ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಬರಗಾಲ ಎದುರಾಗಿದೆ. ಜಮೀನು ಇದ್ದ ರೈತರೇ ಕೆಲಸವಿಲ್ಲದೆ ಖಾಲಿ ಇದ್ದು, ಕೃಷಿ ಕಾರ್ಮಿಕರ ಸ್ಥಿತಿ ಇನ್ನೂ ಹೀನಾಯ ಸ್ಥಿತಿ ತಲುಪಿದ್ದು, ಅದೆಷ್ಟೋ ಬಡ ಕೃಷಿ ಕಾರ್ಮಿಕರು ಕೆಲಸ ಅರಸಿ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಗುಳೆ ಹೋಗುತ್ತಿದ್ದಾರೆ.
ಹೀಗೆ ಕುಟುಂಬ ಸಮೇತ ಗುಳೆ ಹೋಗುತ್ತಿರುವುದರಿಂದ ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅದರಲ್ಲೂ ಚಿಕ್ಕೋಡಿ ಉಪವಿಭಾಗ ಮಹಾರಾಷ್ಟ್ರ ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಜಿಲ್ಲೆ. ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ಭಾಗದಲ್ಲಿ ಅದೆಷ್ಟೋ ಜನ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.
ಅಲ್ಲದೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಕಬ್ಬು ಕಟಾವು ಮಾಡಲು ಹಲವು ಕೃಷಿ ಕಾರ್ಮಿಕರು ತೆರಳುತ್ತಿದ್ದಾರೆ. ಮಹಾರಾಷ್ಟ್ರದ ಅದೆಷ್ಟೋ ಕಾರ್ಮಿಕರು ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಆಗಮಿಸುತ್ತಿದ್ದಾರೆ. ಹೀಗೆ ಕಬ್ಬು ಕಟಾವು ಮಾಡಲು ಆಗಮಿಸುವ ಕಾರ್ಮಿಕರು ತಮ್ಮ ಜೊತೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತಿದೆ. ಹಲವಾರು ವಿದ್ಯಾರ್ಥಿಗಳು ಶಾಲೆಗೆ ಬರದೇ ಇರಲು ಇದೂ ಒಂದು ಕಾರಣ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ. ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಯೋಜನಾ ಆಯೋಗದ ನಿರ್ದೇಶಕರ ನಿರ್ದೇಶನದಂತೆ ಶಾಲೆಯಿಂದ ದೂರ ಉಳಿದ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳ ಸಮೀಕ್ಷೆ ಕಾರ್ಯ ಮಾಡಲಾಗುತ್ತಿದೆ.
ಆರುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದು, 503 ವಿದ್ಯಾರ್ಥಿಗಳಲ್ಲಿ 373 ವಿದ್ಯಾರ್ಥಿಗಳು, ಬೇರೆ ಬೇರೆ ರಾಜ್ಯಗಳ ಶಾಲೆಗಳಲ್ಲಿ ಹಾಜರಾಗಿದ್ದಾರೆ. ಸ್ಟೂಡೆಂಟ್ ಅಟೆಂಡೆನ್ಸ್ ರ್ಯಾಂಕಿಂಗ್ ಸಿಸ್ಟಮ್ ಮೂಲಕ ವಿದ್ಯಾರ್ಥಿಗಳಿಗೆ ಒಂದು ನಂಬರ್ ನೀಡಿ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ ಇದೆ. ನಮ್ಮ ರಾಜ್ಯಗಳಲ್ಲಿ ಇರುವ ವಿದ್ಯಾರ್ಥಿಗಳ ಟ್ರ್ಯಾಕಿಂಗ್ ವಿವರ ದೊರೆತಿದೆ. ಆದರೆ, ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಇಲ್ಲದೇ ಇರೋದ್ರಿಂದ ನಮಗೆ ಅಪ್ಡೇಟ್ ಮಾಡಲು ಸಮಸ್ಯೆ ಆಗಿದೆ ಎಂದಿದ್ದಾರೆ.
ರಾಜ್ಯ ಕಚೇರಿಗೆ ಪತ್ರ ಬರೆದು 373 ವಿದ್ಯಾರ್ಥಿಗಳು ಯಾವ ರಾಜ್ಯಗಳ ಶಾಲೆಗಳಲ್ಲಿ ಹಾಜರಾಗಿದ್ದಾರೆ ಎಂಬ ವಿವರ ಪಡೆದಿದ್ದಾರೆ. 130 ಮಕ್ಕಳ ಬಗ್ಗೆ ಮಾಹಿತಿ ಇಲ್ಲ, ಅದನ್ನು ಸಮೀಕ್ಷೆ ಮಾಡಿ ಆ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರಲು ಶ್ರಮ ವಹಿಸುತ್ತೇವೆ. ಏಳು ದಿನಕ್ಕಿಂತ ಹೆಚ್ಚು ದಿನ ಗೈರಾದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದು ಮುಖ್ಯವಾಹಿನಿಗೆ ತರಲು ಕ್ರಮ ವಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೇರೆ ರಾಜ್ಯಗಳಿಗೆ ಕುಟುಂಬ ಸಮೇತ ದುಡಿಯಲು ಹೋಗುತ್ತಿರುವುದರಿಂದ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಮಕ್ಕಳನ್ನು ಕರೆದುಕೊಂಡು ಹೋಗುವ ಮೊದಲು ನಮ್ಮ ರಾಜ್ಯಗಳಲ್ಲಿ ವಸತಿ ಶಾಲೆ ಇವೆ. ಅಲ್ಲಿ ಇರಲು ನಾವು ವ್ಯವಸ್ಥೆ ಮಾಡುತ್ತೇವೆ. ಅಂತಹ ಪಾಲಕರು ನಮ್ಮನ್ನ ಸಂಪರ್ಕಿಸಿದರೆ ಅವರ ಶಿಕ್ಷಣ ಮುಂದುವರಿಸಲು ಕ್ರಮ ವಹಿಸುತ್ತೇವೆ. ಈ ಪೈಕಿ ಶಾಲೆಯಿಂದ ದೂರ ಉಳಿದ 130 ಮಕ್ಕಳ ಮಾಹಿತಿ ಪಡೆಯುತ್ತಿದ್ದೇವೆ. ಮಕ್ಕಳನ್ನು ಕರೆದುಕೊಂಡು ಪಾಲಕರು ಬೇರೆ ರಾಜ್ಯಗಳಿಗೆ ದುಡಿಯಲು ಹೋಗುತ್ತಿದ್ದಾರೆ. ಕುಟುಂಬ ಸಮೇತ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗೆ ಹೋಗುವ ಪಾಲಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಲ್ಲಿ ಇರಿಸುವಂತೆ ಅವರು ಮನವಿ ಮಾಡಿದ್ದಾರೆ.
ಭೀಕರ ಬರಗಾಲದಿಂದ ರೈತರು ಅಷ್ಟೇ ಅಲ್ಲ ಕೃಷಿ ಕಾರ್ಮಿಕರು ಸೇರಿದಂತೆ ಹಲವರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಕೇವಲ ಬರಪೀಡಿತ ತಾಲೂಕು ಘೋಷಿಸಿರುವ ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.