾಮೀಜಿಗೆ ದೊಡ್ಡದೊಡ್ಡ ಬಿಜೆಪಿ ನಾಯಕರ ಒಡನಾಟವಿತ್ತು. ಆದರೆ ಟಿಕೆಟ್ ಕೊಡಿಸುವ ಮಟ್ಟಕ್ಕೆ ಸ್ವಾಮೀಜಿ ಬೆಳೆದಿದ್ದರೆ, ಪ್ರಭಾವಿಯಾಗಿದ್ದರೂ ಗೋವಿಂದ ಪೂಜಾರಿ ವಿಚಾರದಲ್ಲಿ ಯಡವಟ್ಟಾಗಿದ್ದಾದರೂ ಹೇಗೆ?” ಎಂಬುದೆಲ್ಲ ಬಯಲಾಗಬೇಕಿದೆ.

ಸ್ವಾಮಿ
ರಾಘವೇಶ್ವರ ಭಾರತೀ ಸ್ವಾಮಿ ಜೊತೆ ಹಾಲಶ್ರೀ

ಹಿಂದುತ್ವದ ಬೆನ್ನೇರಿ ಹೋಗುತ್ತಿದ್ದ ಸ್ವಾಮೀಜಿಗೆ ಅವರ ಚಿಕ್ಕಪ್ಪಂದಿರುವ ಬುದ್ಧಿ ಹೇಳಿದ್ದರು. “ನಮ್ಮದು ಬಹುತ್ವದ ಮಠ, ಜಾತ್ಯತೀತ ಸಂಸ್ಕೃತಿ. ಇಲ್ಲಿ ಕೋಮುದ್ವೇಷ ಸಲ್ಲದು” ಎಂದೂ ತಿಳಿ ಹೇಳಿದ್ದರು. ಆದರೆ ಅಭಿನವರು ಈ ಮಾತುಗಳಿಗೆ ಕಿವುಡರಾಗಿ ವರ್ತಿಸತೊಡಗಿದರು. ತನ್ನನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಎಂದು ಭಾವಿಸಿದ್ದರು. ದೊಡ್ಡದೊಡ್ಡ ಬಿಜೆಪಿ ನಾಯಕರು ಕೂಡ ತಮ್ಮನ್ನು ಭೇಟಿಯಾಗಲು ಬರುತ್ತಿದ್ದರಿಂದ ಅಭಿನವ ಸ್ವಾಮೀಜಿಗೆ ಕೆಲವೊಂದು ರಾಜಕೀಯ ಕಥೆಗಳು ತಿಳಿಯುತ್ತಿದ್ದವು. ರಾಜಕೀಯ ಮೂಲಗಳಿಂದ ತಿಳಿದ ಗುಟ್ಟುಗಳನ್ನು ಹೇಳಿಕೊಂಡು ತನಗೆ ದೊಡ್ಡ ಸಂಪರ್ಕ ಜಾಲವೇ ಇದೆ ಎಂದು ಬಿಂಬಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಅಭಿನವರ ಬಲೆಗೆ ಗೋವಿಂದ ಪೂಜಾರಿ ಬಿದ್ದರು. ಆ ಬಳಿಕ ಟಿಕೆಟ್ ಕೊಡಿಸಲು ಶಿಫಾರಸ್ಸು ಮಾಡುವುದಕ್ಕಾಗಿ ಒಂದೂವರೆ ಕೋಟಿ ರೂ.ಗಳನ್ನು ಪಡೆದರು. ಆನಂತರ ಸ್ವಾಮೀಜಿ ಭೂಮಿ ಖರೀದಿ ಮಾಡಿದರು, ಪೆಟ್ರೋಲ್ ಪಂಪ್ ಸ್ಥಾಪಿಸಿದರು. ಐಷಾರಾಮಿ ಕಾರು ಖರೀದಿ ಮಾಡಿದರು. ತನಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಗೋವಿಂದ ಪೂಜಾರಿಗೆ ತಿಳಿಯುವ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಕೋಟ್ಯಂತರ ಹಣವನ್ನು ಕಳೆದುಕೊಂಡು ಹತಾಷರಾದ ಪೂಜಾರಿ, ಅನಿವಾರ್ಯವಾಗಿ ಕಾನೂನಿನ ಹಾದಿ ಹಿಡಿದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಾವಿ ಕಳಚಿಟ್ಟು ಪರಾರಿಯಾಗಿದ್ದ ಸ್ವಾಮೀಜಿ ಟೀಶರ್ಟ್ ಧರಿಸಿ ತಲೆಮರೆಸಿಕೊಂಡಿದ್ದರು. ಈಗ ಅನೇಕ ಆರೋಪಗಳು ಸ್ವಾಮೀಜಿ ಮೇಲೆ ಕೇಳಿಬರತೊಡಗಿವೆ. ಬಂಧನ ಬಳಿಕ ಮತ್ತೊಂದು ದೂರು ದಾಖಲಾಗಿದ್ದು, ಸ್ವಾಮೀಜಿ ಮತ್ತೊಬ್ಬರಿಗೆ ವಂಚಿಸಿರುವ ಆರೋಪ ಬಂದಿದೆ.

ವಚನ ಪರಂಪರೆಯ ಹಾದಿಯಲ್ಲಿ ನಡೆದು, ಸೌಹಾರ್ದತೆಯನ್ನು ಕಟ್ಟಬೇಕಿದ್ದ ಅಭಿನವ ಹಾಲಶ್ರೀ ಈಗ ಕಾನೂನಿಕ ಕಟಕಟೆಯಲ್ಲಿ ನಿಂತಿದ್ದಾರೆ. ದ್ವೇಷವನ್ನು ಬಿತ್ತಿ, ರಾಜಕೀಯ ಫಸಲು ಪಡೆಯುವವರ ಜೊತೆ ಕುಳಿತುಕೊಳ್ಳಲು ಹೋಗಿ ಮಠದ ಪರಂಪರೆಗೆ ಕಳಂಕ ತಂದೊಡ್ಡಿದ್ದಾರೆ ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X