ಮೀಸಲಾತಿಯನ್ನು ತೆಗೆದು ಒಗೆಯಿರಿ ಎಂದಿರುವ ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಅವರ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಗದೀಶ್ ಗುಡಗಂಟಿ ಅವರು ಮೀಸಲಾತಿ ತೆಗೆಯಿರಿ, ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದುಬಿಡುತ್ತಾರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಕಿಡಿಕಾರಿದ ಎಎಪಿ ಮುಖಂಡ ಜಗದೀಶ್ ವಿ ಸದಂ ಅವರು ಬಿಜೆಪಿಗರು ಸಂವಿಧಾನ ವಿರೋಧಿಗಳು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು, “ಬಡವರು ಮತ್ತು ಹಿಂದುಳಿದವರು ಎಲ್ಲರಂತೆ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಜೆಪಿಗರು ಸಹಿಸುವುದಿಲ್ಲ. ಎಸ್ಸಿ/ಎಸ್ಟಿ ಸೇರಿದಂತೆ ಇತರೆ ಹಿಂದುಳಿದ ವರ್ಗದವರು ಹಿಂದಿನಂತೆ ಕೂಲಿಗಳಾಗಿ, ಜೀತದಾಳುಗಳಾಗಿ ಬದುಕಬೇಕೆಂದು ಬಯಸುತ್ತಾರೆ. ಇವರು ಪ್ರಜಾಪ್ರಭುತ್ವ ವಿರೋಧಿಗಳು. ಬಿಜೆಪಿ ವಾಸ್ತವದಲ್ಲಿ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವುದಿದ್ದರೆ ತಕ್ಷಣ ಜಗದೀಶ್ ಗುಡಗಂಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಣ್ಣು ಭ್ರೂಣ ಲಿಂಗ ಪತ್ತೆ; ನಾಲ್ವರ ಬಂಧನ
“ಮೀಸಲಾತಿ ಹಕ್ಕು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಅತ್ಯಮೂಲ್ಯ ಕೊಡುಗೆಯಾಗಿದೆ. ಮೀಸಲಾತಿಯು ನಮ್ಮ ದೇಶದ ದೃಢೀಕರಣದ ಒಂದು ವ್ಯವಸ್ಥೆಯಾಗಿದ್ದು ಅದು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಐತಿಹಾಸಿಕವಾಗಿ ಅನುಕೂಲಕರ ಗುಂಪುಗಳಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ. ಭಾರತೀಯ ಸಂವಿಧಾನದಲ್ಲಿನ ನಿಬಂಧನೆಗಳ ಆಧಾರದ ಮೇಲೆ, ಇದು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಮತ್ತು ಪ್ರಾಂತ್ಯಗಳಿಗೆ ಮೀಸಲು ಕೋಟಾಗಳು ಅಥವಾ ಸೀಟುಗಳನ್ನು ಹೊಂದಿಸಲು ಅನುಮತಿಸುತ್ತದೆ. ಮೀಸಲಾತಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರಿಗೆ ಪರೀಕ್ಷೆಗಳು, ಉದ್ಯೋಗಾವಕಾಶಗಳು ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ” ಎಂದರು.