- ‘ಸರ್ಕಾರ ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿದೆ’
- ‘ಬರ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಕೊಡಲಾಗಿದೆ’
ಬಿಜೆಪಿ – ದಳದವರಿಗೆ ಅನುಕಂಪ ಬಂದು ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಈಗಾಗಲೇ ಸರ್ಕಾರ ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, “ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಈಗಾಗಲೇ ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಾವು ಭಿಕ್ಷೆ ಬೇಡುತ್ತಿಲ್ಲ, ಕಾನೂನು ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡಲಿ” ಎಂದು ಒತ್ತಾಯಿಸಿದರು.
“ಬರ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಕೊಡಲಾಗಿದೆ. ವರದಿಯನ್ನ ಸ್ವೀಕಾರ ಮಾಡಿರುವ ಕೇಂದ್ರ ಸರ್ಕಾರವು ಅಧ್ಯಯನಕ್ಕೆ ಅಧಿಕಾರಿಗಳನ್ನು ರಾಜ್ಯಕ್ಕೆ ಕಳುಹಿಸಿದ್ದರು. 26 ಸಂಸದರು, 19 ಜೆಡಿಎಸ್ ಶಾಸಕರು, 65 ಬಿಜೆಪಿ ಶಾಸಕರು ಪ್ರಧಾನಿಯವರನ್ನು ಹೋಗಿ ಭೇಟಿ ಮಾಡಲಿ” ಎಂದರು.
“ಪ್ರಚಾರಕ್ಕಾಗಿ ಎರಡು ಗಿಡ ನೋಡಿಕೊಂಡು ಬಂದರೆ ಏನಿಲ್ಲ. ನಾವು ಕೂಡ ಗಿಡಗಳನ್ನು ನೋಡಿದ್ದೇವೆ, ನಿಮ್ಮಿಂದ ರಾಜ್ಯಕ್ಕೆ ಏನಾಗಿದೆ? ನಾವು ಭಿಕ್ಷೆ ಬೇಡುತ್ತಿಲ್ಲ, ಕಾನೂನು ಪ್ರಕಾರ ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
800 ಕೋಟಿ ಬಿಡುಗಡೆ
“ಗುರುವಾರ ನಡೆದ ಸಚಿವ ಸಂಪುಟದಲ್ಲಿ 800 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕುಡಿಯುವ ನೀರಿನ, ಮೇವು, ಸೇರಿದಂತೆ ಎಲ್ಲದಕ್ಕೂ ಉಪಯೋಗ ಮಾಡಬೇಕು ಎಂದು ಹಣ ಕೊಟ್ಟಿದ್ದೇವೆ” ಎಂದು ತಿಳಿಸಿದರು.
”ಬರ ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರ ತಮ್ಮ ನಿಲುವನ್ನು ತಿಳಿಸಬೇಕು. ನಮ್ಮಿಂದ ಬರ ಪರಿಹಾರ ಕೊಡಲು ಆಗಲ್ಲ ಎಂದು ಕೇಂದ್ರದವರು ಹೇಳಲಿ. ಆದರೂ ನಮ್ಮ ಸರ್ಕಾರ ಬರ ಪರಿಹಾರ ಕೊಡುವ ಬಗ್ಗೆ ಚಿಂತನೆ ನಡೆಸಿದೆ” ಎಂದರು.
“ಬರಗಾಲ ಸಂದರ್ಭದಲ್ಲಿ ನರೇಗಾ ಮಾನವ ದಿನಗಳನ್ನು ಹೆಚ್ಚಿಸಬೇಕು ಎಂದು ಹೇಳಿದ್ದೇವೆ. 100 ಮಾನವ ದಿನಗಳು ಇದ್ದಿದ್ದು 150 ಮಾಡಬೇಕು ಎಂದು ಪತ್ರ ಬರೆಯಲಾಗಿದೆ. ಆದರೆ ಎರಡು ಮೂರು ತಿಂಗಳು ಆದರೂ ಪ್ರಾರಂಭಿಸಿಲ್ಲ” ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.