ಹೃದಯದ ಮಹಾಪಧನಿಯ ಕವಾಟ ತಿರುಚಿಕೊಂಡು ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಕವಾಟವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಾನ್ಸ್ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್ಮೆಂಟ್ (ಟಿಎವಿಆರ್) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಭಾರತದಲ್ಲೇ ಈ ವಿಧಾನದ ಮೂಲಕ ನಡೆದ ಮೊದಲ ಶಸ್ತ್ರಚಿಕಿತ್ಸೆ ಎಂದು ಹೇಳಲಾಗಿದೆ.
ಹಂಸವೇಣಿ (64) ಎಂಬ ಮಹಿಳೆ ಹತ್ತು ವರ್ಷದಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅಲ್ಲದೆ, ಜನ್ಮಜಾತ ಹೃದಯ ಕವಾಟದ ಅಸ್ವಸ್ಥತೆಯಿಂದ ಬಳಲಿ, ಮಹಾಪಧಮನಿಯ ಕವಾಟ ಬದಲಾವಣೆ ಮತ್ತು ಸಿಎಬಿಜಿ (ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್) ಶಸ್ತ್ರಚಿಕಿತ್ಸೆಗೆ ಒಳಗೊಂಡಿದ್ದರು. ಇತ್ತೀಚಿಗೆ ಅವರು ಎದೆಯ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಒಳಗಾದರು.
ನೋವಿನಿಂದ ಕುಗ್ಗಿದ ಅವರು ಪರೀಕ್ಷೆಗೆ ಒಳಪಟ್ಟಾಗ ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ಪತ್ತೆಯಾಗಿದೆ. ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದಾಗ ಪ್ರಾಸ್ಥೆಟಿಕ್ ಕವಾಟ ಅಳವಡಿಸಲಾಗಿತ್ತು. ಇದೀಗ ಅದು ಕೂಡ ವಿಫಲವಾಗಿದ್ದರಿಂದ, ರಕ್ತನಾಳವು ತೀವ್ರವಾಗಿ ಹಾನಿಗೊಳಗಾಗಿತ್ತು.
ಹಾಗಾಗಿ ಅವರ ಆರೋಗ್ಯದ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಈಗಾಗಲೇ ಶಸ್ತ್ರಚಿಕಿತ್ಸೆಯ ಮೂಲಕ ಅವರಿಗೆ ಪ್ರಾಸ್ಥೆಟಿಕ್ ಕವಾಟ ಹಾಕಿ ಅದು ವಿಫಲವಾಗಿದ್ದರಿಂದ ಮತ್ತೊಮ್ಮೆ ಅವರಿಗೆ ಕವಾಟ ಬದಲಾವಣೆ ಮಾಡುವುದು ಅಸಾಧ್ಯವಾಗಿತ್ತು. ಹಾಗಾಗಿ, ಅವರಿಗೆ ಸಾಕಷ್ಟು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದವು. ಮೂರು ತಿಂಗಳು ಮಹಿಳೆಗೆ ಎಲ್ಲಿಯೂ ಚಿಕಿತ್ಸೆ ದೊರೆತಿರಲಿಲ್ಲ. ಇದರಿಂದ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ನಂತರ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಹಿರಿಯ ಹೃದಯತಜ್ಞ ಡಾ ವಿವೇಕ್ ಜವಲಿ, “ಸಾಕಷ್ಟು ಪರೀಕ್ಷೆಗಳ ಬಳಿಕ ಮಹಿಳೆಗೆ ಬಹು ಅಂಗಾಂಗಗಳ ವೈಫಲ್ಯವಾಗತೊಡಗಿತ್ತು. ಜತೆಗೆ, ಆಕೆಗೆ ಮಹಾಪಧಮನಿ (ಹೃದಯದಿಂದ ರಕ್ತವನ್ನು ಸಾಗಿಸುವ ದೇಹದಲ್ಲಿನ ಅತಿದೊಡ್ಡ ಅಪಧಮನಿ) ಅಸಹಜವಾಗಿ ದಪ್ಪವಾಗಿರುವುದು ಮತ್ತು ಕ್ಯಾಲ್ಸಿಫೈಡ್ (ಕ್ಯಾಲ್ಸಿಯಂ ನಿಕ್ಷೇಪಗಳಿಂದ ಗಟ್ಟಿಯಾಗುತ್ತದೆ) ಆಗಿರುವುದು ತಿಳಿದು ಬಂತು” ಎಂದರು.
