ಈ ದಿನ ಸಂಪಾದಕೀಯ | ಮಿಜೋರಾಂ ಪ್ರಚಾರಕ್ಕೆ ಮೋದಿ ಚಕ್ಕರ್; ಜನಾಕ್ರೋಶದ ಭಯವೇ?

Date:

Advertisements
ಅಕ್ಟೋಬರ್‌ 30ರಂದು ಮಿಜೋರಾಂನ ಮಮಿತ್‌ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರ ಸಭೆ ನಿಗದಿಯಾಗಿತ್ತು. ಆದರೆ ಮಿಜೋರಾಂನ ಬಿಜೆಪಿ ಮಿತ್ರ ಪಕ್ಷ “ಮಿಜೋ ನ್ಯಾಷನಲ್‌ ಫ್ರಂಟ್‌” ನ ಮುಖ್ಯಸ್ಥ, ಮುಖ್ಯಮಂತ್ರಿ ಝೋರಾಮ್‌ತಂಗ ಅವರು ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿರಸ್ಕರಿಸಿದರು. ಬಿಜೆಪಿ ಮತ್ತು ಅದರ ನೆಚ್ಚಿನ ʼವಿಶ್ವ ನಾಯಕʼನಿಗೆ ಮುಜುಗರ ತಂದಿತ್ತು.

 

ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ನಾಲ್ಕು ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಿ ಅಬ್ಬರಿಸಿರುವ ಪ್ರಧಾನಿ ನರೇಂದ್ರ ಮೋದಿ ಮಿಜೋರಾಂಗೆ ಕಾಲಿಟ್ಟಿಲ್ಲ. ಬದಲಿಗೆ ಮೊದಲೇ ರೆಕಾರ್ಡ್ ಮಾಡಲಾದ ವಿಡಿಯೋ ಮೂಲಕ “ನಿಮ್ಮ ತಾಯ್ನಾಡನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಲು ನಮ್ಮನ್ನು ಬೆಂಬಲಿಸಿ” ಎಂದು ಮಿಜೋಗಳ ಮತಯಾಚಿಸಿದ್ದಾರೆ. ‘ಮಣಿಪುರದ ಭಯ’ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಂ ರಮೇಶ್‌ ಅವರು ಮೋದಿ ಕಾಲೆಳೆದಿದ್ದಾರೆ.

ತಾವು ಪ್ರಧಾನಿಯಾದ ನಂತರ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ನಡೆದ ಯಾವ ರಾಜ್ಯಗಳ ಚುನಾವಣೆಯಲ್ಲೂ ಮೋದಿ ಗೈರಾದದ್ದೇ ಇಲ್ಲ. ಅದಕ್ಕಾಗಿಯೇ ಅವರನ್ನು ಚುನಾವಣಾ ಪ್ರಧಾನಿ ಎಂದು ವ್ಯಂಗ್ಯವಾಡಲಾಗುತ್ತದೆ. ಕೋವಿಡ್‌ ಎರಡನೇ ಅಲೆಯ ಹೊಡೆತಕ್ಕೆ ದೇಶದ ಉದ್ದಗಲಕ್ಕೆ ಜನ ತರಗೆಲೆಯಂತೆ ಸತ್ತು ಬೀಳುತ್ತಿದ್ದರೂ ಪ್ರಧಾನಿ ಲೆಕ್ಕಿಸಿರಲಿಲ್ಲ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭರ್ತಿ ಒಂದು ತಿಂಗಳು ಕಾಲ ಆರ್ಭಟಿಸಿದ್ದರು. ಕಳೆದ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆಂದು ವಾರಕ್ಕೆರಡು ಬಾರಿ ಬಂದು ಹೋಗಿದ್ದಾರೆ. ಏಳು ದಿನಗಳಲ್ಲಿ 19 ಸಭೆ, 6 ರೋಡ್‌ ಶೋ ನಡೆಸಿದ್ದರು. ಹಾಲಿ ಪಂಚರಾಜ್ಯ ಚುನಾವಣೆಯಲ್ಲೂ ನಾಲ್ಕು ರಾಜ್ಯಗಳಲ್ಲಿ ಪ್ರಚಾರ ನಡೆಸಿದ್ದಾರೆ. ಆದರೆ, ಮಿಜೋರಾಂ ಕಡೆ ಸುಳಿದಿಲ್ಲ.

ಅಕ್ಟೋಬರ್‌ 30ರಂದು ಮಿಜೋರಾಂನ ಮಮಿತ್‌ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರ ಸಭೆ ನಿಗದಿಯಾಗಿತ್ತು. ಆದರೆ ಮಿಜೋರಾಂನ ಬಿಜೆಪಿ ಮಿತ್ರ ಪಕ್ಷ ಮಿಜೋ ನ್ಯಾಷನಲ್‌ ಫ್ರಂಟ್‌ ನ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಝೋರಾಮ್‌ತಂಗ ಅವರು ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿರಸ್ಕರಿಸಿದರು. ಬಿಜೆಪಿ ಮತ್ತು ಅದರ ನೆಚ್ಚಿನ ʼವಿಶ್ವ ನಾಯಕʼನಿಗೆ ಮುಜುಗರ ತಂದಿತ್ತು. ಮಣಿಪುರದಲ್ಲಿ ಹತ್ತಾರು ಚರ್ಚ್‌ಗಳನ್ನು ನಾಶ ಮಾಡಲಾಗಿದೆ. ಇದರಿಂದ ಮಿಜೋ ಕ್ರಿಶ್ಚಿಯನ್ನರು ಘಾಸಿಗೊಂಡಿದ್ದರು. ಮೋದಿ ಸರ್ಕಾರ ಮಣಿಪುರದ ಗಲಭೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ಇದಕ್ಕೆ ಕಾರಣವಾಗಿತ್ತು. ಕೊನೆ ಕ್ಷಣದಲ್ಲಿ ಯಾವುದೇ ಕಾರಣ ನೀಡದೇ ಬಿಜೆಪಿ ಮೋದಿ ಪ್ರಚಾರ ಸಭೆಯನ್ನು ರದ್ದುಗೊಳಿಸಿತ್ತು.

