”ಎಂ.ಎಂ.ಕಲ್ಬುರ್ಗಿಯವರ ಕೊಲೆಗೆ ವಿಶ್ವೇಶ್ವರ ಭಟ್ಟ ಮಾಡಿದ ವರದಿಯೇ ಕಾರಣ ಎಂದು ಎಸ್.ಎಂ.ಜಾಮದಾರ ಉಲ್ಲೇಖಿಸಿದ್ದಾರೆ”
“ಬಸವಣ್ಣನವರು ವೇದಗಳ ವಿರೋಧಿಯಾಗಿರಲಿಲ್ಲ ಎಂದು ಸಿರಿಗೆರೆ ಸ್ವಾಮೀಜಿಯವರು ಹೇಳಿರುವುದು ಬಾಲಿಷವಾಗಿದೆ” ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿದ್ದಾರೆ.
’ಗಣೇಶ ಆಚರಣೆ ಶರಣ ಸಂಸ್ಕೃತಿಯಲ್ಲ’ ಎಂದಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕುರಿತು ಪತ್ರಿಕೆಯೊಂದರಲ್ಲಿ ಬಂದಿರುವ ನಿಂದನಾತ್ಮಕ ಬರಹ ಮತ್ತು ಸಿರಿಗೆರೆ ಸ್ವಾಮೀಜಿಯವರು ವೇದಗಳ ಪರ ನೀಡಿರುವ ಹೇಳಿಕೆ ಸಂಬಂಧ ಜಾಮದಾರ್ ಪ್ರತಿಕ್ರಿಯಿಸಿದ್ದಾರೆ.
“ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಗಣಪತಿಯ ಪೂಜೆಯ ಬಗ್ಗೆ ಲಿಂಗಾಯತರನ್ನು ಕುರಿತು ಹೇಳಿದ ಮಾತನ್ನು ವಿಶ್ವೇಶ್ವರ ಭಟ್ಟ ಅವರು ಅತಿರಂಜಿತವಾಗಿ ಬಣ್ಣಿಸಿ ಅಸಭ್ಯ ಶಬ್ದಗಳಲ್ಲಿ ವಿರೋಧಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಅಷ್ಟೇ ಬಲವಾಗಿ ಖಂಡಿಸುತ್ತದೆ. ಬಸವ ಸ್ಥಾಪಿತ ಲಿಂಗಾಯತ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ನೆರೆಹೊರೆಯ ಸನಾತನಿಗಳ ಪ್ರಭಾವದಿಂದ ಅನೇಕ ಲಿಂಗಾಯತರು ವಿಶೇಷವಾಗಿ ವೀರಶೈವರು ತಮ್ಮ ಮನೆಗಳಲ್ಲಿ ಗಣೇಶ ಹಬ್ಬದ ಆಚರಣೆ ಮಾಡುವದನ್ನು ಸ್ವಾಮಿಗಳು ಪ್ರಶ್ನಿಸಿದ್ದಾರೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದ್ದರಿಂದ ಸ್ವಾಮಿಗಳು ಆ ಬಗ್ಗೆ ಕ್ಷಮೆ ಕೇಳುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
“ಅದನ್ನೆ ನೆಪವಾಗಿಟ್ಟುಕೊಂಡು ಸಿರಿಗೆರೆ ಮಠದ ಹಿರಿಯ ಸ್ವಾಮಿಗಳು ಬಸವಣ್ಣನವರು ವೇದಗಳನ್ನು ತಿರಸ್ಕರಿಸಲಿಲ್ಲವೆಂದು ಹೇಳಿದ್ದು ಬಾಲಿಶ ಹೇಳಿಕೆ. ಅವರ ’ಬಿಸಿಲು ಬೆಳೆಂಗಳು’ನ ಒಂದು ಲೇಖನದಲ್ಲೂ ಹಾಗೆ ಬರೆದಿದ್ದು ಪ್ರಶ್ನಾರ್ಹ ಸಂಗತಿ. ಬಸವಣ್ಣನವರ ಅನೇಕ ವಚನಗಳಲ್ಲಿ ನೇರವಾಗಿಯೇ ವೇದಗಳನ್ನು ತಿರಸ್ಕರಿದ್ದಾರೆ ಮತ್ತು ಖಂಡಿಸಿದ್ದಾರೆ” ಎಂದು ಹೇಳಿದ್ದಾರೆ.
