ಪ್ರಸ್ತುತ ಸಮಾಜದಲ್ಲಿ ಯುವಜನರ ಸಮಸ್ಯೆಗಳು ಮತ್ತು ಕೋಮುವಾದಿ ಸರ್ವಾಧಿಕಾರಿಗಳ ನೀತಿಗಳ ಬಗ್ಗೆ, ಯುವ ಜನಾಂಗ ಡೋಂಗಿ ರಾಜಕಾರಣಿಗಳ, ಆರ್ಎಸ್ಎಸ್, ಸಂಘ-ಪರಿವಾರದ ಕೈ ಗೊಂಬೆಯಾಗದೆ ಎಂದು ಕಾಮ್ರೇಡ್ ಬಿ.ಆರ್. ರಂಗಸ್ವಾಮಿ ಹೇಳಿದರು.
ಕೊಡಗಿನ ಕುಶಾಲನಗರದಲ್ಲಿ ನ.13ರಂದು ಸಿಪಿಐ(ಎಂಎಲ್)ಆರ್ಐ ಜಿಲ್ಲಾ ಸಮಿತಿ ಯುವಜನರ ಕಾರ್ಯಗಾರವನ್ನು ವೈ.ಎ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿತ್ತು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ನೂರಕ್ಕೂ ಹೆಚ್ಚು ಯುವ ಜನರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಬಿ.ಆರ್. ರಂಗಸ್ವಾಮಿ ಮಾತನಾಡಿದರು.
ಇಡೀ ಸಿಸ್ಟಮ್ ಅನ್ನು ಅರ್ಥಮಾಡಿಕೊಳ್ಳಬೇಕು ನಮಗೆ ರಾಜಕೀಯ ಪಕ್ಷಗಳು ಅವುಗಳ ಅಧಿಕಾರಗಳು ಬದಲಾದರೆ ಸಾಲದು? ಶತಶತಮಾನಗಳಿಂದ ಈ ದೇಶದ ಅಧಿಕಾರ, ಸಂಪತ್ತು ಎಲ್ಲವನ್ನೂ ಒಂದೇ ವರ್ಗ, ಶ್ರೀಮಂತ, ಬಂಡವಾಳಶಾಹಿ, ಕಾರ್ಪೊರೇಟ್ ಶಕ್ತಿಗಳೇ ಅನುಭವಿಸಿ ಕೊಂಡು ಬರುತ್ತಿರುವ ವ್ಯವಸ್ಥೆ ಬದಲಾಗಬೇಕು. ಆಗ ಮಾತ್ರ ನಮ್ಮ ಸಮಾನತೆ ಸಾಧ್ಯ ಎಂದರು.
ಡಾ. ಪದ್ಮಶ್ರೀ ಮಾತನಾಡಿ, ಯುವಜನರು ಸೆಲ್ ಫೋನ್ ದಾಸರಾಗಿದ್ದಾರೆ. ಸೆಲ್ ಅಂದರೆ ಜೈಲು. ಮೊಬೈಲ್ ಜೈಲಿನೊಳಗೆ ಸಿಲುಕಿದ್ದಾರೆ. ಜಿಯೋ ಕಂಪನಿ ಅವರನ್ನು ನಿಯಂತ್ರಣ ಮಾಡುತ್ತಿದೆ. ಸಮಾಜದ, ತಂದೆ, ತಾಯಿಗಳ ಮಾತುಗಳನ್ನು ಕೇಳಲಾರದಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಆದರೂ, ಕೂಡ ಸೆಲ್ ಫೋನ್ ಒಳಗಡೆ ಬರುವ ಅಹಿತಕರ ಘಟನೆಗಳಿಗೆ, ಜನವಿರೋಧಿ ನೀತಿಗಳಿಗೆ, ಬೆತ್ತಲೆ ಮೆರವಣಿಗೆ, ಅತ್ಯಾಚಾರದ ವಿರುದ್ಧ, ಬಡವರ ಶೋಷಣೆಯ ವಿರುದ್ಧ ಸೆಲ್ ಫೋನ್ನಲ್ಲಿಯೇ ಉತ್ತರ ನೀಡಬಹುದು. ಆದರೆ, ಅದನ್ನು ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಮ್ರೆಡ್ ಡಿ.ಎಸ್. ನಿರ್ವಾಣಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕೊಡಗು, ಮಲೆನಾಡಿನ ಭಾಗದ ದುಡಿಯುವ ಯುವ ಜನಾಂಗದ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಕಾರ್ಯಗಾರದ ವೇದಿಕೆಯಲ್ಲಿ ಸಿಪಿಐಎಂಎಲ್ಆರ್ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಜಗದೀಶ್, ಎಚ್.ಜೆ.ಪ್ರಕಾಶ್, ವೈ.ಪಿ.ಮೋಹನ, ಮುತ್ತಣ್ಣ ಸೌಂದರ್ಯ, ಇಂದಿರಾ ಬಾಬು ಇತರರು ಉಪಸ್ಥಿತರಿದ್ದರು.