ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮೇಲಿನವಳಗೆರೆಹಳ್ಳಿ ಬಳಿ ನಡೆಯುತ್ತಿರುವ ಹೇಮಾವತಿ ನಾಲೆ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಿ ರೈತರು ಮಾಯಸಂದ್ರ ಹೇಮಾವತಿ ನಾಲಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮೇಲಿನವಳಗೆರೆಹಳ್ಳಿ ಗ್ರಾಮದಿಂದ ಹೇಮಾವತಿ ನಾಲೆಯ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಲು ಬಂದ ರೈತರ ಅಹವಾಲು ಕೇಳಲು ಎಂಜಿನಿಯರ್ಗಳು ಬರಲೇ ಇಲ್ಲ, ಇದರಿಂದ ರೊಚ್ಚಿಗೆದ್ದ ರೈತರು ಎಂಜಿನಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಉದ್ದಟತನದ ಉತ್ತರ ನೀಡಿದ ಎಇಇ: ಹೇಮಾವತಿ ನಾಲಾ ಕಚೇರಿಯ ವ್ಯವಸ್ಥಾಪಕ ಪೆರುಮಾಳ್ ಅವರಿಂದ ಮೊಬೈಲ್ ನಂಬರ್ ಪಡೆದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚರಣ್ಸಿಂಗ್ ಚೌಹಾಣ್ ಅವರಿಗೆ ಕರೆ ಮಾಡಿದರೆ, “ನಾನು ಬರುವುದಿಲ್ಲ, ನೀವು ಬೇಕಾದರೆ ಅಲ್ಲಿಯೇ ಮಲಗಿಕೊಳ್ಳಿ, ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಉದ್ದಟತನದ ಉತ್ತರ ನೀಡಿದ್ದರಿಂದ ರೈತರು ಮತ್ತಷ್ಟು ಆಕ್ರೋಶ ಭರಿತರಾದರು.
ಹೇಮಾವತಿ ಎಇಇ ಚರಣ್ಸಿಂಗ್ ಚೌಹಾಣ್ ನೀಡಿದ ಉದ್ದಟತನದ ಉತ್ತರದಿಂದ ಆಕ್ರೋಶ ಭರಿತರಾದ ರೈತರು ಕಚೇರಿಗೆ ಬೀಗ ಜಡಿದ ಪ್ರತಿಭಟನೆ ಮುಂದುವರೆಸುವ ನಿರ್ಧಾರ ಕೈಗೊಂಡರು. ಹೇಮಾವತಿ ಮುಖ್ಯ ಎಂಜಿನಿಯರ್ ವರದಯ್ಯನವರಿಗೆ ದೂರವಾಣಿ ಮೂಲಕ ರೈತರು ತಮ್ಮ ಅಹವಾಲು ಹೇಳಿಕೊಂಡರು. ರೈತರ ಮನವಿಗೆ ಸ್ಪಂದಿಸಿದ ಸಿಇ ಅವರು ಯಡಿಯೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿರುವುದಾಗಿ ಹೇಳಿ ರೈತರನ್ನು ಸಮಾಧಾನಪಡಿಸಿದರು.
ಎಇಇ ವಿರುದ್ಧ ಕ್ರಮ: ಸಮಸ್ಯೆ ಹೇಳಲು ಬಂದ ರೈತರೊಂದಿಗೆ ಉದ್ದಟತನದ ಮಾತುಗಳನ್ನಾಡಿದ ಎಇಇ ಚರಣ್ಸಿಂಗ್ ಚೌಹಾಣ್ ನಡೆಯ ಬಗ್ಗೆ ಸಿ ಇ ವರದಯ್ಯನವರು ಬೇಸರ ವ್ಯಕ್ತಪಡಿಸಿದರು. ಎಇಇಗೆ ಅಗತ್ಯ ಸೂಚನೆ ನೀಡುವುದಾಗಿ ತಿಳಿಸಿದರು. ಕಾಮಗಾರಿ ನಡೆಯುವ ಸ್ಥಳಕ್ಕೆ ಕಾರ್ಯಪಾಲಕ ಎಂಜಿನಿಯರ್ ಕಳುಹಿಸಿಕೊಡುವ ಸಿಇ ಮಾತಿಗೆ ಸಮ್ಮತಿಸಿದ ರೈತರು ಪ್ರತಿಭಟನೆಗೆ ಅಂತ್ಯ ಹಾಡಿ ಗ್ರಾಮದತ್ತ ಹೆಜ್ಜೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಿಡಿಒ ಅಕ್ರಮ ಎಸಗಿದರೂ ಅಧಿಕಾರಿಗಳು ಮೌನ; ಗ್ರಾ.ಪಂ ಅಧ್ಯಕ್ಷೆ ಆರೋಪ
ಪ್ರತಿಭಟನೆಯಲ್ಲಿ ರೈತರುಗಳಾದ ಜಗದೀಶ್, ಪುಟ್ಟರಾಜ್, ಛಾಯೇಶ್, ನಾಗರಾಜ್, ಶರತ್, ಆನಂದ್, ನಟರಾಜ್, ಮೋಹನ್ ಸೇರಿದಂತೆ ಇತರರು ಇದ್ದರು.