ತನಗೆ ತಾನೇ ಬೆಳಕಾದ ಬುದ್ಧ ಏಷ್ಯಾದ ಬೆಳಕು ಎಂದೇ ಕರೆಸಿಕೊಂಡವನು. ಆದರೆ ಸಿದ್ಧಾರ್ಥ ಬುದ್ಧನಾದ ದೇಶ ಭಾರತದಲ್ಲಿಯೇ ಬುದ್ಧನ ಅಸ್ತಿತ್ವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ದಾವಣಗೆರೆ ನಗರದ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಏರ್ಪಡಿಸಿದ್ದ “ಕಲೆಗಳ ಕಲರವ” ಸಮಾರೋಪ ಹಾಗೂ ”ಬುದ್ಧನ ಬೆಳಕು” ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಲೆಯ ಮೂಲಕ ಕ್ರಾಂತಿಯನ್ನು ಮಾಡುವ ನಿಟ್ಟಿನಲ್ಲಿ ಫೌಂಡೇಶನ್ ಮಾಡುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ರಾಂತಿಯ ಬದುಕಿನಲ್ಲಿ ಬದ್ಧತೆಯೂ ಮುಖ್ಯವಾಗುತ್ತದೆಂಬ ಕಿವಿಮಾತು ಹೇಳಿದರು.
“ಸಾರ್ವಜನಿಕವಾಗಿ ಮೆಚ್ಚುಗೆಯ ಮಾತನಾಡುವ, ಭರವಸೆಗಳನ್ನು ನೀಡುವ ರಾಜಕಾರಣಿಗಳಿಗೆ, ಸಾಹಿತಿಗಳಿಗೆ, ಸ್ವಾಮೀಜಿಗಳಿಗೆ ಕೊರತೆ ಇಲ್ಲ. ಆದರೆ ನುಡಿದಂತೆ ನಡೆಯುವುದು ವಿರಳ. ಆಡಿದ ಮಾತುಗಳನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳುವುದು ಮುಖ್ಯ” ಎಂಬ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.
ಜಾನಪದ ತಜ್ಞ ಡಾ. ಎಂ ಜಿ ಈಶ್ವರಪ್ಪ ಮಾತನಾಡಿ, “ಸತೀಶ್ ಜಾರಕಿಹೊಳಿಯವರು ಕ್ರಾಂತಿಕಾರರು. ಅವರು ಸ್ಮಶಾನವೊಂದರಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಭೂಮಿಯ ಮೇಲಿನ ಎಲ್ಲ ಜಾಗವೂ ಶ್ರೇಷ್ಠ. ಯಾವುದೂ ಕನಿಷ್ಠವಲ್ಲವೆಂದು ಪ್ರತಿಪಾದಿಸಿದವರು. ಎಲ್ಲರೂ ನಾವು ಬೇರೆ ಬೇರೆ ಎಂಬ ಮನೋಭಾವನೆಯಿಂದ ಸಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಒಂದು ಅನ್ವೇಷಣಾ ನಾಟಕ ಹೊರತರುತ್ತಿರುವುದು ಉತ್ತಮ ಬೆಳವಣಿಗೆ” ಎಂದರು.
ಪತ್ರಕರ್ತ ಬಿ ಎನ್ ಮಲ್ಲೇಶ್ ಮಾತನಾಡಿ, “ಬುದ್ಧನನ್ನು ಓದುವ ಮೂಲಕ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಬುದ್ಧನನ್ನು ಅಪ್ಪಿಕೊಂಡರೆ ರಾಜಕೀಯ, ಧರ್ಮ, ಜಾತಿ ಸಮಸ್ಯೆಗಳು ತನಗೆ ತಾನೇ ನಿವಾರಣೆಯಾಗುತ್ತವೆ. ಎಲ್ಲರೂ ರಸ್ತೆ ಮೇಲಿನ ಕಸವನ್ನು ಹೊಡೆಯುತ್ತಿದ್ದೇವೆಯೇ ವಿನಃ ಮನಸಿನ ಕಸವನ್ನು ಹೊಡೆಯುತ್ತಿಲ್ಲ. ಶಾಂತಿ ಒಂದೇ ಎಲ್ಲದಕ್ಕೂ ಪರಿಹಾರ ನೀಡಬಲ್ಲದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕೇಂದ್ರ ಬರ ಅಧ್ಯಯನ ತಂಡ ಭೇಟಿ; ರೈತರಿಂದ ಮಾಹಿತಿ
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ರಾಮಚಂದ್ರಪ್ಪ ಮಾತನಾಡಿ, “ಒಂದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವಂತಹ ಶಕ್ತಿ ಸಾಹಿತ್ಯ ಮತ್ತು ಕಲೆಗೆ ಇದೆ. ಈ ನಾಟಕ ರಾಜ್ಯದಲ್ಲಿ ಮೊದಲ ಪ್ರಯೋಗವಾಗಿದೆ” ಎಂದು ತಿಳಿಸಿದರು.