ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಗುರುವಾರ ರಾತ್ರಿ 8 ಗಂಟೆಯ ಸುಮಾರಿನಲ್ಲಿ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ 24X7 ಸಮಾಜಸೇವಾ ತಂಡದ ಕಾರ್ಯಕರ್ತರು ಬೀದಿಗಳನ್ನು ಸ್ವಚ್ಛಗೊಳಿಸುವುದರ ಮೂಲಕ ‘ಪೌರಕಾರ್ಮಿಕರಿಗೆ ವಿನೂತನ ಗೌರವ ಸಲ್ಲಿಸಿದರು.
ಶುಕ್ರವಾರ ಪೌರಕಾರ್ಮಿಕರ ದಿನಾಚರಣೆ ಇದ್ದ ಕಾರಣ ಇಡೀ ದಿನ ಅವರಿಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದ 24X7 ಸಮಾಜಸೇವಾ ತಂಡದ ಸದಸ್ಯರು ಒಗ್ಗೂಡಿ ರಾತ್ರಿ ಗುರುವಾರ 8 ಗಂಟೆಯಿಂದಲೇ ಬೇಲೂರು ಪಟ್ಟಣದ ಪುರಸಭೆ ಮುಂಭಾಗದಿಂದ, ಬಸ್ ಸ್ಟಾಂಡ್ ಮುಂಬಾಗ, ಹರ್ಡೀಕರ್ ವೃತ್ತ, ಸರ್ಕಾರಿ ಆಸ್ಪತ್ರೆಯಿಂದ ಕೆಂಪೇಗೌಡ ಸರ್ಕಲ್ ಮತ್ತು ದೇವಸ್ಥಾನ ರಸ್ತೆ ಮೂಲಕ ಚನ್ನಕೇಶವ ದೇವಸ್ಥಾನದ ಸುತ್ತಮುತ್ತಲಿನ ಕಸವನ್ನು ಟ್ರಾಕ್ಟರ್ಗೆ ತುಂಬುವ ಮೂಲಕ, ಜನಜಾಗೃತಿ, ಸ್ವಚ್ಛತೆಯ ಅರಿವನ್ನು ಮೂಡಿಸಿದರು.
ಸಾಮಾಜಿಕ ಹೋರಾಟಗಾರ ನೂರ್ ಅಹ್ಮದ್ ಮಾತನಾಡಿ, “ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ, ಅಂದು ಬೇಲೂರಿನ ಪೌರಕಾರ್ಮಿಕರ ಶ್ರಮವನ್ನು ಕಂಡು ಅವರಿಗೆ ಇಡೀ ದಿನ ವಿಶ್ರಾಂತಿ ಪಡೆಯುವ ಸಲುವಾಗಿ ಅವರ ಶ್ರಮವನ್ನು ಗಮನಿಸಿ ನಮ್ಮ ತಂಡ ಈ ಕಾರ್ಯದಲ್ಲಿ ತೊಡಗಿದೆ. ಈ ಕಾರ್ಯದಲ್ಲಿ ವರ್ತಕರು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಬೇಲೂರು ಪಟ್ಟಣದ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಹರಿಸಬೇಕು” ಎಂದು ಹೇಳಿದರು.
“ಪೌರಕಾರ್ಮಿಕರೇನು ಬೇರೆಯವರಲ್ಲ. ನಮ್ಮ ಅಣ್ಣ ತಮ್ಮಂದಿರೆ, ಸಹೋದರಿಯರೆ. ಹಾಗಾಗಿ ಅವರ ಶ್ರಮಕ್ಕೆ ಕನಿಷ್ಠ ಬೆಲೆಕಟ್ಟಲಾಗದು. ಆದರೆ ಹಲವಾರು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳು ಕನಿಷ್ಠ ಮೂಲ ಸೌಕರ್ಯಗಳನ್ನೂ ಕಲ್ಪಿಸದೆ ಅವರಿಂದ ದುಡಿಸಿಕೊಳ್ಳುತ್ತಿವೆ. ಸುಮಾರು 30 ವರ್ಷಗಳಿಂದ ಬೇಲೂರು ಪಟ್ಟಣದ ಕೊಳೆ ತೊಳೆಯುತ್ತಿರುವ ಇವರಿಗೆ ಸ್ವಂತ ಮನೆ ಇಲ್ಲ. ಅವರ ಆರೋಗ್ಯ ರಕ್ಷಣಾ ಪರಿಕರಗಳನ್ನು ಒದಗಿಸುತ್ತಿಲ್ಲ. ಇಂದಿಗೂ ಹಲವಾರು ರೋಗ ರುಜಿನಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದು, ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಪೌರಕಾರ್ಮಿಕರ ಜಯಂತಿಯನ್ನು ಒಂದು ದಿನದ ಮಟ್ಟಿಗೆ ಕಾಟಾಚಾರಕ್ಕೆ ಆಚರಿಸುವುದರಿಂದ ಪ್ರಯೋಜನವಿಲ್ಲ. ಅವರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿದಿರುವುದು ಏಕೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಎಸ್ ಡಿ ಮಂಜುನಾಥ್, ಪುರಸಭಾ ಆರೋಗ್ಯಧಿಕಾರಿ ಜ್ಯೋತಿ ಲೋಹಿತ್, ಶಿಕ್ಷಕ ಸಂಪತ್, ಪ್ರದೀಪ್, ಮೆಜೆಸ್ಟಿಕ್ ಅಕ್ಬರ್, ಕೀರ್ತಿ ಬಿ ಎ, ಸುನಿಲ್ ರಾಯಪುರ, ವಿಶ್ವ ಓಬಳೇಶ್, ಶಿವಣ್ಣ ಹಾಗೂ ಪುರಸಭಾ ಸಿಬ್ಬಂದಿ ಇದ್ದರು.
ಗುರುವಾರ ರಾತ್ರಿ 8 ಗಂಟೆಗೆ 24×7 ಸಮಾಜಸೇವಾ ತಂಡದ ಸದಸ್ಯರು ಎರಡು ಟ್ರಾಕ್ಟರ್ಗೆ ತಲಾ 4 ಮಂದಿ ಸಮಾಜಸೇವಾ ತಂಡದ ಸದಸ್ಯರು ಪೌರಕಾರ್ಮಿಕರೊಡಗೂಡಿ ಕ್ಷಣಮಾತ್ರದಲ್ಲಿ ಬೇಲೂರಿನ ಬೀದಿಗಳ ಕಸ ತೆಗೆದು ಸ್ವಚ್ಛಗೊಳಿಸಿದರು.