ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿತಿ ದಲಿತ ವಿಧ್ಯಾರ್ಥಿ ಪರಿಷತ್ (ಡಿವಿಪಿ) ಪ್ರತಿಭಟನೆ ನಡೆಸಿದೆ.
ವಿಶ್ವವಿದ್ಯಾಲಯದ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕುಲಪತಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಮುಖಂಡ ಮೌನೇಶ ಜಾಲವಾಡಗಿ, “ರಾಯಚೂರು ವಿಶ್ವವಿದ್ಯಾಲಯ ಆರಂಭವಾಗಿ 2-3 ವರ್ಷಗಳು ಕಳೆದಿವೆ. ಇನ್ನೇನು ಮೊದಲನೇ ಬ್ಯಾಚ್ ಹೊರ ಹೋಗುವ ಸಮಯ ಬಂದಿದೆ. ಆದರೂ, ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ರಾಯಚೂರು ವಿಶ್ವವಿದ್ಯಾಲಯಕ್ಕೆ ಖಾಯಂ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು. ಬಾಕಿ ಉಳಿದಿರುವ ಎಲ್ಲ ಸೆಮಿಸ್ಟರ್ಗಳ ಫಲಿತಾಂಶ ಬಿಡುಗಡೆ ಮಾಡಿ ಅಂಕಪಟ್ಟಿ ವಿತರಿಸಬೇಕು. ಗ್ರಂಥಾಲಯದ ಅವಧಿಯನ್ನು ಹೆಚ್ಚಿಸಿ ಎಲ್ಲ ವಿಭಾಗದ ಪುಸ್ತಕಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದ ಬಳಿ ಎಲ್ಲ ಸರ್ಕಾರಿ ಬಸ್ಸುಗಳು ನಿಲುಗಡೆಯಾಗಬೇಕು. ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಮತ್ತು ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು. ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ಇಲಾಖೆಗಳು ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಸರ್ಕಾರ ಪತ್ರ ಬರೆಯಬೇಕು” ಎಂದು ಒತ್ತಾಯಿಸಿದ್ದಾರೆ.
“ವಸತಿ ನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಲು ಮುಖ್ಯದ್ವಾರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಇಉ ಮತ್ತು ಖಾಯಂ ಕಾವಲುಗಾರರನ್ನು ನೇಮಕ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.
ಹಕ್ಕೊತ್ತಾಯ ಸ್ವೀಕರಿಸಿ ಮಾತನಾಡಿದ ಕುಲಪತಿ ಹರೀಶ್ ರಾಮಸ್ವಾಮಿ, “ವಿದ್ಯಾರ್ಥಿಗಳ ಕಮಿಟಿ ರಚನೆ ಮಾಡಿ, ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು” ಎಂದು ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಮೌನೇಶ ತುಗ್ಗಲದಿನ್ನಿ, ಮಧುಸೂದನ, ಸಂತೋಷ್ ಪಾಟೀಲ್, ಅಂಬರೀಶ, ಚೆನ್ನಯ್ಯಸ್ವಾಮಿ, ಟೈಮದ್ ಪಾಷಾ, ಸುರೇಶ, ಮಾರ್ತಾಂಡ,ಮೌನೇಶ್,ನಿತಿನ್,ಚಂದ್ರು,ಉಮೇಶ್,
ಶರಣು,ಪ್ರಶಾಂತ್ ಮುಂತಾದ ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.