“ಇದರಿಂದ ಹೃದಯದ ಮಹಾಪಧನಿಯ ಕವಾಟವು ಸಂಪೂರ್ಣ ತಿರುಚಿಕೊಂಡಿತ್ತು. ಇದಲ್ಲದೆ, ಈ ಹಿಂದೆ ಬದಲಾಯಿಸಲಾದ ಪ್ರಾಸ್ಥೆಟಿಕ್ ಕವಾಟವನ್ನು ಅಸಹಜವಾಗಿ ಓರೆಯಾಗಿ ಬದಲಾಗಿತ್ತು, ಹೊಸ ಕವಾಟವನ್ನು ಪತ್ತೆಹಚ್ಚುವುದು ಹೆಚ್ಚು ಸವಾಲಿನ ಸಂಗತಿಯಾಗಿತ್ತು. ಅಲ್ಲದೆ, ಆಪರೇಟಿಂಗ್ ಟೇಬಲ್ನಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಪರಿಧಮನಿಯ ರಕ್ತನಾಳವನ್ನು ತಡೆಯುವ ಹೆಚ್ಚಿನ ಅಪಾಯವನ್ನು ಇದು ಒಡ್ಡಿತು. ಹೀಗಾಗಿ ಆಕೆಗೆ ಟ್ರಾನ್ಸ್ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್ಮೆಂಟ್ (ಟಿಎವಿಆರ್) ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ; ಸರ್ಕಾರ ಕ್ರಮ ವಿರೋಧಿಸಿ ಪ್ರತಿಭಟನೆ
ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರ ಡಾ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ರೋಗಿಯ ಸಂಕೀರ್ಣ ಪರಿಸ್ಥಿತಿಯನ್ನು ಪರಿಗಣಿಸಿ, ನಾವು ಆರಂಭದಲ್ಲಿ ಹೈಬ್ರಿಡ್ ಕಾರ್ಯವಿಧಾನದ ಮೂಲಕ ಚಿಕಿತ್ಸೆ ನೀಡಲು ಯೋಜಿಸಿದೆವು. ಕೂಡಲೇ ಮಹಿಳೆಯನ್ನು ತುರ್ತು ಟಿಎವಿಆರ್ಗಾಗಿ ಕ್ಯಾಥ್ ಲ್ಯಾಬ್ಗೆ ಸ್ಥಳಾಂತರಿಸಲಾಯಿತು. ಸಾಕಷ್ಟು ಪ್ರಯತ್ನದ ನಂತರ ಆಕೆಗೆ ಟಿಎವಿಆರ್ ವಿಧಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನಡೆಸಲಾಯಿತು. ಕೇವಲ 10 ದಿನಗಳ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು” ಎಂದರು
ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧ ತಜ್ಞರು, ಗ್ಯಾಸ್ಟ್ರೋಎಂಟರಾಲಜಿಸ್ಟ್, ನೆಫ್ರಾಲಜಿಸ್ಟ್ ಮತ್ತು ಅರಿವಳಿಕೆಶಾಸ್ತ್ರಜ್ಞ ಸೇರಿದಂತೆ ಬಹುದೊಡ್ಡ ತಂಡವೇ ಶಸ್ತ್ರಚಿಕಿತ್ಸೆ ನಡೆಸಲು ಶ್ರಮಿಸಿದೆ.