- ರುದ್ರಗೌಡ ಪಾಟೀಲ್ನ ಮೊಬೈಲ್ ಲೊಕೇಷನ್ ಉತ್ತರ ಪ್ರದೇಶದಲ್ಲಿ ಪತ್ತೆ
- ‘ಪೊಲೀಸರ ದಾರಿ ತಪ್ಪಿಸಲು ಉತ್ತರ ಪ್ರದೇಶಕ್ಕೆ ತನ್ನ ಫೋನ್ ಕಳುಹಿಸಿದ್ದಾನೆ’
ಕೆಇಎ ಪರೀಕ್ಷೆಯಲ್ಲಿ ಅಕ್ರಮ ಎಸಗಿ, ತಲೆ ಮರೆಸಿಕೊಂಡಿರುವ ಕಿಂಗ್ಪಿನ್ ರುದ್ರಗೌಡ ಪಾಟೀಲ್ (ಆರ್ ಡಿ ಪಾಟೀಲ್) ಪೊಲೀಸರನ್ನೇ ದಿನ ದಿನ ಸಿನೆಮಾ ಶೈಲಿಯಲ್ಲಿ ಯಮಾರಿಸುತ್ತಿದ್ದಾನೆ.
ನೆರೆಯ ಮಹಾರಾಷ್ಟ್ರ, ತೆಲಂಗಾಣ ಅಥವಾ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಊಹಿಸಿದ್ದರು. ಅದರಂತೆ ಕಿಂಗ್ಪಿನ್ ರುದ್ರಗೌಡ ಪಾಟೀಲ್ನ ಮೊಬೈಲ್ ಲೊಕೇಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.
ಆದರೆ, ಟವರ್ ಲೊಕೇಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ರುದ್ರಗೌಡ ಚಳ್ಳೇಹಣ್ಣು ತಿನ್ನಿಸಲು ತನ್ನ ಫೋನ್ ಬೇರೊಬ್ಬರಿಗೆ ನೀಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ ತಾನು ಕಲಬುರಗಿಯಲ್ಲೇ ತಲೆಮರೆಸಿಕೊಂಡಿದ್ದಾನೆ. ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇದ್ದಾನೆ ಎಂದು ತಿಳಿದ ಬಳಿಕ ಪೊಲೀಸರು ಆತನನ್ನು ಬಂಧಿಸಲು ಬಂದಾಗ ಕಪೌಂಡ್ ಹಾರಿ ಎಸ್ಕೇಪ್ ಆಗಿದ್ದಾನೆ.
ಪಿಎಸ್ಐ ಪರೀಕ್ಷಾ ಅಕ್ರಮದಲ್ಲೂ ಹೀಗೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿಣ್ಣಿಸಿದ್ದ. ಕೊನೆಗೆ ಸಿನೆಮಾ ಶೈಲಿಯಲ್ಲಿ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ಸಾಕ್ಷಿ ಸಮೇತ ಬಂಧಿಸಿದ್ದರು. 11 ತಿಂಗಳು ಜೈಲಿನಲ್ಲಿದ್ದ ರುದ್ರಗೌಡ ಪಾಟೀಲ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.
ಪಿಎಸ್ಐ ಪ್ರಕರಣದಲ್ಲಿ ಪಾಠ ಕಲಿಯದ ರುದ್ರಗೌಡ ಪಾಟೀಲ್ ತನ್ನ ಹಳೆಯ ಚಾಲಿಯನ್ನೇ ಮುಂದುವರಿಸಿ, ಕಳೆದ ತಿಂಗಳ ಅಕ್ಟೋಬರ್ 28 ರಂದು ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ. ಅಲ್ಲದೆ, ರುದ್ರಗೌಡ ಪಾಟೀಲ್ ಅನೇಕ ದಿನಗಳಿಂದ ಪೊಲೀಸರ ಕೈಗೆ ಸಿಗದೆ ಓಡಾಡಿಕೊಂಡಿದ್ದಾನೆ.
ನಾಲ್ಕು ವಿಶೇಷ ತಂಡಗಳು
ಆರೋಪಿ ರುದ್ರಗೌಡ ಪಾಟೀಲ್ ಬಂಧನಕ್ಕೆ ಹುಡುಕಾಟ ಮುಂದುವರೆದಿದೆ. ನಾಲ್ಕು ವಿಶೇಷ ತಂಡಗಳು ಕಲಬುರಗಿ ಜಿಲ್ಲೆಯ ವಿವಿಧಡೆ ಮತ್ತು ಮಹಾರಾಷ್ಟ್ರ ಹಲವೆಡೆ ಹುಡುಕಾಟ ನಡೆಸುತ್ತಿವೆ. ಮಹಾರಾಷ್ಟ್ರದ ಸೊಲ್ಹಾಪುರ, ಪುಣೆಯಲ್ಲಿ ರುದ್ರಗೌಡ ಅಡಗಿರುವ ಶಂಕೆ ವ್ಯಕ್ತವಾಗಿದೆ.