- ಸೆ.26ರಂದು ನಡೆಯುವ ಬಂದ್ಗೆ ನನ್ನ ವಿರೋಧವಿಲ್ಲ
- ಸೋಮವಾರ ಕರ್ನಾಟಕ ಬಂದ್ ದಿನಾಂಕ ಘೋಷಣೆ
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಅಖಂಡ ಕರ್ನಾಟಕ ಬಂದ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಶನಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, “ಸೆ.26ಕ್ಕೆ ಬಂದ್ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಆ ದಿನವೇ ಕರ್ನಾಟಕ ಬಂದ್ ದಿನಾಂಕ್ ಘೋಷಿಸುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡೋಣ ಅಂತ ಮನವಿ ಮಾಡುತ್ತೇನೆ. ಎಲ್ಲರೂ ಸೇರಿ ಬಂದ್ ಮಾಡಿದರೆ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬರಲಿದೆ” ಎಂದರು.
“ನದಿ, ನೀರು ಹಾಗೂ ಗಡಿ ವಿಚಾರದಲ್ಲಿ ಹಿಂದಿನಿಂದಲೂ ನಾವು ಯಾರಿಗೂ ಭಯಪಡದೆ ಹೋರಾಟ ಮಾಡಿದ್ದೇವೆ. ಈಗ ನಾವು ಬಹಳ ಗಂಭೀರ ಪರಿಸ್ಥಿತಿಯಲ್ಲಿದ್ದೇವೆ. ನೀವು ಯಾರನ್ನು ಕೇಳಿಕೊಂಡು ತಮಿಳುನಾಡಿಗೆ ನೀರು ಬಿಡುತ್ತಿದ್ದೀರಾ? ಕರ್ನಾಟಕದಲ್ಲಿ ಕನ್ನಡಿಗರು ಇಲ್ಲವೇ? ಹೋರಾಟಗಾರರು ಇಲ್ಲವೇ?” ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನೀವು ಹಿರಿಯರು ಮತ್ತು ಪ್ರಾಮಾಣಿಕರಿದ್ದೀರಿ, ನಿಮ್ಮ ನಿಲುವು ಸ್ಪಷ್ಟವಾಗಿ ಇರಲಿ. ತುರ್ತು ಶಾಸಕರ ಸಭೆ ಕರೆದು ಸರ್ವಾನುಮತದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ತೀರ್ಮಾನ ಮಾಡಿ. ಅದರ ಮೇಲೂ ನೀರು ಬಿಡಬೇಕು ಎಂಬ ನಿಲುವು ನಿಮ್ಮದಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ” ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಿ ಅನುದಾನಿತ ಉತ್ಸವಗಳೆಲ್ಲ ಸರಳಗೊಳ್ಳಲಿ
“ನಿಮ್ಮ ತಂಟೆಗೆ ಬರುವುದಿಲ್ಲ ಎಂದು ನ್ಯಾಯಾಲಯ ಈಗಾಗಲೇ ಹೇಳಿ ಅರ್ಜಿ ವಜಾ ಮಾಡಿದೆ. ನೀವು ನಮ್ಮ ಹತ್ತಿರ ಬರಬೇಡಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಬಳಿ ಹೋಗುವಂತೆ ಸೂಚಿಸಿತ್ತು. ಆದರೆ, ನಮ್ಮ ಎಲ್ಲ ಸಂಸದರು ಪ್ರಧಾನ ಮಂತ್ರಿಗಳ ಮನೆ ಮುಂದೆ ಹೋಗಲು ಏನು ದಾಡಿ. ಈ ಹಿಂದೆ ಇದ್ದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ ನಮ್ಮನ್ನು ಕರೆದು ಮಾತಾಡಿದ್ದರು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿ ಅವರೇ ನಿಮಗೆ ಮೈಸೂರು ಬ್ಯಾಂಕ್ ಸರ್ಕಲ್ ಗೊತ್ತು, ಪ್ರಧಾನ ಮಂತ್ರಿ ಗೊತ್ತಿಲ್ಲವೇ?” ಎಂದು ಕಿಡಿಕಾರಿದರು.
“ಜೆಡಿಎಸ್ನವರು ಶುಕ್ರವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಕಾವೇರಿ ನೀರಿನ ಬಗ್ಗೆ ಮಾತಾಡಿಲ್ಲ. ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ತರದೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಯಾಕೆ ಪ್ರತಿಭಟನೆ ಮಾಡಿದ್ದೀರಿ” ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.
ರಜಿನಿಕಾಂತ್ ರಾಜ್ಯಕ್ಕೆ ಬೇಡ
“ಬೊಮ್ಮಾಯಿ ಅವರೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಕರೆಸಿ ಪಾದ ಪೂಜೆ ಮಾಡಿದ್ದೀರಿ. ಅವರನ್ನು ರಾಜ್ಯಕ್ಕೆ ಕರೆಯಿಸಬೇಡಿ. ಈಗ ರಜನಿಕಾಂತ್ ಏನ್ ಮಾಡುತ್ತಾರೆ ಕೇಳಿ. ರಾಜ್ಯದ ಸಂಸದರಿಗೆ ನಾಚಿಕೆ ಆಗಬೇಕು” ಎಂದು ವಾಗ್ದಾಳಿ ನಡೆಸಿದರು.
“ಎಂಕೆ ಸ್ಟಾಲಿನ್ ಅವರೇ ಕರ್ನಾಟಕ ಮುಖ್ಯಮಂತ್ರಿ ಅವರನ್ನು ಮಾತುಕತೆಗೆ ಕರೆಯಿರಿ. ಸೋಮವಾರದವರೆಗೆ ನಿಮಗೆ ಅವಕಾಶ ಕೊಡುತ್ತೇವೆ. ಸೋಮವಾರ ವುಡ್ ಲ್ಯಾಂಡ್ಸ್ ಹೋಟೆಲ್ನಲ್ಲಿ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಹುಬ್ಬಳ್ಳಿ, ಧಾರವಾಡ, ಕೋಲಾರ, ರಾಜ್ಯದ ಎಲ್ಲ ಭಾಗದ ಜನರ ಸಮಸ್ಯೆ ಬಗ್ಗೆ ತೀರ್ಮಾನ ಮಾಡುತ್ತೇವೆ. ವಿಧಾನಸೌಧ ಮುತ್ತಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆಯುತ್ತೇವೆ ಎಂದರು.