Advertisements

ಕಳೆದ ಮೇ ತಿಂಗಳಿನಿಂದ ಪಕ್ಕದ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೆ ತೊಡಗಿದ್ದ ಮೋದಿ, ಅದು ಮುಗಿದ ನಂತರ ಬರಬಹುದು, ನಮ್ಮ ಕಷ್ಟ ಆಲಿಸಬಹುದು ಎಂಬ ಮಣಿಪುರದ ಜನರ ನಿರೀಕ್ಷೆ ಹುಸಿಯಾಗಿತ್ತು. ಡಬಲ್‌ ಎಂಜಿನ್‌ ಕೆಟ್ಟು ಕೂತಿತ್ತು. ಮೋದಿ ಅಮೆರಿಕಕ್ಕೆ ತೆರಳಿದ್ದರು. ನಂತರ ದೆಹಲಿಯಲ್ಲಿ ಜಿ20 ಸಭೆಯಲ್ಲಿ ಭರ್ತಿ ಫೋಟೋ ಶೂಟ್‌ ಮಾಡಿಕೊಂಡರು. ಹೀಗೆ ಆರು ತಿಂಗಳು ಉರುಳಿದೆ. ಮೋದಿ ಮಣಿಪುರದತ್ತ ತಲೆ ಹಾಕಿಲ್ಲ.

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯದ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ ಕೊಲೆಗಳಾಗುತ್ತಿವೆ. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೊ ಲೀಕ್‌ ಆದ ನಂತರ ಜಗತ್ತೇ ಬೆಚ್ಚಿ ಬಿದ್ದಿತ್ತು. ಕುಕಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಕೊಂದು ಹಾಕಿರುವ ವಿಡಿಯೊ ಬಯಲಾದ ಮರುದಿನವೇ ಸಂಸತ್ತಿನ ಅಧಿವೇಶನ ನಿಗದಿಯಾಗಿತ್ತು. ಸಂಸತ್ತಿನ ಮುಂಭಾಗದಲ್ಲಿ ಒಂದು ಸಾಲಿನ ಖಂಡನೆ ವ್ಯಕ್ತಪಡಿಸಿದ್ದ ಮೋದಿ ಸಂಸತ್ತಿನಲ್ಲಿ ಚರ್ಚೆಗೆ ಬಾರದೇ ಪಲಾಯನಗೈದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರವೂ ಮೋದಿ ಸರ್ಕಾರ ಮಣಿಪುರದ ಜನರ ಸಾವು ನೋವುಗಳನ್ನು ಆಲಿಸಿಲ್ಲ.

2022ರಲ್ಲಿ ಮಣಿಪುರದಲ್ಲಿ ಬಹುಸಂಖ್ಯಾತ ಮೈತೇಯಿ ಜನರ ಮತದಿಂದ ಬಿಜೆಪಿ ಅಧಿಕಾರ ಹಿಡಿದಿತ್ತು. ಮತ ಹಾಕಿ ಗೆಲುವಿಗೆ ಕಾರಣರಾದ ನಮ್ಮನ್ನೇ ರಕ್ಷಿಸಲಿಲ್ಲ ಮೋದಿ ಎಂಬ ಸಿಟ್ಟು ಮೈತೇಯಿಗಳಿಗೆ ಇದೆ. ಕುಕಿಗಳಿಗೆ ಬಿಜೆಪಿ ಸರ್ಕಾರವೇ ಶತ್ರು. ಮಿಜೋರಾಂನಲ್ಲಿ ಕುಕಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತ್ತೆ ಯಾವ ಮುಖ ಇಟ್ಟುಕೊಂಡು ವಿಜೋರಾಂಗೆ ಹೋಗಿ ಮತಭಿಕ್ಷೆ ಬೇಡುವುದು? 2019ರಲ್ಲಿ ಮಣಿಪುರದ ಎರಡು ಲೋಕಸಭಾ ಸ್ಥಾನಗಳಲ್ಲಿ ಒಂದು ಬಿಜೆಪಿ ಪಾಲಾಗಿತ್ತು ಮತ್ತು ಮಿಜೋರಾಂನ ಏಕೈಕ ಸೀಟನ್ನು ಮಿಜೋ ನ್ಯಾಷನಲ್ ಫ್ರಂಟ್ ಗೆದ್ದುಕೊಂಡಿತ್ತು.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 0.37ರಷ್ಟು ಮತಗಳನ್ನು ಗಳಿಸಿತ್ತು. ಈ ಪ್ರಮಾಣ 2018ರಲ್ಲಿ ಶೇ.8.9ಕ್ಕೆ ಹೆಚ್ಚಿತ್ತು. ಹೀಗಾಗಿ ಕಳೆದುಕೊಳ್ಳುವುದು ಬಹಳವೇನೂ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಣಿಪುರ, ಮಿಜೋರಾಂಗೆ ಮೋದಿ ಪ್ರಚಾರಕ್ಕೆ ತೆರಳುವರೇ ಅಥವಾ ಈಗಿನಂತೆ ಪಲಾಯನಸೂತ್ರಕ್ಕೆ ಶರಣಾಗುವರೇ ಕಾದು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X