- ಬಾಯಿ ಮಾತಲ್ಲಿ ಬರ ನಿರ್ವಹಣೆ ಸಾಧ್ಯವಿಲ್ಲ, ತಕ್ಷಣ ಪರಿಹಾರ ನೀಡಿ
- ಬರ ಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
ರಾಜ್ಯ ಸರ್ಕಾರ ಬಾಯಿ ಮಾತಲ್ಲಿ ಬರ ಪರಿಹಾರ ಮಾಡುತ್ತೇವೆ ಎಂದರೆ ಸಾಲದು, ತಕ್ಷಣ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶಿಗ್ಗಾವಿಯಲ್ಲಿ ಶನಿವಾರ ಶಿಗ್ಗಾವಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸರಕಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ನಿರಂತರ ವಿಳಂಬ ಮಾಡುತ್ತ, ಸೆಪ್ಟಂಬರ್ ನಲ್ಲಿ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದಾರೆ” ಎಂದರು.
“ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾನಗಲ್, ಬ್ಯಾಡಗಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದು, ಸೋಮವಾರ ಬರ ತಾಲೂಕುಗಳೆಂದು ಘೋಷಣೆ ಮಾಡದಿದ್ದರೆ ರೈತರ ಜೊತೆ ಹೋರಾಟ ನಡೆಸಲಾಗುವುದು. ಈಗಾಗಲೇ ಕಂದಾಯ ಸಚಿವರೊಂದಿಗೆ ಮಾತನಾಡಿದ್ದು, ಅವರು ಮಾನದಂಡಗಳನ್ನು ನೋಡಿ ಈ ತಿಂಗಳಾಂತ್ಯಕ್ಕೆ ಘೋಷಣೆ ಮಾಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
“ಬಿತ್ತಿದ ಬೆಳೆ ಬಾರದಿರುವುದು, ನೀರಿಲ್ಲದಿರುವುದನ್ನು ನೋಡಿ ಬರ ತಾಲೂಕುಗಳೆಂದು ಘೋಷಣೆ ಮಾಡುವಂತೆ ಆಗ್ರಹಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬರ ತಾಲೂಕುಗಳೆಂದು ಘೋಷಣೆ ಮಾಡುವ ವಿಶ್ವಾಸ ಇದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ಧರೆ, ರೈತರೊಂದಿಗೆ ಸೇರಿ ಸೋಮವಾರದ ನಂತರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಗುಜರಾತನ್ನು ಮೆರೆಸಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಳುಗಿಸಿತೇ ಬಿಸಿಸಿಐ?
ತಕ್ಷಣ ಪರಿಹಾರ ನೀಡಿ
“ಕೇವಲ ಮಾತಿನಿಂದ ಬರ ಪರಿಹಾರ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಮೊದಲ ಕಂತಿನಲ್ಲಿ 250 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಹದಿನೈದು ಇಪ್ಪತ್ತು ಕೋಟಿ ರೂಪಾಯಿ ಹಣ ಇದೆ. ಸರ್ಕಾರ ಮನಸು ಮಾಡಿದರೆ ಮೊದಲು ರೈತರಿಗೆ ಬೆಳೆ ಪರಿಹಾರ ನೀಡಬೇಕು. ರೈತರು ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದಾರೆ” ಎಂದರು.
“ನಾವು ಅಧಿಕಾರ ನಡೆಸಿದಾಗ ಪ್ರವಾಹ ಬಂದಿತ್ತು. ಆಗ ನಾವು ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸಲಿಲ್ಲ. ತಕ್ಷಣ 2500 ಕೋಟಿ ಪರಿ ಹಾರ ಬಿಡುಗಡೆ ಮಾಡಿ ಒಂದು ತಿಂಗಳಲ್ಲಿ ವಿತರಣೆ ಮಾಡಿದ್ದೆವು. ಕೇಂದ್ರದ ಮಾನದಂಡಗಳ ಪ್ರಕಾರ ಒಣ ಬೇಸಾಯಕ್ಕೆ 6 ಸಾವಿರ ರೂ. ಪರಿಹಾರ ಕೊಡುತ್ತಾರೆ. ನಾವು 13 ಸಾವಿರ ಪರಿಹಾರ ಕೊಟ್ಟಿದ್ದೆವು. ನೀರಾವರಿಗೆ 13 ಸಾವಿರ ಇತ್ತು ನಾವು 25 ಸಾವಿರ ಕೊಟ್ಟೆವು. ತೋಟಗಾರಿಕೆಗೆ 18 ಸಾವಿರ ಇತ್ತು ನಾವು 28 ಸಾವಿರ ಪರಿಹಾರ ಕೊಟ್ಟಿದ್ದೆವು. ಇದಕ್ಕೆ ಯಾವುದೇ ಮಾನದಂಡ ಅಡ್ಡಿ ಬರಲಿಲ್ಲ. ಪರಿಹಾರ ನೀಡಬೇಕು ಎನ್ನುವ ಮನಸ್ಸು ಇರಬೇಕು” ಎಂದು ಹೇಳಿದರು.