ಮಳೆ ಕೊರತೆ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆಸ್ಪತ್ರೆಗಳು, ಹೋಟೆಲ್ಗಳು ಹಾಗೂ ಡ್ರೈ-ಕ್ಲೀನಿಂಗ್ ಸೌಲಭ್ಯಗಳನ್ನು ಪೂರೈಸುವ ಧೋಬಿ ಘಾಟ್ಗಳು (ತೆರೆದ ಗಾಳಿ ಲಾಂಡ್ರಿಗಳು) ಸೇರಿದಂತೆ ಅಂತರ್ಜಲವನ್ನು ಅವಲಂಬಿಸಿರುವವರ ಮೇಲೆ ಇದು ಗಮನಾರ್ಹವಾಗಿ ಪರಿಣಾಮ ಬೀರಿದೆ.
ಈಗಾಗಲೇ, ಶ್ರೀನಗರ ಧೋಬಿ ಘಾಟ್ನಲ್ಲಿರುವ ಮೂರು ಬೋರ್ವೆಲ್ಗಳ ಪೈಕಿ ಎರಡು ಬತ್ತಿ ಹೋಗಿವೆ. ಹೀಗಾಗಿ, ಧೋಬಿ ಕಾರ್ಮಿಕರು ಪಾಳಿಯಲ್ಲಿ ಬಟ್ಟೆ ಒಗೆಯುವಂತಾಗಿದೆ. ಧೋಬಿಗಳ ಕೆಲಸ ಮತ್ತು ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.
“ನೀರಿನ ಕೊರೆತ ಎದುರಾಗಿದೆ. ಎಲ್ಲರೂ ಒಂದೇ ಬಾರಿಗೆ ಕೆಲಸ ಮಾಡುವಷ್ಟು ನೀರು ಸಹ ಇಲ್ಲ. ಇದರಿಂದ ನಾವು ಪಾಳಿಯಲ್ಲಿ ಕೆಲಸ ಮಾಡುವಂತಾಗಿದೆ. ಶ್ರೀನಗರ ಧೋಬಿ ಘಾಟ್ನಲ್ಲಿರುವ ಕ್ವಾರ್ಟರ್ಸ್ನಲ್ಲಿ ಸುಮಾರು 112 ಕುಟುಂಬಗಳು ವಾಸಿಸುತ್ತಿದ್ದು, ಗೃಹ ಬಳಕೆಗಾಗಿಯೂ ನೀರಿನ ಸಮಸ್ಯೆ ಎದುರಾಗಿದೆ” ಎಂದು ಶ್ರೀನಗರದಲ್ಲಿ 54 ವರ್ಷಗಳಿಂದ ಧೋಬಿ ಘಾಟ್ ನಡೆಸುತ್ತಿರುವ ಹಿಂದೂಲಿಡಾ ಧೋಬಿ ಘಾಟ್ ಮಡಿವಾಳ ಸಂಘದ ಉಪ ಖಜಾಂಚಿ ಲಕ್ಷ್ಮಿ ನಾರಾಯಣ ಹೇಳಿದರು.
“ಭಾರೀ ಹೊರೆಯಿಂದಾಗಿ ಶ್ರೀನಗರದ ಕಾರ್ಮಿಕರು ಟ್ಯಾಂಕರ್ಗಳನ್ನು ಪಡೆಯದಿರಲು ನಿರ್ಧರಿಸಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ₹900 ರಿಂದ ₹1,000 ನೀಡಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕ್ಕೊಳ್ಳುತ್ತಿದ್ದೆವು. ನಮಗೆ ನೀರು ಮೂಲಭೂತವಾಗಿದೆ. ನಮಗೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುವುದರಿಂದ ನಾವು ಅದನ್ನು ಪಡೆಯಲು ಸಾಧ್ಯವಿಲ್ಲ” ಎಂದು ನಾರಾಯಣ್ ಹೇಳಿದರು.
“ಬೇಸಿಗೆಯಲ್ಲಿ ನೀರಿನ ಕೊರತೆಯು ಈಗ ಸಮುದಾಯವನ್ನು ಚಿಂತೆಗೆ ದೂಡಿದೆ. ಬೇಸಿಗೆಯ ತಿಂಗಳುಗಳನ್ನು ನಿರ್ವಹಿಸುವುದು ಕಷ್ಟ. ಈ ವರ್ಷ, ಮುಂಗಾರು ವಿಫಲವಾಗಿದೆ. ಅಕ್ಟೋಬರ್ನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಮುಂದಿನ ಬೇಸಿಗೆಯನ್ನು ನಿಭಾಯಿಸುವುದು ಸವಾಲಾಗಿದೆ. ಶ್ರೀನಗರ ಧೋಬಿ ಘಾಟ್, ರಾಜಾಜಿನಗರ ಧೋಬಿ ಘಾಟ್ ಮತ್ತು ಮಲ್ಲೇಶ್ವರಂ ಧೋಬಿ ಘಾಟ್ಗಳಲ್ಲಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದರೆ, ನಮ್ಮ ನೀರಿನ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಗ್ಗಿಸಬಹುದು” ಎಂದು ನಾರಾಯಣ್ ಹೇಳಿದರು.
