ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ನಿಯಂತ್ರಣದ ದೃಷ್ಟಿಯಲ್ಲಿ ದೆಹಲಿ ಮಾದರಿಯ ಪ್ರೀಮಿಯಂ ಬಸ್ಗಳ ಸಂಚಾರವನ್ನು ಬೆಂಗಳೂರಿನಲ್ಲಿಯೂ ಆರಂಭಿಸಬೇಕು ಎಂದು ಎಎಪಿ ಒತ್ತಾಯಿಸಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸರ್ಕಾರವು ‘ಪ್ರೀಮಿಯಂ ಬಸ್ ಅಗ್ರಿಗೇಟರ್ ಪಾಲಿಸಿ 2023’ಗೆ ಅನುಮೋದನೆ ನೀಡಿದೆ. ಈ ಮೂಲಕ ಬಡತನ ರೇಖೆಗಿಂತ ಮೇಲಿರುವ ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದವರನ್ನು ಬಸ್ಗಳಲ್ಲಿ ಸಂಚರಿಸುವಂತೆ ಉತ್ತೇಜನ ನೀಡುವ ಸಲುವಾಗಿ ಆ್ಯಪ್ ಆಧಾರಿತ ಆನ್ಲೈನ್ ಬಸ್ ಸೇವೆ ಯೋಜನೆಯನ್ನು ಆರಂಭಿಸಲಾಗಿದೆ. ಇ-ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ರಾಜ್ಯಪಾಲರ ಅನುಮೋದನೆ ಸಿಗುತ್ತಿದ್ದಂತೆ ಪ್ರೀಮಿಯಂ ಬಸ್ ಸೇವೆಗೆ ಚಾಲನೆ ಸಿಗಲಿದೆ.
ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು, “ಬಡವರು ಮತ್ತು ಬಡ ಮಧ್ಯಮ ವರ್ಗದವರು ಬಸ್ಗಳಲ್ಲಿ ಸಂಚರಿಸುತ್ತಾರೆ. ಹಾಗೆಯೇ, ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗದವರು ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಬಸ್ಗಳಲ್ಲೇ ನಿತ್ಯ ಓಡಾಡುವಂತೆ ಉತ್ತೇಜನ ನೀಡುವ ಸಲುವಾಗಿ ದೆಹಲಿ ಮಾದರಿಯ ಪ್ರೀಮಿಯಂ ಬಸ್ಗಳ ಸೇವೆಯನ್ನು ರಾಜ್ಯದ ಬೆಂಗಳೂರಿನಂತಹ ನಗರಗಳಲ್ಲಿ ಆರಂಭಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಒತ್ತಾಯಿಸಿದರು.
“ಎಸಿ, ವೈಫೈ, ಜಿಪಿಎಸ್, ಸಿಸಿಟಿವಿ ಸೇರಿದಂತೆ ಲಕ್ಸೂರಿ ಖಾಸಗಿ ವಾಹನಗಳಲ್ಲಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಒಳಗೊಂಡ ಆಧುನಿಕ ಬಸ್ಗಳು ಸಂಚಾರ ಆರಂಭಿಸಿದರೆ ಸ್ವಂತ ಕಾರುಗಳನ್ನು ಬಿಟ್ಟು ಬಸ್ಗಳಲ್ಲೇ ಸಂಚರಿಸಲು ಆರಂಭಿಸುತ್ತಾರೆ. ಈ ಮೂಲಕ ಸಂಚಾರ ದಟ್ಟಣೆ, ವಾಯು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳನ್ನು ಹತೋಟಿಗೆ ತರಬಹುದು” ಎಂದರು.
“ಪ್ರೀಮಿಯಂ ಬಸ್ಗಳಲ್ಲಿ ಆನ್ಲೈನ್ ಮೂಲಕ ಸೀಟ್ ಕಾಯ್ದಿರಿಸುವುದು ಹಾಗೂ ಪೇಮೆಂಟ್ ಮಾಡುವ ಅವಕಾಶವಿದೆ. ನಿಂತು ಪ್ರಯಾಣಿಸುವುದಕ್ಕೆ ಅವಕಾಶವಿಲ್ಲ. ಎಲ್ಲರಿಗೂ ಆಸನದ ಸಿಗಲಿದೆ. ಬಸ್ ಒಳಗೆ ಟಿಕೆಟ್ ಹರಿಯುವ ಸಂಪ್ರದಾಯ ಇರುವುದಿಲ್ಲ. ನೂಕುನುಗ್ಗಲು, ಅನವಶ್ಯಕ ಗದ್ದಲ ಇರುವುದಿಲ್ಲ. ಸ್ವಂತ ಗಾಡಿಯಲ್ಲಿ ಆರಾಮದಾಯಕವಾಗಿ, ಅನುಕೂಲಕರವಾಗಿ ಪ್ರಯಾಣಿಸಿದಂತೆ ದಿನನಿತ್ಯ ಓಡಾಡಬಹುದು” ಎಂದು ವಿವರಿಸಿದರು.
“ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು 190 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಕೊರೆಯಲು ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ. ಇಂತಹ ಅಪಾಯಕಾರಿ ಮತ್ತು ಅವೈಜ್ಞಾನಿಕ ಯೋಜನೆಗಳಿಗೆ ಕೈಹಾಕುವ ಬದಲು ದೆಹಲಿ ಸರ್ಕಾರದ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದು ಉತ್ತಮ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಡ್ ಕ್ಯಾನ್ಸಲ್ ಆಗದ ರ್ಯಾಪಿಡೋದಿಂದ ‘ಆಟೋ ಪ್ಲಸ್’ ಹೊಸ ಸೇವೆ ಆರಂಭ
ಸಲೀಂ ಅವರಂತಹ ದಕ್ಷ ಅಧಿಕಾರಿಗಳನ್ನು ನೇಮಿಸಿ
“ಬೆಂಗಳೂರು ನಗರದ ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ನಿಯಮಗಳ ಜಾರಿ ಹೊಣೆಯನ್ನು ನಿರ್ವಹಿಸಲು ಹೊಸದಾಗಿ ಸೃಷ್ಟಿಸಿದ್ದ ಬೆಂಗಳೂರು ವಿಶೇಷ ಟ್ರಾಫಿಕ್ ಕಮಿಷನರ್ ಹುದ್ದೆಯನ್ನು ಮರು ಸ್ಥಾಪಿಸಬೇಕು ಹಾಗೂ ಸಮರ್ಥವಾಗಿ ನಿಭಾಯಿಸುತ್ತಿದ್ದ ಎಡಿಜಿಪಿ, ವಿಶೇಷ ಕಮಿಷನರ್ ಎಂ.ಎ.ಸಲೀಂ ಅವರನ್ನು ಪುನಃ ಮುಂದುವರಿಸಬೇಕು ಅಥವಾ ಅವರಂತಹ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು” ಎಂದು ಜಗದೀಶ್ ವಿ ಸದಂ ಒತ್ತಾಯಿಸಿದರು.