ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರರ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಹಾಬಾದ್ ತಹಶೀಲ್ದಾರ್ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಶಹಾಬಾದ್ ಕ್ರಾಸ್ ಮುಖ್ಯ ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪತ್ರಿಭಟನೆಯಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ, “ಕಲಬುರಗಿ ಜಿಲ್ಲೆಯ ಹೊಸ ತಾಲೂಕು ಶಹಾಬಾದ ನಗರ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಅದರಲ್ಲೂ ನಗರದ ಹೃದಯ ಭಾಗವಾಗಿರುವ ವಾಡಿ ಕ್ರಾಸ್(ಎಬಿಎಲ್)ನಿಂದ ಎಸ್ ಎಸ್ ಮರಗೋಳ ಕಾಲೇಜಿನ ವರೆಗೆ ರಾಜ್ಯ ಹೆದ್ದಾರಿಯಲ್ಲಿ ನಿತ್ಯವೂ ನೂರಾರು ಶಾಲಾ ಮಕ್ಕಳು, ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಭಾರೀ ಪ್ರಮಾಣದ ವಾಹನಗಳು ಸಂಚರಿಸುತ್ತಿದ್ದು, ರಾಜ್ಯ ಹೆದ್ದಾರಿಯು ಸಂಪೂರ್ಣವಾಗಿ ತಗ್ಗು, ಗುಂಡಿಗಳಿಂದ ಕೂಡಿದೆ. ವರ್ಷಪೂರ್ತಿ ಬೇಸಿಗೆಯಲ್ಲಿ ಧೂಳಿನ ಸ್ನಾನ, ಮಳೆಗಾಲದಲ್ಲಿ ಕೆಸರಿನ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ರಸ್ತೆಯಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರು ಹಿಡಿ ಶಾಪ ಹಾಕಿ ಪ್ರಯಾಣಿಸುವ ಸ್ಥಿತಿ ಬಂದಿದೆ. ಈ ಹೆದ್ದಾರಿಗೆ ಶಾಸಕರು, ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ರಸ್ತೆ ಮಾತ್ರ ಸುಧಾರಣೆಗೊಂಡಿಲ್ಲ. ಎರಡು ಬಾರಿ ಟೆಂಡರ್ ಕರೆದು 6 ಕೋಟಿ ರೂ. ವೆಚ್ಚ ಮಾಡಿದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ” ಎಂದು ಆರೋಪಿಸಿದರು.
ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರು, ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಈ ರಸ್ತೆ ಸಮಸ್ಯೆಗೆ ಪರಿಹಾರ ಸಿಗದೆ ಹತಾಶರಾಗುತ್ತಿದ್ದಾರೆ. ಆದ್ದರಿಂದ ಎಲ್ಲ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಆಂದೋಲನದಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
“ಕೂಡಲೇ ಈ ರಾಜ್ಯ ಹೆದ್ದಾರಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಎರಡು ಬಾರಿ ಟೆಂಡರ್ ಕರೆದು 6 ಕೋಟಿ ರೂ. ಲೂಟಿ ಮಾಡಿದ ಅಧಿಕಾರಿಗಳನ್ನು ಕೂಡಲೇ ವಜಾಗೋಳಿಸಬೇಕು. ವಾಡಿ ಕ್ರಾಸ್ನಿಂದ ಮರಗೋಳ ಕಾಲೇಜು ಮುಖಾಂತರ ತೋನಸನಹಳ್ಳಿ ಹಾಗೂ ಜೇವರ್ಗಿ ಕ್ರಾಸ್(ಫೀರೋಜಾಬಾದ ಕ್ರಾಸ್) ವರೆಗೆ ಗುಣಮಟ್ಟದ ಹೊಸ ರಾಜ್ಯ ಹೆದ್ದಾರಿ ನಿರ್ಮಿಸಬೇಕು. ಸ್ಥಗಿತಗೊಳಿಸಿರುವ ಜೇವರ್ಗಿ ಬಸ್ಗಳನ್ನು ಕೂಡಲೇ ಪ್ರಾರಂಭ ಮಾಡಬೇಕು. ವಾಡಿ ಕ್ರಾಸ್ನಿಂದ ಎಸ್ ಎಸ್ ಮೆರಗೋಳ ಕಾಲೇಜುವರೆಗೆ ಕೂಡಲೇ ಬೀದಿದೀಪ ಆಳವಡಿಸಬೇಕು” ಎಂದು ಆಗ್ರಗಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಗಾಂಧಿ ಹಂತಕನ ಚಿತ್ರ ಪ್ರದರ್ಶನ
ಈ ಸಂದರ್ಭದಲ್ಲಿ ಗುಂಡಮ್ಮ ಮಡಿವಾಳ, ಜಗನ್ನಾಥ ಎಸ್ ಎಚ್, ಮರಿಯಪ್ಪ ಹಳ್ಳಿ, ರಾಘವೇಂದ್ರ ಎಂ ಜಿ, ಪೂಜಪ್ಪ ಎಸ್, ಮೇತ್ರಿ, ನಾಗಣ್ಣ ರಾಂಪೂರೆ, ರಾಮಣ್ಣ ಇಂಬ್ರಾಹಿಂಪುರ, ಮಹ್ಮದ ಮಾಸ್ತನ್, ನಾಗಪ್ಪ ರಾಯಚೂರುಕರ್, ಗಣಪತರಾವ ಮಾನೆ, ವಿಶ್ವರಾಜ ಫಿರೋಜಾಬಾದ, ಮಲ್ಲಣ್ಣ ಮಸ್ಕಿ, ಶರಣಗೌಡ ಪಾಟೀಲ್, ಯಲ್ಲಾಲಿಂಗ ಹೈಯ್ಯಾಳಕರ, ಮಲ್ಲೇಶಿ ಭಜಂತ್ರಿ, ಮಲ್ಲಣ್ಣ, ರಾಯಪ್ಪ ಹುರಮುಂಜಿ, ಚಂದ್ರಕಾಂತ ಪಾಟೀಲ್, ಮೆಹಬೂಬ ಮದರಿ, ಮಹಾದೇವ ತರನಳ್ಳಿ, ಸತೀಶ್ ಕೊಬಾಳಕರ್, ಶರಣಬಸ್ಸಪ್ಪಾ ಕೋಬಾಳ್, ಪ್ರವೀಣ ರಾಜನ್, ಮಲ್ಲಣ್ಣ ಮರ್ತೂರ್, ಎಂ ಡಿ ಯೂನೂಸ, ಮಲ್ಲಿಕಾರ್ಜುನ ಗೌಡ ಹಳ್ಳಿ, ರಫೀಕ್ ಬಾಗವಾನ ಇದ್ದರು.