ಸಂಧರ್ಭಾನುಸಾರವಾಗಿ ನಾಲ್ಕಾರು ವಚನಗಳಲ್ಲಿ “ಶ್ರುತಿಗಳು ಸಾರುತಿದ್ದಾವೆ ನೋಡಾ” ಎಂದು ಶಿವನ ಶ್ರೇಷ್ಠತೆಯ ಬಗ್ಗೆ ಹೇಳಿದ್ದ ಮಾತ್ರಕ್ಕೆ ಅವರು ವೇದಗಳನ್ನು ಒಪ್ಪಿದ್ದಾರೆಂದು ಅರ್ಥೈಸುವುದು ಸರಿಯಲ್ಲ. ಅವರಷ್ಟೇ ಅಲ್ಲ ಅಲ್ಲಮರು, ಸಿದ್ದರಾಮರು, ಅಂಬಿಗರ ಚೌಡಯ್ಯನವರು ಇತರ ಅನೇಕ ಶರಣರೂ ವೇದಗಳನ್ನು ನೇರವಾಗಿಯೇ ತಿರಸ್ಕರಿಸಿದ್ದಾರೆ ಎಂದು ವಿವರಿಸಿದ್ದಾರೆ.
“ಅಷ್ಟಕ್ಕೂ ಈಗಿನ ತಂಟೆಗೂ ವೇದಕ್ಕೂ ಏನು ಸಂಬಂಧ ಗುರುಗಳೇ? ಸಾಣೆಹಳ್ಳಿ ಶ್ರೀಗಳೊಂದಿಗಿನ ನಿಮ್ಮ ಒಳಜಗಳ ಈಗಾಗಲೇ ಸಾರ್ವಜನಿಕರಿಗೆ ತಿಳಿದ ಸಂಗತಿ. ಆದ್ದರಿಂದ ನಿಮ್ಮ ಈಗಿನ ಹೇಳಿಕೆ ಕದಡಿದ ನೀರಲ್ಲಿ ಮೀನು ಹಿಡಿದಂತೆ ಭಾಸವಾಗುತ್ತದೆ” ಎಂದು ಟೀಕಿಸಿದ್ದಾರೆ.
ಕೊಲೆಗೆ ಪ್ರಚೋದನೆ: ಜಾಮದಾರ್ ಹೇಳಿಕೆ
ಸಾಣೆಹಳ್ಳಿ ಸ್ವಾಮೀಜಿಯವರ ಕುರಿತು ವಿಶ್ವವಾಣಿ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ಟ ಪ್ರಕಟಿಸಿರುವ ನಿಂದನಾತ್ಮಕ ವರದಿಗಳನ್ನು ಉಲ್ಲೇಖಿಸಿರುವ ಎಸ್.ಎಂ.ಜಾಮದಾರ ಅವರು, ಹಿರಿಯ ಸಂಶೋಧಕರಾದ ಎಂ.ಎಂ.ಕಲ್ಬುರ್ಗಿಯವರ ಪ್ರಕರಣವನ್ನು ನೆನಪಿಸಿದ್ದಾರೆ.
“ವಿಶ್ವೇಶ್ವರ ಭಟ್ಟ ಅವರು ಇದೇ ರೀತಿಯ ವರದಿಗಳನ್ನು ಮಾಡಿ ಡಾ.ಕಲ್ಬುರ್ಗಿಯವರ ಕೊಲೆಗೆ ಕಾರಣವಾಗಿದ್ದಾರೆ. ಆದ್ದರಿಂದ ಆ ಪ್ರಕರಣದಲ್ಲಿ ವಿಶ್ವೇಶ್ವರ ಭಟ್ಟ ಅವರನ್ನು ಪ್ರಚೋದಕರೆಂದು ಪೋಲಿಸರು ಅವರ ವಿರುದ್ಧ ಕ್ರಮಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.