ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರದಂದು ಅವರನ್ನು ಭೇಟಿ ಮಾಡಿದ ನಿಯೋಗ ಮಾತನಾಡಿದ್ದು, “2022-23ನೇ ಸಾಲಿನ ಶಿಕ್ಷಕರ ವರ್ಗಾವಣೆಯಿಂದ ರಾಯಚೂರು ಜಿಲ್ಲೆಯ ಶಾಲೆಗಳು ಖಾಲಿಯಾಗಿವೆ. ಅದರಲ್ಲೂ 52,000 ಮಂದಿ ಮಕ್ಕಳಿರುವ ದೇವದುರ್ಗ ತಾಲೂಕಿನಿಂದ 373, 52,000 ಮಕ್ಕಳಿರುವ ಮಾನ್ವಿಯಿಂದ 351, ಸಿಂಧನೂರಿನಿಂದ 401, ಲಿಂಗಸೂಗೂರಿನಿಂದ 380, ರಾಯಚೂರು ತಾಲೂಕಿನಿಂದ 280 ಶಿಕ್ಷಕರು ವರ್ಗಾವಣೆಯಾಗಿದ್ದರು” ಎಂದು ಹೇಳಿದರು.
“ವರ್ಗಾವಣೆಗೊಂಡ ಶಿಕ್ಷಕರನ್ನು ಖಾಯಂ ಶಿಕ್ಷಕರ ನೇಮಕಾತಿ ಮಾಡುವವರೆಗೂ ಬಿಡುಗಡೆ ಮಾಡದಂತೆ ಜಿಲ್ಲೆಯಾದ್ಯಂತ ಹೋರಾಟಗಳನ್ನು ಮಾಡಲಾಗಿತ್ತು. ಕಳೆದ ಆಗಸ್ಟ್ 25ರಂದು ಮುಖ್ಯಮಂತ್ರಿ, ಶಿಕ್ಷಣ ಸಚಿವ, ಉಸ್ತುವಾರಿ ಸಚಿವ, ಶಿಕ್ಷಣ ಇಲಾಖೆಯ ಆಯುಕ್ತರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿ ಶಿಕ್ಷಕರನ್ನು ಬಿಡುಗಡೆ ಮಾಡದಂತೆ ಮತ್ತು ಖಾಯಂ ಶಿಕ್ಷಕರ ನೇಮಕಾತಿ ಮಾಡಲು ಒತ್ತಾಯಿಸಲಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಯನ್ನು ಮನಗಂಡು ಸೆಪ್ಟಂಬರ್ 17ರಂದು ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಲು ಉಪ ನಿರ್ದೇಶಕರಿಗೆ ಸೂಚಿಸಿದ್ದರು” ಎಂದರು.
ಜಿಲ್ಲಾಧಿಕಾರಿಯವರೂ ಕೂಡಾ ಶಿಕ್ಷಕರ ಬಿಡುಗಡೆ ತಡೆಗೆ ಆದೇಶಿಸಿ ಸೂಚಿಸಿದ್ದರು. ಪರಿಣಾಮ ಬಿಡುಗಡೆಗೆ ತಾತ್ಕಾಲಿಕ ತಡೆ ಬಿದ್ದಿತ್ತು. ಇದಕ್ಕಾಗಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಕೂಡ ಮನವಿ ಸಲ್ಲಿಸಿದ್ದು, ಚಳವಳಿ ನಡೆಸಿದ್ದರು. ಆದರೂ ಕೂಡ ಸರ್ಕಾರ ಈ ಜಿಲ್ಲೆಯ ಮಕ್ಕಳ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬದಲಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆಂದು ಹೇಳಿ ದೇಶದಲ್ಲೇ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಸಮಸ್ಯೆಯನ್ನು ಸರ್ಕಾರ ಮರೆಮಾಚುತ್ತಿದೆ” ಎಂದು ಆರೋಪಿಸಿದರು.
“ಈ ವರ್ಗಾವಣೆಯಿಂದ ಪ್ರತಿ ತಾಲೂಕಿನಲ್ಲಿ 85ರಿಂದ 100 ಶಾಲೆಗಳು ಶೂನ್ಯ ಶಿಕ್ಷಕ ಶಾಲೆಗಳಾಗಿವೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳು ಮುಚ್ಚುತ್ತಿದ್ದು, ಸಿರವಾರ ತಾಲೂಕಿನ ಜಕ್ಕಲ ದಿನ್ನಿ ಕ್ಯಾಂಪ್, ಕಡದಿನ್ನಿ ಕ್ಯಾಂಪ್, ಅತ್ತನೂರು ಅಂಜನೇಯ ಕ್ಯಾಂಪ್, ಬಾಗಲವಾಡದ ಲಕ್ಷ್ಮೀ ಕ್ಯಾಂಪ್, ಚಾಗಬಾವಿ ಕ್ಯಾಂಪ್ ಹಾಗೂ ಮಸ್ಕಿಯ ಬೊಂಬಾಯಿ ದೊಡ್ಡಿ, ಲಿಂಗಸೂಗೂರಿನ ಮಲ್ಲಾಪೂರು ಕ್ಯಾಂಪ್ ಸೇರಿದಂತೆ ಜಿಲ್ಲೆಯ ಇನ್ನೂ ಅನೇಕ ಶಾಲೆಗಳು ಮುಚ್ಚಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್ ಆಗ್ತದೆ ಎನ್ನುತ್ತಿರುವ ಮಹಿಳೆಯರು
“ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ನೇಮಕಾತಿ ಮಾಡಲು ಮುಂದಾಗಬೇಕು. ವರ್ಗಾವಣೆಗೊಂಡ ಶಿಕ್ಷಕರನ್ನು ಮಾರ್ಚ್ ತಿಂಗಳವರೆಗೂ ಬಿಡುಗಡೆ ಮಾಡಬಾರದು. ಈಗ ಹೊರಡಿಸಿದ ಆದೇಶ ಹಿಂಪಡೆಯಬೇಕು” ಎಂದು ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದವು.
ನಿಯೋಗದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ರಾಜ್ಯ ಮುಖಂಡ ಸಾಮಾಜಿಕ ಹೋರಾಟಗಾರ ಶಿವರಾಜ್ ಕೊತ್ತದೊಡ್ಡಿ, ಹೊನ್ನಪ್ಪ ನಾಯಕ ವಕೀಲರು, ಮಹಮದ್ ಹನೀಫ್, ಅಲ್ಲಾಭಕ್ಷ, ರಾಜರತ್ನಂ, ಸುದೀರ್ ಕುಮಾರ್ ಇದ್ದರು.
ವರದಿ : ರಮೇಶ ವೀರಾಪೂರು