ರಾಯಚೂರಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡುವಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಳಂಬ ಮಾಡುತ್ತಿದೆ. ಕೂಡಲೇ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದಾರೆ. “ವಸತಿರಹಿತರಿಗೆ ನಿವೇಶನ ನೀಡಲು ಪಿಎಂಎವೈ ಯೋಜನೆಯಡಿ ಸರ್ವೆ ನಂ.581,9819/2, 726, 727ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಭೂಮಿಯನ್ನು ಸರ್ವೆ ಮಾಡಿ, ಚೆಕ್ ಬಂದಿ ಹಾಕಿಸಬೇಕು. ನಿವೇಶನ ಅಭಿವೃದ್ಧಿ ಪಡಿಸಿ, ನಿವೇಶನ ಹಂಚಿಕೆ ಮಾಡಬೇಕು. ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನಗರಸಭೆಯಿಂದ ನೋಂದಣ ಮಾಡಿಸಿ ಮುಟೇಷನ್ ಮತ್ತು ಫಾರಂ ನಂ.3ರನ್ನು ಶೀಘ್ರದಲ್ಲಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“500 ಮನೆಗಳ ನಿರ್ಮಾಣಕ್ಕೆ ಭೂಮಿ ಮಂಜೂರಾಗಿ ಐದು ವರ್ಷಗಳೇ ಕಳೆದಿವೆ, ಮತ್ತೊಂದೆಡೆ 2,770 ಮನೆಗಳ ನಿರ್ಮಾಣಕ್ಕೆ ಭೂಮಿ ಮಂಜೂರಾಗಿ ಮೂರು ವರ್ಷಗಳು ಕಳೆದಿವೆ. ಆದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮ ಫಲಾನುಭವಿಗಳು ಬೀದಿ ಪಾಲಾಗಿದ್ದಾರೆ. ಹಲವರು ಬಾಡಿಕೆ ಮನೆ, ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಜೀವನ ಅತಂತ್ರವಾಗಿದೆ ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಗರದ ವಿವಿಧ ಅಘೋಷಿತ ಸ್ಲಂಗಳಾದ ಕೊತ್ತಪೇಟಾ, ಅಶೋಕ ನಗರದ ಜಹೀರಾಬಾದ್, ಬುದ್ಧ ನಗರ, ಹೊಸೂರು, ಜೈಭೀಮ್ನಗರ, ಯರಮರಸ್, ಪೋತಗಲ್, ಅಮರಾವತಿ, ಪಂಚಬೀಬಿ ಪಹಾಡ್, ಅರಬ್ ಮೊಹಲ್ಲಾ, ಗುಂಬಜ್ ಏರಿಯಾ, ಶಶಿಮಹಲ್ ಟಾಕೀಜ್ ಹಿಂದುಗಡೆ ಸ್ಲಂ, ವೀರಮಾರುತಿ ಸಪ್ಟೆಬಜಾರ್, ಯಲ್ಲಮ್ಮನ ಗುಡಿ ಸ್ಲಂ, ಪದ್ಮಾವತಿ ಕಾಲೋನಿ, ಎಲ್.ಬಿ.ಎಸ್. ನಗರ ಸ್ಲಂಗಳನ್ನು ಅಧಿಕೃತವಾಗಿ ಸ್ಲಂಗಳೆಂದು ಘೋಷಿಸಬೇಕು. ಅಲ್ಲಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಧರಣಿಯಲ್ಲಿ ಸಂಘಟನೆಯ ಅಧ್ಯಕ್ಷ ಜನಾರ್ಧನ ಹಳ್ಳಿ ಬೆಂಚಿ, ಉಪಾಧ್ಯಕ್ಷ ವೆಂಕಟೇಶ ಭಂಡಾರಿ, ಸಂಘ ಟನಾ ಕಾರ್ಯದರ್ಶಿ ಬಸವರಾಜ ಹೊಸೂರು, ಎಂಆರ್ ಬೇರಿ, ಮಹೇಶ, ನಾಗರಾಜ, ಜಂಬಣ್ಣ, ಹುಲಿಗೆಮ್ಮ, ವೀರೇಶ, ನಾಗಮ್ಮ, ನರಸಮ್ಮ, ಅನುಮಂತಿ ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