ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯ ಅವಧಿ ಇಂದಿಗೆ ಮುಗಿದಿದೆ. ಸಾಮಾನ್ಯವಾಗಿ ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ಮುಂಗಾರು ಎನ್ನಲಾಗುತ್ತದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ ಕೇವಲ 4 ತಾಲೂಕುಗಳಲ್ಲಿ ಮಾತ್ರವೇ ಅತ್ಯಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮಳೆಯ ಪಟ್ಟಿ ಬಿಡುಗಡೆ ಮಾಡಿರುವ ಇಲಾಖೆ, “ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಮಳೆ ಕೊರತೆ ಪಟ್ಟಿಯಲ್ಲಿವೆ. 23 ಜಿಲ್ಲೆಗಳ 146 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. 8 ಜಿಲ್ಲೆಗಳ 86 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ನಿನ್ನೆಯ ಮಳೆಯ ನಂತರ ದಕ್ಷಿಣ ಕನ್ನಡ ಜಿಲ್ಲೆ ಸಾಧಾರಣ ಮಳೆಯ ಪಟ್ಟಿಗೆ ಸೇರಿದೆ. ಈ ಬಾರಿಯ ಮುಂಗಾರು ಮಳೆಯು ವಿಶೇಷವಾಗಿ ಆಗಸ್ಟ್ನಲ್ಲಿ ರೈತರಿಗೆ ಭಾರೀ ನಷ್ಟ ಮತ್ತು ಸಂಕಟವನ್ನುಂಟು ಮಾಡಿದೆ” ಎಂದು ತಿಳಿಸಿದೆ.
“ಬೆಂಗಳೂರಿನಲ್ಲಿ ಸೆಪ್ಟೆಂಬರ್ನಲ್ಲಿ ಸರಾಸರಿ 208.3 ಮಿ.ಮೀಗೆ ಬದಲಾಗಿ 248.4 ಮಿಲಿ ಮೀಟರ್ ಮಳೆಯಾಗಿದೆ. ಮುಂಗಾರು ಆರಂಭವಾದಗಿನಿಂದ ಅಂತ್ಯದವರೆಗೆ ಬೆಂಗಳೂರಿನಲ್ಲಿ ಸರಾಸರಿ ಒಟ್ಟು ಮಳೆ ಪ್ರಮಾಣ 597.7 ಮಿ.ಮೀ. ಆಗಬೇಕಿತ್ತು. ಆದರೆ, 474.8 ಮಿಮೀ ಮಳೆಯಾಗಿದೆ. ಒಟ್ಟಾರೆ ವರ್ಷದಲ್ಲಿ ಆಗಬೇಕಿದ್ದ ಸರಾಸರಿ ಮಳೆ 980 ಮಿ.ಮಿ. ಆದರೆ ಪ್ರಸ್ತುತ ವರ್ಷದಲ್ಲಿ 817.6 ಮಿ.ಮೀ ಮಳೆಯಾಗಿದೆ” ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಈ ಸುದ್ದಿ ಓದಿದ್ದೀಯಾ? ಬೆಳಗಾವಿ | ಮೋಡ ಬಿತ್ತನೆ ಕಾರ್ಯಾಚರಣೆ ಆರಂಭ; ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯತ್ನ
“ಮುಂಬರುವ ದಿನಗಳಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತಿ ಹೆಚ್ಚು ಮಳೆಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗಬಹುದು. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ” ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.