ಹೆದ್ದಾರಿಯ ಬದಿಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರು ಬೈಕ್ ಸವಾರರ ಮೇಲೆ ಲಾರಿಯೊಂದು ಹರಿದಿದ್ದು, ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ವಿಜಯಪುರದ ವಜ್ರಹನುಮಾನ ನಗರದ ನಿವಾಸಿ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಈ ನಾಲ್ವರು ಸ್ನೇಹಿತರು ಊಟಕ್ಕೆಂದು ಹೊರಗೆ ಹೋಗಿದ್ದರು. ಊಟ ಮುಗಿಸಿ, ಹೆದ್ದಾರಿಯಲ್ಲಿದ್ದ ಟೋಲ್ಗೇಟ್ ಸಮೀಪದ ಟ್ರಕ್-ಬೇ ಬಳಿಯ ಡಿವೈಡರ್ ಮೇಲೆ ಕುಳಿತಿದ್ದರು. ಈ ವೇಳೆ, ವೇಗವಾಗಿ ಬಂದ ಲಾರಿ ಯುವಕರ ಮೇಲೆ ಹರಿದಿದೆ.
ತೀವ್ರ ಗಾಯಗೊಂಡಿದ್ದ ಯುವಕರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ, ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.