ಬರಗಾಲದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿ ಅಂದಾಜು ₹2,500 ಕೋಟಿ ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ಇಷ್ಟೂ ಮೊತ್ತದ ಬರಪರಿಹಾರ ಮತ್ತು ಆ ಸಂಬಂಧಿತ ಕಾಮಗಾರಿಗಳಿಗೆ ಅನುದಾನ ಬಿಡಗುಡೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ತುಮಕೂರು ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬರ ಅಧ್ಯಯನ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ₹197.44 ಕೋಟಿ, ಪಾವಗಡದಲ್ಲಿ ₹304.77 ಕೋಟಿ, ತಿಪಟೂರಿನಲ್ಲಿ ₹160.36 ಕೋಟಿ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 190.14 ಕೋಟಿ, ತುಮಕೂರಿನಲ್ಲಿ ₹119.114 ಕೋಟಿ, ಕುಣಿಗಲ್ ತಾಲೂಕಿನಲ್ಲಿ 214.35 ಕೋಟಿ, ಮಧುಗಿರಿ ತಾಲೂಕಿನಲ್ಲಿ 211.95 ಕೋಟಿ, ಗುಬ್ಬಿ ತಾಲೂಕಿನಲ್ಲಿ 70 ಕೋಟಿ ಹಾಗೂ ತುರುವೇಕೆರೆ ತಾಲೂಕಿನಲ್ಲಿ ₹123.51 ಸೇರಿದಂತೆ ಒಟ್ಟು 1982.51 ಕೋಟಿಗಳಷ್ಟು ನಷ್ಟ ಉಂಟಾಗಿದೆ. ಸರ್ಕಾರ ನೆಪಮಾತ್ರ ಪರಿಹಾರ ನೀಡದೆ, ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರದ ಜೊತೆಗೆ, ದುಡಿಯುವ ಕೈಗಳಿಗೆ ಕೂಲಿ ದೊರೆಯಲು ಮನರೇಗಾ ಕಾಮಗಾರಿಗಳನ್ನು ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಆಂಜನಪ್ಪ ಮಾತನಾಡಿ, “ಜಿಲ್ಲೆಯಲ್ಲಿ ಸುಮಾರು ₹2000 ಕೋಟಿಗೂ ಅಧಿಕ ನಷ್ಟ ಉಂಟಾಗಿದ್ದರೂ ಕೇಂದ್ರ ಸರ್ಕಾರಕ್ಕೆ ₹112 ಕೋಟಿಗಳಷ್ಟು ಪರಿಹಾರ ಕೇಳಲಾಗಿದೆ. ಇದು ಅತ್ಯಂತ ಅವೈಜ್ಞಾನಿಕ. ಅಧಿಕಾರಿಗಳು ನೀಡಿದ ಅಂಕಿ ಅಂಶವನ್ನೇ ಶಾಸಕರು, ಸಚಿವರುಗಳು ಪರಾಮರ್ಶಿಸದೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಹಾಗಾಗಿ ಸರ್ಕಾರ ಕೂಡಲೇ ತನ್ನ ಸಚಿವರು, ಶಾಸಕರ ಮೂಲಕ ಮತ್ತೊಂದು ವರದಿಯನ್ನು ತರಿಸಿಕೊಂಡು ಕೇಂದ್ರಕ್ಕೆ ಬದಲಿ ಪ್ರಸ್ತಾವನೆ ಸಲ್ಲಿಸಬೇಕು” ಎಂದು ಮನವಿ ಮಾಡಿದರು.
ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ, “ರಾಜ್ಯ ಸರ್ಕಾರ ಬರ ಪರಿಹಾರದ ವಿಚಾರದಲ್ಲಿ ಕೇಂದ್ರದ ಕಡೆ ಮುಖ ಮಾಡಿ ಕುಳಿತಿದೆ. ಬರದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಸಾಕಷ್ಟು ಹೆಚ್ಚಳವಾಗಿದ್ದರೂ ಗ್ರಾಮೀಣ ಉದ್ಯೋಗದ ಕೂಲಿ ಹೆಚ್ಚಳ ಮಾಡಿಲ್ಲ. ಈಗ ನೀಡುತ್ತಿರುವ ₹330ರಷ್ಟು ಕೂಲಿಗೆ ಆಳುಗಳ ಸಿಗುವುದು ಕಷ್ಟ. ಹಾಗಾಗಿ ಕೂಲಿಯನ್ನು ಹೆಚ್ಚಳ ಮಾಡಬೇಕು. ಹಾಗೆಯೇ ಗ್ಯಾರಂಟಿಗಳನ್ನು ಬದಿಗಿಟ್ಟು ಜನರ ಸಂಕಷ್ಟಕ್ಕೆ ಸ್ಫಂದಿಸಬೇಕು. ಕೊಬ್ಬರಿಗೆ ಘೋಷಣೆ ಮಾಡಿದ್ದ ₹1250 ಪ್ರೋತ್ಸಾಹ ಧನ ಈವರೆಗೆ ಒಬ್ಬ ರೈತರಿಗೂ ತಲುಪಿಲ್ಲ. ಇದೊಂದು ಮೋಸದ ಘೋಷಣೆಯಾಗಿದೆ” ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, “ಬರಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ₹34 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಇದರಲ್ಲಿ ಮೊದಲು ಮೇವಿನ ಬೆಳೆಗೆ ಅದ್ಯತೆ ನೀಡಿ, ಒಂದು ತಾಲೂಕಿಗೆ 100 ಮಂದಿ ನೀರಾವರಿ ಇರುವ ರೈತರನ್ನು ಗುರುತಿಸಿ, ಅವರಿಗೆ ಮೇವಿನ ಕಿಟ್ ವಿತರಿಸಲಾಗಿದೆ. ಅಲ್ಲದೆ ಎಲ್ಲ ಆರ್ಓ ಪ್ಲಾಂಟ್ಗಳ ರಿಪೇರಿಗೆ ಸೂಚನೆ ನೀಡಲಾಗಿದೆ. ಮನರೇಗಾ ಮೂಲಕ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ” ಎಂದು ಜೆಡಿಎಸ್ ಮುಖಂಡರಿಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಗೌರಿಶಂಕರ್ ಸೇರ್ಪಡೆ ಬಗ್ಗೆ ನನಗಾಗಲಿ, ಪರಮೇಶ್ವರ್ಗಾಗಲಿ ಮಾಹಿತಿ ಇಲ್ಲ: ಕೆ ಎನ್ ರಾಜಣ್ಣ
ಈ ವೇಳೆ ಮಾಜಿ ಶಾಸಕ ಸುಧಾಕರ್ಲಾಲ್, ಕೆ ಎಂ ತಿಮ್ಮರಾಯಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಟಿ ಆರ್ ನಾಗರಾಜು, ಪಾಲಿಕೆ ಉಪಮೇಯರ್ ಟಿ ಕೆ ನರಸಿಂಹಮೂರ್ತಿ, ಸದಸ್ಯರುಗಳಾದ ಹೆಚ್ ಡಿ ಕೆ ಮಂಜುನಾಥ, ಧರಣೇಂದ್ರಕುಮಾರ್, ಎ ಶ್ರೀನಿವಾಸ್, ಮುಖಂಡರುಗಳಾದ ಕೆ ಟಿ ಶಾಂತರಾಜು, ರಂಗನಾಥ್, ಹೆಚ್ ಟಿ ಬಾಲಕೃಷ್ಣ, ಮುದಿಮಡು ರಂಗಸ್ವಾಮಿ, ನಗರ ಅಧ್ಯಕ್ಷ ವಿಜಯಗೌಡ, ಮೆಡಿಕಲ್ ಮಧು, ತಾಹೀರಾ ಭಾನು, ಲೀಲಾವತಿ ಸೇರಿದಂತೆ ಇತರರು ಇದ್ದರು.