“ಈ ಘಾಟ್ಗಳಲ್ಲಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕುರಿತು ಅನೇಕ ಚರ್ಚೆಗಳು ನಡೆದಿದ್ದರೂ, ಹೆಚ್ಚಿನ ಪ್ರಮಾಣದ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದ್ದರೂ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ವೈಯಾಲಿಕಾವಲ್ ಮತ್ತು ರಾಜಾಜಿನಗರ ಧೋಬಿ ಘಾಟ್ಗಳಲ್ಲಿ ಕೆಲವು ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಯಾವುದೂ ಕಾರ್ಯನಿರ್ವಹಿಸುತ್ತಿಲ್ಲ” ಎಂದು ಶ್ರೀನಗರ ಧೋಬಿ ಘಾಟ್ನ ಕಾರ್ಮಿಕರೊಬ್ಬರು ಹೇಳಿದರು.
“ಪ್ರತಿದಿನ ಒಂದು ಗಂಟೆ ಮಾತ್ರ ಬಟ್ಟೆ ತೊಳೆಯುವ ಉದ್ದೇಶಕ್ಕಾಗಿ ನೀರನ್ನು ಪಂಪ್ ಮಾಡಲಾಗುತ್ತದೆ. ನಮ್ಮಲ್ಲಿ ಕೆಲವರು ಆ ಸಮಯದಲ್ಲಿ ಬಟ್ಟೆ ತೊಳೆಯುತ್ತಾರೆ. ಮತ್ತೆ ಉಳಿದವರು ನೀರನ್ನು ಬಳಸಲು ಸಂಗ್ರಹಿಸುತ್ತಾರೆ. ನಾವೂ ಸಹ ಮನೆಯ ಅಗತ್ಯಗಳನ್ನು ಪೂರೈಸಬೇಕಾಗಿರುವುದರಿಂದ ನಮಗೆ ಪಾಲಿಕೆಯಿಂದ ಪೂರೈಕೆಯಾಗುವ ನೀರನ್ನು ಹೊರತುಪಡಿಸಿ ಬೇರೆ ಯಾವ ಸೌಲಭ್ಯಗಳಿಲ್ಲ” ಎಂದು ಧೋಬಿ ಘಾಟ್ನ ಕೆಲಸಗಾರ ರಂಗಪ್ಪ (ಹೆಸರು ಬದಲಾಯಿಸಲಾಗಿದೆ) ಹೇಳಿದರು.
“ನಗರದಲ್ಲಿ ಸುಮಾರು 40 ಧೋಬಿ ಘಾಟ್ಗಳಿವೆ. ಹೆಚ್ಚಿನವು ಇದೇ ರೀತಿಯ ನೀರಿನ ಸವಾಲುಗಳನ್ನು ಎದುರಿಸುತ್ತಿವೆ. ಕೆಲವರು ಲಭ್ಯವಿರುವ ನೀರಿನಲ್ಲಿ ಪಾಳಿ ಮೂಲಕ ಬಟ್ಟೆ ಒಗೆದರೆ, ಇನ್ನೂ ಕೆಲವರು ನೀರಿನ ಟ್ಯಾಂಕರ್ಗಳನ್ನು ಬುಕ್ ಮಾಡುತ್ತಾರೆ. ಇದರಿಂದ ಅವರ ಜೇಬು ಖಾಲಿಯಾಗುತ್ತದೆ” ಎಂದರು.
“ಹಲವರು ಗ್ರಾಹಕರಿಗೆ ಬಟ್ಟೆಗಳನ್ನು ಒಗೆದು ವಿತರಣೆ ಮಾಡುವ ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಾಗಿ, ನಮ್ಮ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಟ್ಯಾಂಕರ್ ಮೂಲಕ ನೀರು ಪಡೆಯುವ ಅನಿವಾರ್ಯತೆ ಎದುರಾಗಿದೆ. ಆದಾಯದಲ್ಲಿ ಶೇ.50ರಷ್ಟು ಟ್ಯಾಂಕರ್ಗಳಿಗೆ ವೆಚ್ಚವಾಗಲಿದ್ದು, ಇದರಿಂದ ಭಾರಿ ಆರ್ಥಿಕ ಹೊರೆಯಾಗುತ್ತಿದೆ” ಎಂದು ಬೆಂಗಳೂರು ಉತ್ತರ ಮಡಿವಾಳ ಮಹಾಜನ ಸಂಘದ ಕಾರ್ಯದರ್ಶಿ ಗಂಗರಾಜು ಹೇಳಿದರು.
