ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯಾವಾರು ಮೀಸಲಾತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಮೂರು ದಶಕಗಳ ಹೋರಾಟದ ಅಂತಿಮರೂಪವಾಗಿ ನವೆಂಬರ್ 11 ರಂದು ಹೈದರಾಬಾದ್ನ ಸಿಕಂದರಾಬಾದ್ ಪೆರೇಡ್ ಗ್ರೌಂಡ್ನಲ್ಲಿ ಹಲೋ ಮಾದಿಗ, ಚಲೋ ಹೈದ್ರಾಬಾದ್, ಮಾದಿಗರ ವಿಶ್ವರೂಪ ಮಹಾಸಭಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ ಎಂ ದೇವರಾಜು ತಿಳಿಸಿದರು.
ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪ್ರತಿನಿಧಿಗಳು, ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಂದೆ ಮಾದಿಗರ ಶಕ್ತಿ ಪ್ರದರ್ಶನ ಮಾಡುವುದಾಗಿದೆ” ಎಂದರು.
“ಸ್ವಾತಂತ್ರ್ಯ ಬಂದಾಗಿನಿಂದಲೂ ಕರ್ನಾಟಕದಲ್ಲಿ ಹಾಗೆಯೇ ದೇಶದಲ್ಲಿ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ. ಪರಿಶಿಷ್ಟಜಾತಿ ಪಟ್ಟಿಯಲ್ಲಿರುವ 101 ಪಂಗಡಗಳಲ್ಲಿಯೇ ಪ್ರಬಲ ಪಂಗಡಗಳು ಇತರೆ ಸಮುದಾಯುಗಳನ್ನು ನ್ಯಾಯಬದ್ದವಾಗಿ ದೊರೆಯಬೇಕಾದ ಮೀಸಲಾತಿಯನ್ನು ಕಬಳಿಸಿ, ಅಸ್ಪೃಷ್ಯರನ್ನು ಮತ್ತಷ್ಟು ತುಳಿತಕ್ಕೆ ಒಳಗಾಗುವಂತೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಮಾದಿಗರ ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ 1996ರಿಂದಲೂ ಹೋರಾಟ ನಡೆದಿದೆ. ಈ ಹಿಂದಿನ ಸರ್ಕಾರ ಒಳಮೀಸಲಾತಿ ವರ್ಗೀಕರಣದ ಭಾಗವಾಗಿರುವ ನ್ಯಾ. ಎ ಜೆ ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ ಈವರೆಗೂ ಕೇಂದ್ರದಲ್ಲಿ ಈ ವಿಚಾರ ಪ್ರಾಸ್ತಾಪವಾಗಿಲ್ಲ. ನಮ್ಮಂತೆಯೇ ನೆರೆಯ ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಹಾಗಾಗಿ ದಕ್ಷಿಣ ಭಾರತದ ಎಲ್ಲ ಮಾದಿಗರು ಸುಮಾರು 30 ಲಕ್ಷ ಮಂದಿ ನವೆಂಬರ್ 11ರಂದು ಹೈದರಾಬಾದ್ನಲ್ಲಿ ಸೇರಿ ನಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದರು.
“ಮಾದಿಗ ದಂಡೋರ ರಾಜ್ಯ ವಕ್ತಾರ ರಾಘವೇಂದ್ರ ಸ್ವಾಮಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. 1996ರಲ್ಲಿ ಮಂದಕೃಷ್ಣ ಮಾದಿಗ ಅವರು ತುಮಕೂರು ಜಿಲ್ಲೆಗೆ ಬಂದ ನಂತರ ಮಾದಿಗರ ಒಳಮೀಸಲಾತಿ ಹೋರಾಟ ಹೆಚ್ಚಿನ ಕಾವು ಪಡೆದುಕೊಂಡಿದ್ದು, ರಸ್ತೆತಡೆ, ರೈಲುತಡೆ, ಅರೆಬೆತ್ತಲೆ ಮೆರವಣಿಗೆ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ಮಾಡಲಾಗಿದೆ. ನವೆಂಬರ್ 11 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಮಾದಿಗರ ವಿಶ್ವರೂಪ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ತೆರಳುವ ನಿರೀಕ್ಷೆಯಿದೆ. ಒಳಮೀಸಲಾತಿ ಜಾರಿಯಾದರೆ ಸಮುದಾಯದ ಯುವಜನರು ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುಬಹುದು. ಅಲ್ಲದೆ ಐಎಎಸ್, ಕೆಎಎಸ್ಗಳಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಮಾದಿಗ ಜನಾಂಗದ ಯುವಜನರು, ಮುಖಂಡರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | 64ನೇ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ; ರಸ್ತೆ ತಡೆ ನಡೆಸಿ ಪ್ರತಿಭಟನೆ
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಬಿ ಸಿ ರಾಜು ಮಾತನಾಡಿ, “ಬಿಜೆಪಿ ಸರ್ಕಾರ 2022ರ ಮಾರ್ಚ್ 24ರಂದು ನ್ಯಾ.ಸದಾಶಿವ ಅವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರದಲ್ಲಿರುವ ನಮ್ಮ ಸಮುದಾಯದ ಜನನಾಯಕರ ನಿರ್ಲಕ್ಷದ ಫಲವಾಗಿ ಈವರೆಗೂ ವರದಿಗೆ ಕೇಂದ್ರದಿಂದ ಮನ್ನಣೆ ದೊರೆತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ಹಲೋ ಮಾದಿಗ, ಚಲೋ ಹೈದರಾಬಾದ್ ಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದರು.
ಮಾದಿಗ ದಂಡೋರದ ಮಾಗೋಡು ಯೋಗಾನಂದ್, ನರಸಿಂಹಮೂರ್ತಿ, ಅಶೋಕ್, ನರಸಿಂಹಮೂರ್ತಿ, ಕಿರಣ್, ರವಿ, ರಾಮಾಂಜಿ, ಗೂಳರಿಮೆ ನಾಗರಾಜು ಸೇರಿದಂತೆ ಇತರರು ಇದ್ದರು.