ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿದ್ಯಾರ್ಹತೆಗೆ ತಕ್ಕಂತೆ ಗ್ರೇಡ್ ನೀಡಬೇಕು ಎಂದು ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಜಿ-12 ದರ್ಜೆಯಲ್ಲಿ ಸಾಮಾನ್ಯ ಕೆಲಸಗಾರಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆನುಕಂಪದ ಆಧಾರದ ಮೇಲೆ ಸುಮಾರು 7 ರಿಂದ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ಈ ಹಿಂದೆ, 2013-14ರಲ್ಲಿ ಹಟ್ಟಿ ಚಿನ್ನದ ಗಣಿಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ ಕೆಲಸಗಾರರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಯನ್ನು ಕೊಟ್ಟಿದ್ದಾರೆ. ಆದರೆ, ಈಗ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆ ನೀಡಲಾಗುತ್ತಿಲ್ಲ. ಚಿನ್ನದ ಗಣಿ ನಿರ್ದೇಶಕ ಮಂಡಳಿಯಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕೆಂಬ ನಿಯಮವಿದೆ. ಆ ನಿಯಮಗಳನ್ನು ಗಾಳಿಗೆ ತೂರಿ ಹೊಸದಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಗಣಿಯ ಕೆಲಸದಲ್ಲಿ ಅನುಭವವಿದೆ. ಕಂಪನಿಯಲ್ಲಿ ಪಧವೀದರರು, ಎಂ.ಎ, ಎಂ.ಕಾಂ, ಬಿ.ಕಾಮ್, ಎಮ್.ಎಸ್.ಡಬ್ಲ್ಯೂ, ಡಿಪ್ಲೋಮಾ, ಡಿಪ್ಲೋಮಾ ನರ್ಸಿಂಗ್, ಬಿಎಸ್ಸಿ ಸರ್ಸಿಂಗ್, ಓಟಿ ಟೆಕ್ನಿಸಿಯನ್, ಲ್ಯಾಬ್ ಟೆಕ್ನಿಷಿಯನ್, ಐಟಿಐ ಹಾಗೂ ಇನ್ನಿತರ ಕೋರ್ಸುಗಳನ್ನು ಮುಗಿಸಿದವರು ಇದ್ದಾರೆ. ಕಂಪನಿಯಲ್ಲಿ ಸೇವೆಗೆ ಸೇರಿಕೊಳ್ಳುವಾಗಲೇ ನಮ್ಮ ಸರ್ಟಿಫಿಕೇಟ್ಗಳನ್ನು ನೀಡಿದ್ದೇವೆ. ಹೀಗಾಗಿ, ಖಾಲಿ ಇರುವ ಹುದ್ದೆಗಳಿಗೆ ನಮ್ಮನ್ನೇ ಪರಿಗಣಿಸಬೇಕು, ನೇಮಕ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸಿಐಟಿಯು ಜಿಲ್ಲಾಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಮುಖಂಡರಾದ ರಮೇಶ್ ವೀರಾಪೂರು, ಅಲ್ಲಾಭಕ್ಷ, ರಾಜರತ್ನಂ, ಸುದೀರ್ ಕುಮಾರ, ಅರುಣ್ ವಿ.ಇದ್ದರು.