ಪುರಸಭೆ ಸದಸ್ಯನ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಾಡಹಗಲೇ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ. ಪುರಸಭೆ ಸದಸ್ಯ ನಾಗರಾಜ ನಾಯ್ಕ ಮೇಲೆ ಸೋಮವಾರ (ನ.13) ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಪುರಸಭೆ ಸದಸ್ಯ ನಾಗರಾಜ ಮೇಲೆ ಆರೋಪಿ ಶಿವಕುಮಾರ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಇವರಿಬ್ಬರ ನಡುವೆ ಚರಂಡಿ ವಿಚಾರವಾಗಿ ವೈಶಮ್ಯ ಇತ್ತು. ಅದೇ ವೈಶಮ್ಯದ ಹಿನ್ನೆಲೆ ಹಲ್ಲೆ ನಡೆಸಿದ್ದು ತೆಲೆಗೆ, ಬೆನ್ನಿಗೆ, ಕೈಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ 11ನೇ ವಾರ್ಡ್ನ ಪುರಸಭೆ ಸದಸ್ಯರಾಗಿರುವ ನಾಗರಾಜ ನಾಯ್ಕ ಮತ್ತು ಶಿವಕುಮಾರ್ ಅವರಿಗೆ ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಅದೇ ರೀತಿ ಗಲಾಟೆ ನಡೆದಿದ್ದು ಈ ವೇಳೆ ಮಾತಿಗೆಮಾತು ಬೆಳೆದು ನಾಗರಾಜ ಮೇಲೆ ಮಚ್ಚಿನಿಂದ ಶಿವರಾಜ್ ಹಲ್ಲೆ ನಡೆಸಿದ್ದಾರೆ.
ಗಾಯಾಳು ನಾಗರಾಜ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.