ವಿಜಯಪುರ ಮಹಾನಗರ ಪಾಲಿಕೆಯ ಜೆಡಿಎಸ್, ಎಐಎಂಐಎಂ ಮುಂತಾದ ಪಕ್ಷಗಳ ಏಳು ಮಂದಿ ಕಾರ್ಪೊರೇಟರ್ಗಳು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರ ಬೆಂಗಳೂರು ನಿವಾಸದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ಅಶೋಕ ನ್ಯಾಮಗೌಡ, ವಿಮಲಾ ರಫೀಕ್ ಕಾನೆ, ಅಲ್ತಾಫ್ ಇಟಗಿ, ಜೆಡಿಎಸ್ ಸದಸ್ಯೆ ಸುಮಿತ್ರಾ ರಾಜು ಜಾದವ, ಎಐಎಂಐಎಂನ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಾಲಿಕೆಯ ಮತ್ತೋರ್ವ ಸದಸ್ಯೆಯೊಬ್ಬರೂ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಆದರೆ, ಅವರು ಕಾರಣಾಂತರಗಳಿಂದ ಇಂದು ಬಂದಿರಲಿಲ್ಲ ಎಂದು ತಿಳಿದುಬಂದಿದೆ.
ಒಟ್ಟು 35 ಮಂದಿ ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ 10 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಈ ಸೇರ್ಪಡೆಯೊಂದಿಗೆ ಈಗ ಕಾಂಗ್ರೆಸ್ ಕಾರ್ಪೊರೇಟರ್ಗಳ ಸಂಖ್ಯೆ 18ಕ್ಕೇರಿದೆ. ಅಲ್ಲದೇ, ತಲಾ ಇಬ್ಬರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಸದಸ್ಯರ ಒಟ್ಟು ಸಂಖ್ಯೆ 22ಕ್ಕೆ ಏರಿದ್ದು, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಂತಾಗಿದೆ. ಇದರಿಂದಾಗಿ ಸದ್ಯದಲ್ಲೇ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನ ಗೆಲುವು ನಿಚ್ಛಳವಾಗಿದೆ.
ಸಚಿವ ಎಂ ಬಿ ಪಾಟೀಲ್ ಅವರು ಕಳೆದ ಎರಡು ವಾರಗಳಿಂದ ಅಮೆರಿಕಾದಲ್ಲಿ ಅಧಿಕೃತ ಪ್ರವಾಸದಲ್ಲಿದ್ದರು. ಅವರು ಬುಧವಾರ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಈ ವಿದ್ಯಮಾನ ನಡೆದಿದೆ. ಸ್ವತಃ ಎಂ ಬಿ ಪಾಟೀಲ್ ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಅವರು ಸದಸ್ಯರಿಗೆ ಶಾಲು ಹೊದಿಸಿ ಕಾಂಗ್ರೆಸ್ಗೆ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಎಐಡಿಎಸ್ಒ ಒತ್ತಾಯ
ಏಳು ಜನ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಸಚಿವ ಎಂ ಬಿ ಪಾಟೀಲ್ ಮಾತನಾಡಿ, “ಕಾಂಗ್ರೆಸ್ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಹೀಗಾಗಿ ಪಕ್ಷೇತರರು ಮತ್ತು ಇನ್ನುಳಿದ ಪಕ್ಷಗಳ ಸದಸ್ಯರು ತಾವಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇವರನ್ನೆಲ್ಲ ನಾನು ಸ್ವಾಗತಿಸುತ್ತೇನೆ. ಮುಂಬರುವ ದಿನಗಳಲ್ಲಿ ವಿಜಯಪುರ ನಗರಕ್ಕೆ ನಮ್ಮಿಂದ ಸಮರ್ಥ ಆಡಳಿತ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ, ಮುಖಂಡರುಗಳಾದ ಅಬ್ದುಲ್, ಹಮೀದ್, ಮುಶ್ರಿಫ್ ಸೇರಿದಂತೆ ಇತರರು ಇದ್ದರು.