ಗುಣಮಟ್ಟದ ಪಿವಿಸಿ ಪೈಪುಗಳನ್ನು ಪೂರೈಸದೇ ಇರುವ ಹುಬ್ಬಳ್ಳಿಯ ರಾಮದೇವ್ ಪ್ಲಾಸ್ಟಿಕ್ ಅಂಗಡಿ ಮಾಲೀಕರನ್ನು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತರಾಟೆಗೆ ತೆದುಕೊಂಡಿದೆ. ಮಾಲೀಕರಿಂದ ಪೈಪ್ ಖರೀದಿ ಮಾಡಿದ ರೈತನಿಗೆ ಉತ್ತಮ ಗುಣಮಟ್ಟದ ಪೈಟ್ ಪೂರೈಸಬೇಕು. ಇಲ್ಲವಾದರೆ ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶ ನೀಡಿದೆ.
ಹಾನಗಲ್ ತಾಲೂಕು ಮಾಸನಕಟ್ಟಿ ಗ್ರಾಮದ ಮಲ್ಲಿಕಾರ್ಜುನ್ ರಾಯಪ್ಪ ಬಿಜಾಪುರ ಎಂಬುವ ರೈತ, ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವ ಉದ್ದೇಶದಿಂದ. ಡಿಸೆಂಬರ್ 16, 2022ರಂದು, ಹುಬ್ಬಳ್ಳಿಯ ರಾಮದೇವ್ ಪ್ಲಾಸ್ಟಿಕ್ನಲ್ಲಿ 180ಎಂಎಂ ಅಳತೆಯ ಆರು ಕೆಜಿ ಸಾಮರ್ಥ್ಯದ ಐದು ಪಿವಿಸಿ ಪೈಪ್ ಮತ್ತು 90ಎಂಎಂ ಸಾಮರ್ಥ್ಯದ 50 ಪೈಪ್ಗಳನ್ನು 37,000ಕ್ಕೆ ಖರೀದಿಸಿದ್ದರು.
ಆದರೆ, ರಾಮದೇವ ಪ್ಲಾಸ್ಟಿಕ್ ನವರು 19,470ಕ್ಕೆ ಬಿಲ್ ಮಾತ್ರ ಬಿಲ್ ನೀಡಿದ್ದರು. ಕೇಳಿದರೆ, ನಮ್ಮ ಪೈಪ್ ಏನೂ ಆಗುವುದಿಲ್ಲ ನಿಮಗೆ ಬಿನ್ನ ಅವಶ್ಯಕತೆ ಬೀಳುವುದಿಲ್ಲ ಎಂದಿದ್ದರು. ರೈತ ತಮ್ಮ ಜಮೀನಿನಲ್ಲಿ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲು ಕೊಳವೆಬಾವಿ ಚಾಲು ಮಾಡಿದಾಗ ಎಲ್ಲಾ ಪೈಪ್ಗಳು ಒಡೆದು ಹೋಗಿದ್ದವು. ಒಡೆದ ಪೈಪ್ ತೋರಿಸಿ ಉತ್ತಮ ಗುಣಮಟ್ಟದ ಪೈಪ್ ಕೊಡುವಂತೆ ರೈತ ಕೇಳಿದಾಗ, ರಾಮದೇವ್ ಪ್ಲಾಸ್ಟಿಕ್ನವರು ಸ್ಪಂದಿಸದ ಕಾರಣ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಬಿ.ಎಸ್. ಈಶ್ವರಪ್ಪ ಮತ್ತು ಮಹಿಳಾ ಸದಸ್ಯರಾದ ಉಮಾದೇವಿ ಎಸ್. ಹಿರೇಮಠ ನೇತೃತ್ವದ ತಂಡ ಗ್ರಾಹಕನಿಗೆ ಉತ್ತಮ ಗುಣಮಟ್ಟದ ಪಿವಿಸಿ ಪೈಪ್ಗಳನ್ನು ನೀಡಬೇಕು ಅಥವಾ ಪೈಪ್ ಖರೀದಿಗೆ ಪಾವತಿದ್ದ 37ಸಾವಿರ ಶೇಕಡಾ 6ರಷ್ಟು ಬಡ್ಡಿ ಸಹಿತ 30ದಿನದಲ್ಲಿ ಪಾವತಿಸಲು ಆದೇಶಿಸಿದೆ. ಮಾನಸಿಕ, ದೈಹಿಕ ವ್ಯಥ್ಯೆಗಾಗಿ 3000 ಹಾಗೂ ಪ್ರಕರಣದ ಖರ್ಚು 3000 ಗಳನ್ನು ಪಾವತಿಸಬೇಕು. ತಪ್ಪಿದ್ದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇಕಡ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚಿಸಿದೆ.