ಹಿರಿಯ ಪತ್ರಕರ್ತ, ಲೇಖಕ, ಅನುವಾದಕ ಜಿ ಎನ್ ರಂಗನಾಥರಾವ್ ಅವರು ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಸವನಗುಡಿಯ ಬಿಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ತೀರಿಕೊಂಡರು.
ಅವರಿಗೆ 81 ವರ್ಷ ವಯಸ್ಸಾಗಿತ್ತು.
1942ರಲ್ಲಿ ಬೆಂಗಳೂರು ಸನಿಹದ ಹಾರೋಹಳ್ಳಿಯಲ್ಲಿ ಜನಿಸಿದ ಅವರು, ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪತ್ರಕರ್ತರಾಗಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.
1962ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿಜೀವನದ ಆರಂಭಿಸಿದ್ದ ಅವರು ನಂತರ ಪ್ರಜಾವಾಣಿ ಸೇರಿದ್ದರು. ಪ್ರಜಾವಾಣಿಯಲ್ಲಿ ಹಂತ ಹಂತವಾಗಿ ಮೇಲೇರಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಮುಖ್ಯಸ್ಥರಾಗಿ, ಸುಧಾ ವಾರಪತ್ರಿಕೆಯ ಉಸ್ತುವಾರಿಯಾಗಿ ಹತ್ತಾರು ಲೇಖಕರನ್ನು ಬೆಳೆಸಿದ್ದರು. ಪ್ರಜಾವಾಣಿಯಿಂದ ನಿವೃತ್ತರಾದಮೇಲೆ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.
‘ಆ ಪತ್ರಿಕೋದ್ಯಮ’ ಕೃತಿಯೂ ಸೇರಿದಂತೆ ಹಲವು ನಾಟಕ, ಪ್ರಬಂಧ ಹಾಗೂ ವಿಮರ್ಶೆಗಳನ್ನೂ ಅವರು ಬರೆದಿದ್ದಾರೆ. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ ಹೆಜ್ಜೆ, ಅನ್ಯೋನ್ಯ, ಗುಣ ದೋಷ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶೇಕ್ಸ್ಪಿಯರ್ನ ರೋಮಿಯೋ ಜೂಲಿಯೆಟ್, ಆಂಟನಿ ಕ್ಲಿಯೋಪಾತ್ರ, ಬರ್ಟೋಲ್ಟ್ ಬ್ರೆಕ್ಟ್ನ ಕಕೇಷಿಯನ್ ಚಾಕ್ ಸರ್ಕಲ್ ಮುಂತಾದ ಕೃತಿಗಳನ್ನು ಅನುವಾದ ಮಾಡಿದ್ದಾರೆ.
ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ, 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಟಿಎಸ್ಸಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು.
ಮುಖ್ಯಮಂತ್ರಿ ಸಂತಾಪ
ಜಿ ಎನ್ ರಂಗನಾಥರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ’ ಎಂದಿದ್ದಾರೆ.
ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ. ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡು ನುಡಿಯ ಉನ್ನತಿಗಾಗಿ ದುಡಿದವರು. ರಂಗನಾಥ ರಾವ್ ಅವರ ಅಗಲಿಕೆ ನಾಡಿನ ಪತ್ರಿಕಾರಂಗ ಮತ್ತು… pic.twitter.com/ebbkmAf27R
— CM of Karnataka (@CMofKarnataka) October 9, 2023