“ರಾಜಾಜಿನಗರ ಧೋಬಿ ಘಾಟ್ನ ಕಾರ್ಮಿಕರು ಇದನ್ನು ಸಂಪೂರ್ಣವಾಗಿ ಅವಲಂಬಿಸಿದ್ದು, ದಿನಕ್ಕೆ ಕನಿಷ್ಠ 20 ಟ್ಯಾಂಕರ್ಗಳ ಅಗತ್ಯವಿದೆ. ಆದರೆ, ಹಣಕಾಸಿನ ಮುಗ್ಗಟ್ಟಿನಿಂದ ಪ್ರತಿ ದಿನ ಟ್ಯಾಂಕರ್ಗಳನ್ನು ಪಡೆಯುವುದು ಕಷ್ಟಕರವಾಗಿದೆ” ಎಂದು ರಾಜಾಜಿನಗರ ಧೋಬಿ ಘಾಟ್ನ ಕಾರ್ಮಿಕರೊಬ್ಬರು ಹೇಳಿದರು.
“ಬಟ್ಟೆ ತೊಳೆಯುವ ಯಂತ್ರಗಳು ಮತ್ತು ಇತರ ಸಲಕರಣೆಗಳ ನಿರ್ವಹಣೆಗೆ ಬಿಬಿಎಂಪಿ ಧೋಬಿ ಕಾರ್ಮಿಕರಿಗೆ ಸಹಾಯ ಮಾಡುತ್ತದೆ. ಆದರೆ, ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದು ಅವರ ವ್ಯಾಪ್ತಿಯಿಂದ ಹೊರಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
“ಹಲವು ಘಾಟ್ಗಳ ಕಾರ್ಮಿಕರು ಹಣ ಕೋರಿ ಸ್ಥಳೀಯ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಕೆಲವು ಶಾಸಕರು ಸ್ಪಂದಿಸುತ್ತಿದ್ದಾರೆ. ಪೂರೈಸುವ ಭರವಸೆ ನೀಡಿದ್ದಾರೆ. ಆದರೆ, ಇದು ಯಾವಾಗ ನಡೆಯುತ್ತದೆ ಎಂಬುದರ ಕುರಿತು ಯಾವುದೇ ಟೈಮ್ಲೈನ್ ಇಲ್ಲ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ” ಎಂದು ಕಾರ್ಮಿಕರೊಬ್ಬರು ಹೇಳಿದರು.
“ಪರಿಸರವು ಸೂಕ್ತವಾಗಿದ್ದು, ಸಮುದಾಯಕ್ಕೆ ಹೆಚ್ಚಿನ ಸಹಾಯವಾಗುವುದರಿಂದ ಅಂತಹ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು. ಇದು ಮಳೆನೀರಿನ ಚರಂಡಿಗಳಿಗೆ ಪ್ರವೇಶಿಸುವ ಡಿಟರ್ಜೆಂಟ್ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಮಾಲಿನ್ಯವನ್ನು ತಡೆಯುತ್ತದೆ. ಮತ್ತೊಂದೆಡೆ ಧೋಬಿ ಘಾಟ್ನಲ್ಲಿ ಕಾರ್ಮಿಕರ ನೀರಿನ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ” ಎಂದು ತಜ್ಞರು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆರೆ/ಉದ್ಯಾನವನದ ನಿರ್ವಹಣೆಗೆ ಸ್ವಯಂ ಸೇವಕರಾಗಲು ನಾಗರಿಕರಿಗೆ ಕರೆ
ಸರ್ಕಾರವು ಉದ್ಯಮದ ಮಾದರಿಯನ್ನು ಅನುಸರಿಸಬೇಕು. ಇದು ನೀರನ್ನು ಮರುಬಳಕೆ ಮಾಡಲು ಸೂಕ್ತವಾದ ವಾತಾವರಣವಾಗಿದೆ. ಅನೇಕ ಕೈಗಾರಿಕೆಗಳು ತಾವು ಉತ್ಪಾದಿಸುವ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸುತ್ತವೆ. ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಧಿಯಿಂದ ಸ್ಥಾಪಿಸಲಾಗಿದೆ. ಧೋಬಿ ಘಾಟ್ಗಳಿಗೂ ಇದೇ ರೀತಿಯ ವ್ಯವಸ್ಥೆ ಮಾಡಬೇಕು. ಸರ್ಕಾರವು ಅವುಗಳನ್ನು ನಿರ್ವಹಿಸಬಹುದು. ಇಲ್ಲದಿದ್ದರೆ ಕಾರ್ಮಿಕರಿಗೆ ಹೊರೆಯಾಗಲಿದೆ’ ಎಂದು ಬೆಂಗಳೂರಿನ ನಾಗರಿಕ ಚಿಂತಕರ ಚಾವಡಿ ಪಾಣಿಯ ಸಹ-ಸಂಸ್ಥಾಪಕಿ ಮತ್ತು ಮೇಲ್ವಿಚಾರಕ ನಿರ್ಮಲಾ ಗೌಡ ಹೇಳಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್