- ಪಕ್ಷದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇನೆ
- ವರ್ಗಾವಣೆ ವಿಚಾರವಾಗಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ
ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಆಗಿದೆ. ಪಕ್ಷದ ಹಿತದೃಷ್ಟಿಯಿಂದ ಹೊಂದಾಣಿಕೆ ಆಗಿದ್ದೇನೆ. ಹೀಗಂದ ಮಾತ್ರಕ್ಕೆ ನನ್ನ ಮೌನ ದೌರ್ಬಲ್ಯವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ರಾಜಕಾರಣದ ಬಗ್ಗೆ ತಲೆಎತ್ತಿರುವ ವಿವಾದದ ಹಿನ್ನಲೆಯಲ್ಲಿ ಮೌನ ಮುರಿದ ಅವರು ಬೆಂಗಳೂರಿನಲ್ಲಿ ಮಾತನಾಡಿ, “ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಆಗಿದೆ. ಈ ಹಿಂದೆ ಸಾಕಷ್ಟು ಭಾರಿ ಆಗಿದೆ. ನಾನು ಕೂಡ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ” ಎಂದರು.
“ನಾನು ಎಲ್ಲವನ್ನು ಅನುಸರಿಸಿಕೊಂಡು ಬರುತ್ತಿರುವೆ. ಪಕ್ಷದ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಕಳೆದ 30 ವರ್ಷದ ರಾಜಕೀಯದಲ್ಲಿ ನನ್ನ ಮೌನ ಸಕ್ಸಸ್ ಕೊಟ್ಟಿದೆ” ಎಂದು ಹೇಳಿದರು.
“ಕೆಲವು ವರ್ಗಾವಣೆಗೆ ಶಿಫಾರಸು ಮಾಡಿದ್ದೆ. ಅದನ್ನು ಮಾಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ನಿಗಮ, ಮಂಡಳಿ ಕಾರ್ಯಕರ್ತರಿಗೆ ಕೊಡಿ ಅಂತ ಶಿಫಾರಸು ಮಾಡಿರುವೆ. ಕೇವಲ ಶಾಸಕರಿಗೆ ಮಾತ್ರ ಬೇಡ ಅಂತನೂ ಹೇಳಿದ್ದೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸತೀಶಣ್ಣ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
“ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್ಸಿಗೆ ಬರುವಾಗ ನನ್ನ ಜೊತೆ ಮಾತನಾಡಿದ್ದರು. ಕಿರಿಕಿರಿ ಮಾಡೋದಾದರೆ ನಾನು ಬರಲ್ಲ ಅಂದಿದ್ದರು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಹೆಸರನ್ನು ನೀಡಿದ್ದೇನೆ. ಲಕ್ಷ್ಮಣ ಸವದಿ ಎಲ್ಲೂ ಕಾರ್ಯಾಧ್ಯಕ್ಷ ಸ್ಥಾನ ಕೇಳಿಲ್ಲ. ಮಾಡೋದಾದ್ರೆ ನಮ್ಮ ಅಭ್ಯಂತರ ಏನು ಇಲ್ಲ. ಸವದಿ, ನಿಂಬಾಳ್ಕರ್ ಯಾರೆ ಕಾರ್ಯಾಧ್ಯಕ್ಷರಾದ್ರೂ ಅಡ್ಡಿಯಿಲ್ಲ” ಎಂದು ಹೇಳಿದರು.
“ಟೂರ್ ಪ್ಲ್ಯಾನ್ ಮುಂದೆ ಕೂಡ ಇರುತ್ತೆ. ನಾವು ಟೂರು ಮಾಡಲು ಯಾವುದೇ ಅಡ್ಡಿಯಿಲ್ಲ. ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ. ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು. ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆ” ಎಂದರು.