ಹೊಸದಾಗಿ ಒಂದು ಸಾವಿರ ಮದ್ಯದಂಗಡಿ ತೆರೆಯಲು ಸರ್ಕಾರ ಪರವಾನಗಿ ನೀಡುವುದಾಗಿ ಹೇಳಿರುವ ಪ್ರಸ್ತಾವನ್ನು ಕೂಡಲೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಆಯಾ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದ್ದು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
“ಯಾವುದೇ ಸರ್ಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ. ಅಂತಹ ಹಣವನ್ನು ದೇಶ ಕಟ್ಟಲು ಬಳಸಬಾರದೆಂದು ಗಾಂಧೀಜಿಯವರು ದೃಢವಾಗಿ ನಂಬಿದ್ದರು. ಸಂವಿಧಾನದ ಆಶಯವೂ ಕೂಡ ಸರ್ಕಾರಗಳು ನಿಧಾನವಾಗಿ ಮದ್ಯ ನಿಷೇಧದತ್ತ ಸಾಗಬೇಕೆಂಬುದೇ ಆಗಿತ್ತು. ಆದರೆ ಈ ಸರ್ಕಾರ ಮದ್ಯಪಾನ ಪ್ರೋತ್ಸಾಹಕ್ಕೆ ಹೆಚ್ಚಿನ ಗಮನ ಕೊಡುತ್ತಿದೆ. ಇದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.

ಸಂಘಟನೆಯ ದಾವಣಗೆರೆ ಜಿಲ್ಲಾ ಸಂಯೋಜಕಿ ಸುಧಾ ಪಲ್ಲಾಗಟ್ಟೆ ಮಾತನಾಡಿ, “ಮದ್ಯಪಾನ ಸೇವನೆಯಿಂದ ಹಳ್ಳಿಗಳ ಕೂಲಿಕಾರರ ಬದುಕು ನರಕವಾಗುತ್ತದೆ. ಜತೆಗೆ ಗ್ರಾಮಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಅವಕಾಶ ನೀಡಿದರೆ ಸರ್ಕಾರವೇ ಅವರನ್ನು ಕುಡಿತದ ದಾರಿಗೆ ತಳ್ಳಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಹೊಸದಾಗಿ ಅನುಮತಿ ನೀಡಬಾರದು” ಎಂದು ಒತ್ತಾಯಿಸಿದರು.
ಇದೇ ವೇಳೆ ಚಿತ್ರದುರ್ಗದಲ್ಲಿ ಜಿಲ್ಲಾ ಸಂಯೋಜಕ ಮಲ್ಲೇಶ್ ಮಾತನಾಡಿ, “ಹೊಸದಾಗಿ ಪರವಾನಗಿ ನೀಡುವುದರ ಮೂಲಕ ಸರ್ಕಾರ ಗ್ರಾಮೀಣ ಕೂಲಿಕಾರರ ಬದುಕನ್ನು, ಹಳ್ಳಿಗರ ಬದುಕನ್ನು ಹಾಳು ಮಾಡಲು ಹೊರಟಿದೆ. ಈ ಹಿಂದೆ ಇದ್ದ ಸರ್ಕಾರ ಹೊಸದಾಗಿ ಪರವಾನಗಿ ನೀಡಲು ಹೊರಟಾಗ 2019ರ ಅಕ್ಟೋಬರ್ನಲ್ಲಿ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಮಹಿಳೆಯರು ಪ್ರತಿಭಟನೆ ಹಮ್ಮಿಕೊಂಡಿದ್ದು, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಸರ್ಕಾರ ಮತ್ತೆ ಪರವಾನಗಿ ನೀಡಲು ಹೊರಟಿದೆ. ಕೂಡಲೇ ಪ್ರಸ್ತಾಪ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತು ಭಿನ್ನ ಮಾರ್ಗಗಳ ಮೂಲಕ ಮಹಿಳೆಯರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಕ್ರಮ ಹಣದಿಂದ ಸರ್ಕಾರ ನಡೆಸುವುದನ್ನು ನಿಲ್ಲಿಸಿ: ನಶಾಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿ
“ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು. ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಂತೆ ಶೇ.10ರಷ್ಟು ಮಹಿಳೆಯರು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಗ್ರಾಮಸಭೆಯಲ್ಲಿ ನಿರ್ಧರಿಸಿದಲ್ಲಿ ಆ ಠರಾವನ್ನು ಸರ್ಕಾರ ಎತ್ತಿ ಹಿಡಿಯಬೇಕು. ಸರ್ಕಾರ ಹೊಸದಾಗಿ 1,000 ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ, ಮಾಲ್, ಮಾರ್ಕೆಟ್ಗಳಲ್ಲಿ ಮತ್ತು ಆನ್ಲೈನ್ ಮಾರಾಟ ಮಾಡುವ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.