ವಾಟ್ಸಾಪ್, ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಸತ್ಯಕ್ಕಿಂತ ಸುಳ್ಳು ಸುದ್ದಿಗಳೇ ಹೆಚ್ಚಾಗಿ ಹರಿದಾಡುತ್ತವೆ. ಇಂತಹ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಮಾಧ್ಯಮಗಳು ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ ಸತ್ಯ ಸುದ್ದಿಗಳನ್ನು ಬಿತ್ತರಿಸಬೇಕು ಎಂದು ಗ್ರಾಮೀಣ ಕೂಲಿಕಾರರ ಸಂಘದ ರಾಜ್ಯ ಸಂಚಾಲಕಿ ಸ್ವರ್ಣ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಸ್ ಮೀಡಿಯಾ ಫೌಂಡೇಷನ್ ಆಯೋಜಿಸಿದ್ದ ನಾಗರಿಕ ಪತ್ರಕರ್ತರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ಸಾಮಾಜಿಕ ಜಾಲತಾಣದಲ್ಲಿ ನಮಗೆ ಸಿಗುವ ಸುದ್ದಿಗಳನ್ನು ಪರಾಮರ್ಶೆ ನಡೆಸದೆ ಹಂಚಿಕೊಳ್ಳುತ್ತೇವೆ. ಇದರಿಂದಾಗಿ ಪರಸ್ಪರ ಸಂಬಂಧಗಳೇ ಹಾಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ನಮ್ಮ ಮೊಬೈಲ್ ಗೆ ಬಂದ ಸುದ್ದಿಗಳೇ ನಾವು ಸತ್ಯ ಎಂದು ನಂಬುವಷ್ಟರ ಮಟ್ಟಿಗೆ ನಾವು ಸುಳ್ಳು ಸುದ್ದಿಗಳಿಗೆ ಅವಲಂಭಿತರಾಗಿದ್ದೇವೆ. ಮಾಧ್ಯಮಗಳು ಸುಳ್ಳುಗಳನ್ನು ಬಿತ್ತರಿಸದೇ ಸತ್ಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಸಹಬಾಳ್ವೆ ಉಡುಪಿಯ ನಾಗೇಶ್ ಉದ್ಯಾವರ್ ಮಾತನಾಡಿ, “ಈದಿನ.ಕಾಮ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖರವಾದ ಸಮೀಕ್ಷೆ ನಡೆಸಿ ಜನಮನ್ನಣೆ ಪಡೆದಿದೆ. ಯಾರೂ ಕೂಡ ಊಹಿಸದಂತಹ ಸಮೀಕ್ಷೆ ನಡೆಸಿತ್ತು. ಇಷ್ಟು ನಿಖರವಾದ ಸಮೀಕ್ಷೆಯನ್ನು ದೊಡ್ಡ ಮಾಧ್ಯಮಗಳು ಕೂಡ ನೀಡಿರಲಿಲ್ಲ. ಈದಿನ.ಕಾಮ್ ಜನಸಾಮಾನ್ಯರ ಧ್ವನಿಯಗಿ ಮುಂದುವರೆಯಲಿ” ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಪೀರ್ ಸಾಹೇಬ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಸ್ ಮೀಡಿಯಾ ಫೌಂಡೇಶನ್ ವ್ಯವಸ್ಥಾಪಕ ಉಮರ್ ಯು.ಹೆಚ್ ವಹಿಸಿದ್ದರು. ಈದಿನ.ಕಾಮ್ ಕರಾವಳಿ ವಲಯ ವರದಿಗಾರ ಶಾರೂಕ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು.